ಮನೋರಂಜನೆ

2ನೇ ಪತ್ನಿ ಪರ ನಿಂತ ದುನಿಯಾ ವಿಜಿ

Pinterest LinkedIn Tumblr


ಬೆಂಗಳೂರು: ಹಲ್ಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ದುನಿಯಾ ವಿಜಿ ಅವರು ತಮ್ಮಿಬ್ಬರು ಹೆಂಡತಿಯರ ಜಡೆಜಗಳದಲ್ಲಿ ನಿರೀಕ್ಷೆಯಂತೆ ಎರಡನೇ ಪತ್ನಿಯ ಪರ ಬ್ಯಾಟ್ ಬೀಸುತ್ತಿದ್ದಾರೆ. ಕೀರ್ತಿಗೌಡಳ ಮೇಲೆ ನಾಗರತ್ನ ಹಲ್ಲೆ ಮಾಡಿದ್ದಾಳೆ. ಕೀರ್ತಿಗೆ ಏನಾದರೂ ಹೆಚ್ಚೂಕಡಿಮೆ ಆದರೆ ನಾಗರತ್ನಳೇ ಹೊಣೆ. ನಾಗರತ್ನಳಿಂದ ಜೀವಕ್ಕೆ ಅಪಾಯವಿರುವ ಹಿನ್ನೆಲೆಯಲ್ಲಿ ಕೀರ್ತಿಗೌಡಗೆ ಸೂಕ್ತ ಭದ್ರತೆ ಕೊಡಿ ಎಂದು ದುನಿಯಾ ವಿಜಿ ಪೊಲೀಸರಿಗೆ ಮನವಿ ಮಾಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿಂದಲೇ ದುನಿಯಾ ವಿಜಿ ಈ ಬಗ್ಗೆ ಗಿರಿನಗರ ಪೊಲೀಸ್ ಠಾಣೆಗೆ ಪತ್ರ ಬರೆದು ಎರಡನೇ ಪತ್ನಿಗೆ ಭದ್ರತೆ ಒದಗಿಸುವಂತೆ ಕೋರಿದ್ದಾರೆ.

ಸೆಪ್ಟೆಂಬರ್ 23ರಂದು ನಾಗರತ್ನ ನನ್ನ ಪತ್ನಿ ಕೀರ್ತಿಯವರ ಮೇಲೆ ಹಲ್ಲೆ ನಡೆಸಿರುತ್ತಾರೆ. ಇದರಿಂದ ಕೀರ್ತಿ ಭಯಭೀತರಾಗಿರುತ್ತಾರೆ… ನೀನು ಮತ್ತೆ ಮನೆಗೆ ಬಂದರೆ ಒಂದು ಗತಿ ಕಾಣಿಸುತ್ತೇನೆ ಎಂದು ಕೀರ್ತಿ ಮೇಲೆ ಧಮ್ಕಿ ಹಾಕಿರುತ್ತಾರೆ…. ನನ್ನ ಪತ್ನಿ ಕೀರ್ತಿಯವರು ಮಾನಸಿಕ ಕಿರುಕುಳದಿಂದ ನೊಂದಿದ್ದು, ಮತ್ತೆ ಈ ರೀತಿಯ ಘಟನೆ ಜರುಗಿದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿರುತ್ತಾರೆ…. ಕೀರ್ತಿಗೆ ತೊಂದರೆಯಾದಲ್ಲಿ ನಾಗರತ್ನರವರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ದುನಿಯಾ ವಿಜಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಸೆ. 23ರಂದು ಜಿಮ್ ಟ್ರೈನರ್ ಮಾರುತಿಗೌಡರನ್ನು ಕಿಡ್ನಾಪ್ ಮಾಡಿ ಹಲ್ಲೆ ಎಸಗಿದ ಆರೋಪದ ಮೇಲೆ ದುನಿಯಾ ವಿಜಿ ಸೇರಿದಂತೆ ಮೂವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿನಲ್ಲಿಡಲಾಗಿದೆ. ದುನಿಯಾ ವಿಜಿ ಅಲಿಯಾಸ್ ಬಿ.ಆರ್. ವಿಜಯ್ ಕುಮಾರ್ ಅವರು ತಮ್ಮ ಮಾಜಿ ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ ಮೇಲಿನ ಧ್ವೇಷದಿಂದ ಈ ಕೃತ್ಯ ಎಸಗಿರುವ ಒಂದು ಆರೋಪವಿದೆ. ವಸಂತನಗರದ ಅಂಬೇಡ್ಕರ್ ಭವನದಲ್ಲಿ ನಡೆದ ದೇಹದಾರ್ಡ್ಯ ಸ್ಪರ್ಧೆಯ ಕಾರ್ಯಕ್ರಮದಲ್ಲಿ ದುನಿಯಾ ವಿಜಿ ತನ್ನ ಮಗನ ಜೊತೆ ಹೋದಾಗ ಈ ಘಟನೆ ನಡೆದಿತ್ತೆನ್ನಲಾಗಿದೆ. ದುನಿಯಾ ವಿಜಿ ಜೈಲಿಗೆ ಹೋದ ಅಂದೇ ಅವರ ಮೊದಲ ಪತ್ನಿ ನಾಗರತ್ನ ಅವರು ಕೀರ್ತಿಗೌಡರ ಮನೆಗೆ ಹೋಗಿದ್ದರೆನ್ನಲಾಗಿದೆ. ಮಗನ ಬಗ್ಗೆ ವಿಚಾರಿಸಿದ್ದಕ್ಕೆ ಕೀರ್ತಿಗೌಡ ಬೌನ್ಸರ್​ಗಳಿಂದ ತನ್ನ ಮೇಲೆ ಹಲ್ಲೆ ನಡೆಸಿದರೆಂದು ಆರೋಪಿಸಿ ನಾಗರತ್ನ ಅವರು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ಕೊಡುತ್ತಾರೆ. ನಾಗರತ್ನರೇ ತನ್ನ ಮನೆಗೆ ಬಂದು ತನ್ನ ಮೇಲೆ ಹಲ್ಲೆ ಮಾಡಿದರೆಂದು ಕೀರ್ತಿಗೌಡ ಪ್ರತ್ಯಾರೋಪ ಮಾಡುತ್ತಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಕಸ್ಟಡಿಯಲ್ಲಿರುವ ದುನಿಯಾ ವಿಜಿ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ಸೋಮವಾರ ನಡೆಯಲಿದೆ. 8ನೇ ಎಸಿಎಂಎಂ ನ್ಯಾಯಾಲಯವು ಮೂವರು ಆರೋಪಿಗಳಿಗೆ ಜಾಮೀನು ಕೊಡುತ್ತದಾ ಅಥವಾ ಇನ್ನಷ್ಟು ದಿನ ಕಸ್ಟಡಿಯಲ್ಲಿಡಲು ನಿರ್ಧರಿಸುತ್ತದಾ ಎಂಬುದು ನಾಳೆ ಗೊತ್ತಾಗಲಿದೆ.

Comments are closed.