ಕರಾವಳಿ

ಕೋಡಿಯಲ್ಲಿ ಅಲೆಗಳಬ್ಬರದಿಂದ ಸಮುದ್ರ ಪಾಲಾದ ವಿದ್ಯಾರ್ಥಿ ಮೃತದೇಹ ಪತ್ತೆ

Pinterest LinkedIn Tumblr

ಕುಂದಾಪುರ: ಭಾನುವಾರದ ರಜಾ ದಿನ ಮೀನುಗಾರಿಕೆಯಲ್ಲಿ ನಿರತರಾದ ತಂದೆಯೊಂದಿಗೆ ಸಮುದ್ರ ತೀರದಲ್ಲಿ ಬಲೆ ಹಾಕುತ್ತಿರುವಾಗ ದೈತ್ಯ ಅಲೆಯ ರಭಸಕ್ಕೆ ಕೊಚ್ಚಿ ಸಮುದ್ರ ಪಾಲಾದ ಮನೋಜ ಪೂಜಾರಿ (18) ಮೃತದೇಹ ಇಂದು ಕೋಡಿ-ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಪತ್ತೆಯಾಗಿದೆ.

ಭಾನುವಾರ ಮದ್ಯಾಹ್ನ ತನ್ನ ತಂದೆ ಮಂಜುನಾಥ್ ಪೂಜಾರಿ ಬಲೆ ಬೀಸಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅವರಿಗೆ ಸಹಕರಿಸುತ್ತಿದ್ದ ಮನೋಜ್ ದೈತ್ಯ ಅಲೆಯ ಅಬ್ಬರಕ್ಕೆ ಕೊಚ್ಚಿ ಹೋಗಿದ್ದು ಈ ವೇಳೆ ರಕ್ಷಣೆ ಪ್ರಯತ್ನ ಮಾಡಿದರೂ ಕೂಡ ಅಸಾಧ್ಯವಾಗಿತ್ತು. ಕೂಡಲೇ ತಡಮಾಡದೇ ಹತ್ತಾರು ದೋಣಿ ಬಳಸಿ ಹುಡುಕಾಟ ನಡೆಸಲಾಗಿತ್ತು. ಅಲ್ಲದೇ ಕೈರಂಪಣಿ ಬಲೆ ಬಳಸಿ ಸ್ಥಳಿಯ ನೂರಾರು ಮಂದಿ ಮೀನುಗಾರರು ಹುಡುಕಾಡಿದ್ದರೂ ಮನೋಜ್ ಪತ್ತೆಯಾಗಿರಲಿಲ್ಲ. ನಿನ್ನೆ ರಾತ್ರಿಯವರೆಗೂ ಹುಡುಕಾಟ ನಡೆದಿದ್ದು ಇಂದೂ ಕೂಡ ಮುಂದುವರೆದಿತ್ತು.

ದೋಣಿ, ಬೋಟ್ ಮೂಲಕ ಹುಡುಕಾಟ ನಡೆಸುತ್ತಿರುವಾಗ ಸಂಜೆ ಸುಮಾರಿಗೆ ಗಂಗೊಳ್ಳಿ-ಕೋಡಿ ಅಳಿವೆ ಬಾಗಿಲು ಪ್ರದೇಶದಲ್ಲಿ ಮನೋಜ್ ಮೃತದೇಹ ಪತ್ತೆಯಾಗಿದ್ದು ಶವವನ್ನು ದಡಕ್ಕೆ ತಂದು ಸದ್ಯ ಕುಂದಾಪುರ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಕುಂದಾಪುರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.