ಹೊಸದಿಲ್ಲಿ: ಖಾಸಗಿ ಕಂಪನಿಗಳು ಸೇವೆ ಒದಗಿಸಲು ಆಧಾರ್ ಬಳಸಿಕೊಳ್ಳುವಂತಿಲ್ಲ ಎಂಬ ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ಆಧಾರ್ ಪ್ರಾಧಿಕಾರ ಯುಐಡಿಎಐ ಸೋಮವಾರ ಟೆಲಿಕಾಂ ಕಂಪನಿಗಳಿಗೆ ಸುತ್ತೋಲೆ ಕಳುಹಿಸಿದ್ದು, ಆಧಾರ್ ಡಿಲಿಂಕ್ ಮಾಡಲು ಕೈಗೊಂಡ ಕ್ರಮಗಳೇನು ಎಂಬ ಬಗ್ಗೆ ಮುಂದಿನ 15 ದಿನದೊಳಗಾಗಿ ಉತ್ತರಿಸುವಂತೆ ಸೂಚಿಸಿದೆ.
ಭಾರ್ತಿ ಏರ್ಟೆಲ್, ರಿಲಯನ್ಸ್ ಜಿಯೋ, ವೊಡಾಫೋನ್ ಐಡಿಯಾ ಮತ್ತು ಇತರ ಎಲ್ಲ ಟೆಲಿಕಾಂ ಸೇವಾದಾರ ಕಂಪನಿಗಳಿಗೆ ಸೂಚನೆ ನೀಡಲಾಗಿದ್ದು, ಸುಪ್ರೀಂಕೋರ್ಟ್ ಸೂಚನೆಯಂತೆ ಆಧಾರ್ ಬಳಕೆ ಬಿಟ್ಟುಬಿಡಲು ಯಾವ ಕ್ರಮ ಕೈಗೊಳ್ಳಲಾಯಿತು ಎಂದು ಉತ್ತರಿಸಬೇಕಿದೆ.
ಜತೆಗೆ ಆಧಾರ್ ಹೊರತಾಗಿ ಇನ್ನು ಕಂಪನಿಗಳು ಈ ಹಿಂದೆ ಅನುಸರಿಸುತ್ತಿದ್ದ ಕ್ರಮದ ಮೊರೆಹೋಗಬೇಕಿದ್ದು, ಗ್ರಾಹಕರ ಫೋಟೋ, ಅರ್ಜಿ ಫಾರಂ, ಸಹಿ ಪಡೆದುಕೊಂಡು ಸಿಮ್ ಕಾರ್ಡ್ ವಿತರಿಸಬೇಕಿದೆ.
ಆಧಾರ್ ಪ್ರಾಧಿಕಾರದ ಸೂಚನೆಯಂತೆ ಟೆಲಿಕಾಂ ಸೇವಾದಾರ ಕಂಪನಿಗಳು ನಿಯಮಗಳನ್ನು ಪಾಲಿಸಬೇಕಿದ್ದು, ಸಿಮ್ ನೀಡಲು ಆಧಾರ್ಗಾಗಿ ಪೀಡಿಸುವಂತಿಲ್ಲ.
ಕಳೆದ ವಾರ ಆಧಾರ್ ಸಾಂವಿಧಾನಿಕ ಮಾನ್ಯತೆ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ನೀಡಿ ಆಧಾರ್ ಕಾಯ್ದೆಯ ಸೆ. 57 ಅನ್ನು ರದ್ದುಪಡಿಸಿತ್ತು. ಇದರಿಂದ ಖಾಸಗಿ ಸಂಸ್ಥೆಗಳು ಆಧಾರ್ ಅನ್ನು ಬಳಸಲು ನಿರ್ಭಂದ ಹೇರಲಾಗಿತ್ತು.
Comments are closed.