ರಾಷ್ಟ್ರೀಯ

ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ನಿವೃತ್ತಿ

Pinterest LinkedIn Tumblr


ನವದೆಹಲಿ: ಕಳೆದ ವಾರ ಸುಪ್ರೀಂಕೋರ್ಟ್​ ಪಾಲಿಗೆ ಬಿಡುವಿಲ್ಲದ ವಾರ. ದಿನಕ್ಕೊಂದರಂತೆ ಪ್ರಮುಖ ತೀರ್ಪುಗಳನ್ನು ನೀಡುವ ಮೂಲಕ ಹಲವು ಐತಿಹಾಸಿಕ ಪ್ರಕರಣಗಳಿಗೂ ಮುಕ್ತಿ ಕೊಟ್ಟಿದ್ದ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ಅವರ ಅಧಿಕಾರಾವಧಿಯ ಕೊನೆಯ ದಿನವಿದು.

1977ರಿಂದ ವಕೀಲಿ ವೃತ್ತಿ ಆರಂಭಿಸಿದ ದೀಪಕ್​ ಮಿಶ್ರಾ ಇಂದು ಸಂಜೆ ನಿವೃತ್ತಿ ಪಡೆದಿದ್ದಾರೆ. ಅ. 3ರಿಂದ ರಂಜನ್​ ಗೊಗೋಯ್​ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹಾಗಾಗಿ, ಇಂದು ಸಹಜವಾಗಿಯೇ ಮಿಶ್ರಾ ಕೊಂಚ ಭಾವುಕರಾಗಿದ್ದರು. ಬರೋಬ್ಬರಿ 41 ವರ್ಷಗಳ ಕಾಲ ಕರಿಕೋಟಿನ ಸಖ್ಯ ಹೊಂದಿದ್ದ ಅವರಿಗೆ ಇಂದು ಸುಪ್ರೀಂಕೋರ್ಟ್​ನಲ್ಲಿ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.

ಕಳೆದ ಆಗಸ್ಟ್​ನಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ಮಿಶ್ರಾ ನೀಡಿದ ತೀರ್ಪುಗಳಲ್ಲಿ ಶಬರಿ ಮಲೆಗೆ ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ, ವಿವಾಹಿತ ಮಹಿಳೆ ಪರಪುರುಷನೊಂದಿಗೆ ಸಂಬಂಧ ಹೊಂದುವುದು ತಪ್ಪಲ್ಲ, ಸಲಿಂಗಪ್ರೇಮ ಅಪರಾಧವಲ್ಲ, ಆಧಾರ್​ ಸಡಿಲಗೊಳಿಸುವಿಕೆಯ ತೀರ್ಪುಗಳು ಮಹತ್ವದ್ದು. ಐತಿಹಾಸಿಕ ತೀರ್ಪುಗಳಿಂದ ಜನಮನ್ನಣೆ ಗಳಿಸಿದ್ದ ದೀಪಕ್​ ಮಿಶ್ರಾ ಹಲವು ವಿವಾದಗಳಿಗೂ ಸಿಲುಕಿದ್ದರು. ಕಳೆದ ಜನವರಿಯಲ್ಲಿ ಸುಪ್ರೀಂಕೋರ್ಟ್​ನ ನಾಲ್ವರು ನ್ಯಾಯಮೂರ್ತಿಗಳು ಬಹಿರಂಗವಾಗಿ ಪತ್ರಿಕಾಗೋಷ್ಠಿ ನಡೆಸಿ ದೀಪಕ್​ ಮಿಶ್ರಾ ವಿರುದ್ಧ ಆರೋಪ ಮಾಡಿದ್ದು ಸುಪ್ರೀಂಕೋರ್ಟ್​ ಇತಿಹಾಸದಲ್ಲಿ ಹೊಸ ಮುನ್ನುಡಿ ಬರೆದಿತ್ತು. ಪ್ರಕರಣಗಳನ್ನು ಹಂಚುವಾಗ ತಾರತಮ್ಯ ಮಾಡುತ್ತಾರೆ ಎಂಬ ಆರೋಪವನ್ನು ಅವರ ಮೇಲೆ ಮಾಡಲಾಗಿತ್ತು.

ನ್ಯಾ. ದೀಪಕ್​ ಮಿಶ್ರಾ ಅವರ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದವರಲ್ಲಿ ರಂಜನ್​ ಗೊಗಾಯ್​ ಕೂಡ ಇದ್ದಿದ್ದರಿಂದ ಹಾಗೂ ಇಬ್ಬರಿಗೂ ಅನೇಕ ಖಾಸಗಿ ಭಿನ್ನಾಭಿಪ್ರಾಯಗಳು ಇದ್ದ ಕಾರಣದಿಂದ ಅವರ ನಿವೃತ್ತಿಯ ನಂತರ ರಂಜನ್​ ಗೊಗೋಯ್​ ಅವರನ್ನು ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲು ಶಿಫಾರಸು ಮಾಡುತ್ತಾರಾ? ಇಲ್ಲವಾ? ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿತ್ತು. ಆದರೆ, ಗೊಗೋಯ್​ ಅವರ ಹೆಸರನ್ನು ಶಿಫಾರಸು ಮಾಡಿರುವ ಮಿಶ್ರಾ ಇಂದು ತಮ್ಮ ಸ್ಥಾನದಿಂದ ನಿವೃತ್ತಿ ಪಡೆದಿದ್ದಾರೆ.

ಕೊನೆಯ ದಿನ ಹೇಗಿತ್ತು?

ಮುಂದಿನ ಸಿಜೆ ರಂಜನ್​ ಗೊಗೋಯ್​ ಅವರೊಂದಿಗೆ ಇಂದು ಸುಪ್ರೀಂಕೋರ್ಟ್​ಗೆ ಆಗಮಿಸಿದ ದೀಪಕ್​ ಮಿಶ್ರಾ ಕೋರ್ಟ್​ ಆವರಣದಲ್ಲಿ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾವುಕರಾದಂತೆ ಕಂಡುಬಂದರು. ಇಂದು ಬೆಳಗ್ಗೆ ಮಿಶ್ರಾ ಅವರ ನಿವೃತ್ತಿ ಜೀವನ ಸಂತೋಷದಿಂದ ಕೂಡಿರಲೆಂದು ಹಾರೈಸಿ ವಕೀಲರೊಬ್ಬರು ಹಿಂದಿ ಸಿನಿಮಾದ ‘ತುಮ್​ ಜಿಯೋ ಹಜಾರೋಂ ಸಾಲ್​’ ಹಾಡು ಹಾಡಲಾರಂಭಿಸಿದರು. ಅವರನ್ನು ಅರ್ಧಕ್ಕೆ ತಡೆದ ದೀಪಕ್​ ಮಿಶ್ರಾ, ‘ಈಗ ನಾನು ನನ್ನ ಹೃದಯಾಂತರಾಳದಿಂದ ಪ್ರತಿಕ್ರಿಯೆ ನೀಡುತ್ತಿದ್ದೇನೆ. ಸಂಜೆ ನಾನು ನನ್ನ ಮನಸಿನಿಂದ ಪ್ರತಿಕ್ರಿಯೆ ನೀಡುತ್ತೇನೆ’ ಎಂದು ಭಾವುಕರಾದರು.

Comments are closed.