ರಾಷ್ಟ್ರೀಯ

ಕೋಲ್ಕೊತಾದಲ್ಲಿ ಬಾಂಬ್‌ ಸ್ಫೋಟಕ್ಕೆ ಬಾಲಕ ಬಲಿ

Pinterest LinkedIn Tumblr


ಕೋಲ್ಕೊತಾ: ವಿಶ್ವಕ್ಕೆ ಅಹಿಂಸೆಯ ತತ್ವ ಸಾರಿದ ಗಾಂಧೀಜಿ ಜನ್ಮದಿನದಂದೇ ಕೋಲ್ಕೊತಾದ ಜನನಿಬಿಡ ನಗರ್‌ಬಜಾರ್‌ ಪ್ರದೇಶದಲ್ಲಿ ನಾಡ ಬಾಂಬ್‌ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ 8 ವರ್ಷದ ಬಾಲಕಿ ಬಿಬಾಷಾ ಘೋಷ್‌ ಮೃತಪಟ್ಟು 9 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆರ್‌.ಜಿ. ಕರ್‌ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐವರ ಸ್ಥಿತಿ ಚಿಂತಾಜನಕವಾಗಿದೆ.

ಈ ಘಟನೆಯ ಬೆನ್ನಲ್ಲೇ ಆಡಳಿತಾರೂಢ ಟಿಎಂಸಿಯು ಸ್ಫೋಟದ ಹಿಂದೆ ಬಿಜೆಪಿ ಕೈವಾಡವಿದೆ ಎಂದು ದೂರಿದ್ದು, ರಾಜಕೀಯ ಸ್ವರೂಪ ಪಡೆದಿದೆ. ಆದರೆ ಬಿಜೆಪಿ ಇದೊಂದು ಅರ್ಥಹೀನ ಹೇಳಿಕೆ ಎಂದು ಜರಿದಿದೆ.

ಮೊದಲಿಗೆ ಇದನ್ನು ಸಿಲಿಂಡರ್‌ ಸ್ಫೋಟ ಎಂದು ಹೇಳಲಾಗಿತ್ತು. ಆದರೆ ಪ್ರಾಥಮಿಕ ತನಿಖೆಯಿಂದ ನಾಡ ಬಾಂಬ್‌ ಎನ್ನುವುದು ತಿಳಿದುಬಂತು. ಸಿಐಡಿ ಬಾಂಬ್‌ ನಿಷ್ಕ್ರಿಯ ದಳವು ಸ್ಥಳ ಪರಿಶೀಲನೆ ನಡೆಸಿದ್ದು, ಬಾಂಬ್‌ನಲ್ಲಿ ಅಮೋನಿಯಂ ನೈಟ್ರೇಟ್‌ ಹಾಗೂ ಲೋಹದ ತುಣುಕುಗಳನ್ನು ಬಳಸಿರುವುದು ಪತ್ತೆಯಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡವು ಶ್ವಾನಗಳೊಂದಿಗೆ ಸ್ಥಳ ಪರಿಶೀಲನೆ ನಡೆಸುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಟಿಎಂಸಿ ಆರೋಪ: ಘಟನಾ ಸ್ಥಳವು ದಕ್ಷಿಣ ಡಂಡಂ ನಗರಸಭೆ ಅಧ್ಯಕ್ಷ ಮತ್ತು ಟಿಎಂಸಿ ನಾಯಕ ಪಂಚು ರಾಯ್‌ ಅವರ ಕಚೇರಿ ಸಮೀಪವಿದೆ. ಅವರನ್ನು ಗುರಿಯಾಗಿಸಿಕೊಂಡು ಈ ಬಾಂಬ್‌ ಸ್ಫೋಟಿಸಲಾಗಿದ್ದು, ಇದರ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಸಚಿವ ಜ್ಯೋತಿಪ್ರಿಯೊ ಮುಲಿಕ್‌ ಆರೋಪಿಸಿದ್ದಾರೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ದಿಲಿಪ್‌ ಘೋಷ್‌ ಅವರು, ”ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ರಾಜ್ಯದಲ್ಲಿ ನಡೆಯುವ ಪ್ರತಿಯೊಂದು ದುಷ್ಕೃತ್ಯವನ್ನೂ ಬಿಜೆಪಿ ಜತೆ ತಳುಕು ಹಾಕುವುದು ಟಿಎಂಸಿಗೆ ಚಾಳಿಯಾಗಿದೆ,” ಎಂದು ತಿರುಗೇಟು ನೀಡಿದ್ದಾರೆ.

Comments are closed.