ಕುಂದಾಪುರ: ಸಂಬಂಧಿಯಾಗಿದ್ದವನೇ ಮನೆಯಲ್ಲಿ ಯಾರಿಲ್ಲದ ವೇಳೆ ಬಲತ್ಕಾರ ನಡೆಸಿ ಗಂಡು ಮಗುವಿನ ಜನನಕ್ಕೆ ಕಾರಣವಾಗಿದ್ದಲ್ಲದೇ ಸಂತ್ರಸ್ತ ಯುವತಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ದೋಷಿಯೆಂದು ಮಹತ್ವದ ತೀರ್ಪು ನೀಡಿ ಆದೇಶಿಸಿದೆ. ಕುಂದಾಪುರದಲ್ಲಿನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾದೀಶ ಪ್ರಕಾಶ ಖಂಡೇರಿ ಈ ತೀರ್ಪು ನೀಡಿದ್ದು ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.
2010 ಮಾರ್ಚ್ 10ರಂದು ಬೈಂದೂರು ತಾಲೂಕು ಕಾಲ್ತೋಡು ಗ್ರಾಮದಲ್ಲಿನ ತನ್ನ ನಿವಾಸದಲ್ಲಿ ಸಂತ್ರಸ್ತ ಯುವತಿಯೊಬ್ಬಳೇ ಇದ್ದ ಸಂದರ್ಭ ಆಕೆ ಮಾವನ ಮಗನಾದ ಮಂಜುನಾಥ ನಾಯ್ಕ್ ಆಕೆ ಮೇಲೆ ಅತ್ಯಾಚಾರ ನಡೆಸಿ ಬಳಿಕ ಕೊಲೆ ಬೆದರಿಕೆ ಹಾಕಿದ್ದ. ಆಕೆ ಇದರಿಂದಾಗಿ ಗರ್ಭಿಣಿಯಾಗಿದ್ದು ವಿಚಾರ ತಿಳಿಯುತ್ತಲೇ ಮನೆಯವರು ಮದುವೆ ಪ್ರಸ್ತಾಪ ಮಾಡಿದಾಗ ಆತ ಮದುವೆಗೆ ಒಲ್ಲೆ ಎನ್ನುತ್ತಾನೆ. 2010ಸೆಪ್ಟಂಬರ್ ತಿಂಗಳಿನಲ್ಲಿ ಸಂತ್ರಸ್ತ ಯುವತಿ ಖಾಸಗಿ ದೂರು ದಾಖಲಿಸಿದ್ದು ನ್ಯಾಯಾಲಯವು ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಬೈಂದೂರು ಠಾಣೆಗೆ ಆದೇಶ ನೀಡಿತ್ತು. ಅದರಂತೆಯೇ ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಸಮಗ್ರ ತನಿಖೆಯನ್ನು ನಡೆಸಿದ್ದರು. ಬಳಿಕ ಆತ ಜಾಮೀನು ಪಡೆದು ಹೊರಬಂದಿದ್ದ. ಸಂತ್ರಸ್ತ ಯುವತಿ ಅದೇ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು.
ಅಂದಿನ ಬೈಂದೂರು ಸಿಪಿಐ ಕಾಂತರಾಜ್ ಕೆ. ತನಿಖೆ ನಡೆಸಿ ದೋಷರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಸುದೀರ್ಘ ಎಂಟು ವರ್ಷಗಳ ಕಾಲ ವಿಚಾರಣೆ ನಡೆದಿತ್ತು. ಸಂತ್ರಸ್ತೆ ಸಹಿತ ಒಟ್ಟು 9 ಮಂದಿ ಸಾಕ್ಷ್ಯ ನುಡಿದಿದ್ದರು. ಆದರೆ ಆರೋಪಿ ಮಂಜುನಾಥ ನಾಯ್ಕ್ ಮಾತ್ರ ತಾನು ತಪ್ಪು ಮಾಡಿಲ್ಲ, ಆ ಮಗು ತನ್ನದಲ್ಲ ಎಂದು ವಾದ ಮಾಡಿದ್ದ.
ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಡಿ.ಎನ್.ಎ ರಿಪೋರ್ಟ್…
ಆರೋಪಿ ತಪ್ಪಿತಸ್ಥನಲ್ಲ ಎಂಬ ವಾದ ನಡೆಯುತ್ತಲೇ ಪ್ರಾಸಿಕ್ಯೂಶನ್ ಪರ ವಕೀಲರಾದ ಪ್ರಕಾಶ್ಚಂದ್ರ ಶೆಟ್ಟಿ ಇದೇ ವರ್ಷ ಫೆಬ್ರವರಿ ತಿಂಗಳಿನಲ್ಲಿ ಡಿ.ಎನ್.ಎ. ಪರೀಕ್ಷೆಗೆ ಅವಕಾಶ ನೀಡುವಂತೆ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು ಈ ಪ್ರಕ್ರಿಯೆಗಳೆಲ್ಲಾ ಮುಗಿದು ಎಪ್ರಿಲ್ ತಿಂಗಳಿನಲ್ಲಿ ಡಿ.ಎನ್.ಎ ವರದಿ ಬಂದಿದ್ದು ಮಂಜುನಾಥನದ್ದೇ ಮಗು ಎಂದು ದ್ರಢಪಟ್ಟಿತ್ತು.
ಈ ಎಲ್ಲಾ ಸಾಕ್ಷಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ನ್ಯಾಯಾದೀಶರು ಮಂಜುನಾಥ ನಾಯ್ಕನೇ ದೋಷಿಯೆಂದು ತೀರ್ಪು ನೀಡಿದ್ದಾರೆ.
(ವರದಿ- ಯೋಗೀಶ್ ಕುಂಭಾಸಿ
Comments are closed.