ಕರ್ನಾಟಕ

ಶೋಭಾ ಕರಂದ್ಲಾಜೆ ಮುಂದಿನ ಲೋಕಸಭೆಗೆ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಗೊತ್ತಾ?

Pinterest LinkedIn Tumblr


ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 19-23 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿರುವ ಬಿಜೆಪಿ, ಎಲ್ಲಾ ಕ್ಷೇತ್ರಗಳಿಗೆ ಸಮರ್ಥ ಅಭ್ಯರ್ಥಿಗಳ ತಲಾಶೆಗೆ ಮುಂದಾಗಿದೆ.

ಬಹುತೇಕ ಕ್ಷೇತ್ರಗಳಲ್ಲಿ ಹಾಲಿ ಸಂಸದರೇ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಅತ್ಯಂತ ಸುರಕ್ಷಿತ ಎನ್ನಬಹುದಾದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಸ್ಪರ್ಧಿಸುವುದು ಅನುಮಾನ ಎನ್ನಲಾಗುತ್ತಿದೆ.

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ 2013ರಲ್ಲಿ ನಡೆದ ಚುನಾವಣೆಯಲ್ಲಿ ಗೆಲುವಿನ ಅಂತರ ಐತಿಹಾಸಿಕವಾದುದು. ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರು 1.85 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಹೀಗಾಗಿ, ಮುಂದಿನ ಚುನಾವಣೆಯ ಸಂದರ್ಭ ಸಾಮಾನ್ಯವಾಗಿ ಅವರಿಗೇ ಆದ್ಯತೆ. ಅವರೇ ಅಭ್ಯರ್ಥಿ. ಆದರೆ, ತಮಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು
ಇಷ್ಟವಿಲ್ಲ ಎಂದು ಶೋಭಾ ಕರಂದ್ಲಾಜೆ ಹಿಂದೊಮ್ಮೆ ಹೇಳಿದ್ದರು. ಹೀಗಾಗಿ, ಈ ಕ್ಷೇತ್ರಕ್ಕೆ ಬಿಜೆಪಿಯಿಂದ ಬೇರೆ ಯಾರಾದರೂ ಅಭ್ಯರ್ಥಿಯಾಗ್ತಾರಾ ಎಂಬ ಕುತೂಹಲ ಈಗ ಕಾಡುತ್ತಿದೆ. ಈ ಮಧ್ಯೆ, ಹಾಲಿ ಸಂಸದೆ ಬೇರೆ ಪಕ್ಷದ ನಾಯಕರನ್ನು ತಮ್ಮ ಪಕ್ಷಕ್ಕೆ ಕರೆತರಲು ಪ್ರಯತ್ನಿಸುತ್ತಿದ್ದಾರೆ ಎಂಬ ಗುಸು ಗುಸು ಕೂಡಾ ಕೇಳಿ ಬರುತ್ತಿದೆ. ಆದರೆ, ಅವರ ಆಪ್ತ ಮೂಲಗಳು ಈ ಗಾಳಿಸುದ್ದಿಯನ್ನು ಅಲ್ಲಗಳೆಯುತ್ತಿವೆ. ಈ ಇಬ್ಬರಲ್ಲಿ ಒಬ್ಬರು ವಿಧಾನಸಭೆಯ ಚುನಾವಣೆಯಲ್ಲಿ ಸೋತವರು.

ಇನ್ನೊಬ್ಬರು ಟಿಕೆಟ್‌ ವಂಚಿತರಾದವರು ಎನ್ನಲಾಗುತ್ತಿದೆ. ಹಾಗಾಗಿ, ಇವರಿಬ್ಬರಲ್ಲಿ ಲೋಕಸಭೆಗೆ ಒಬ್ಬರು ಅಭ್ಯರ್ಥಿ ಆಗಬಹುದು ಎಂಬ ಗುಸುಗುಸು ಇದೆ. ಇನ್ನು, ಮಾಜಿ ಸಚಿವ, ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆಯವರು ಲೋಕಸಭಾ ಚುನಾವಣೆ ಟಿಕೆಟ್‌ ಪಡೆಯುವವರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ.

ಇವರಲ್ಲದೆ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಚಿಕ್ಕಮಗಳೂರಿನ ಜೀವರಾಜ್‌ ಅವರೂ ಆಕಾಂಕ್ಷಿಗಳು. ತಮಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಇಷ್ಟವಿಲ್ಲ ಎಂದು ಶೋಭಾ ಕರಂದ್ಲಾಜೆ ಹಿಂದೊಮ್ಮೆ ಹೇಳಿದ್ದರು. ಬಳಿಕ ಯಾರೂ ಬಹಿರಂಗ ಹೇಳಿಕೆ ಕೊಡಬಾರದು ಎಂದು ಬಿ.ಎಸ್‌.ಯಡಿಯೂರಪ್ಪ ಹೇಳಿದ್ದರು. ನಂತರ, ಶೋಭಾ ಯಾವುದೇ ಹೇಳಿಕೆ ನೀಡಿಲ್ಲ. ಏತನ್ಮಧ್ಯೆ ಶೋಭಾ ಅವರೇ ಸ್ಪರ್ಧಿಸುತ್ತಾರೆ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಒಮ್ಮೆ ಹೇಳಿದರು. ಇದಾದ ಬಳಿಕ ಯಾರದ್ದೂ ಸದ್ದುಗದ್ದಲವಿಲ್ಲ. ಈ ಮಧ್ಯೆ, ವಿಧಾನಸಭೆ ಚುನಾವಣೆ ರೀತಿಯಲ್ಲಿ ಲೋಕಸಭಾ ಚುನಾವಣೆಗೂ ಪಕ್ಷದ ವತಿಯಿಂದ ಸಮೀಕ್ಷೆ ನಡೆಸಲಾಗುವುದು ಎಂದು ಕೇಳಿ ಬರುತ್ತಿದೆ. ಆದರೆ,ಇದುವರೆಗೆ ಅಂತಹ ತಂಡಗಳು ಬಂದಿಲ್ಲ. ಪಂಚರಾಜ್ಯಗಳ ಚುನಾವಣೆ ಬಳಿಕ ಬರಬಹುದೇನೋ?. ಆಗ ಜನರ ನಾಡಿಮಿಡಿತ ತಿಳಿಯುತ್ತದೆ. ಏತನ್ಮಧ್ಯೆ ಎರಡೂ ಜಿಲ್ಲೆಗಳ ಪಕ್ಷದ ಪ್ರಮುಖರು, ಜನಪ್ರತಿನಿಧಿಗಳು ಸದ್ಯವೇ ಸಭೆ ಸೇರಿ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಕೆಲವರು ಲೋಕಸಭಾ ಟಿಕೆಟ್‌ ಯಾಚಿಸಿ ಹೋದಾಗ ಹಾಲಿ ಸದಸ್ಯರೇ ಸ್ಪರ್ಧಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷರು
ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಶೋಭಾ ಕರಂದ್ಲಾಜೆಯವರೇ ಸ್ಪರ್ಧಿಸುತ್ತಾರೆ. ಇತರ ಯಾರೂ ಪ್ರಯತ್ನಿಸಿದರೂ ಅದು ಫ‌ಲಕಾರಿಯಾಗದು. ಇತರರು ಬಿಜೆಪಿ ಸೇರುವ ಬಗ್ಗೆ ನನಗೇನೂ ಮಾಹಿತಿ ಇಲ್ಲ.
– ತಿಂಗಳೆ ವಿಕ್ರಮಾರ್ಜುನ ಹೆಗ್ಡೆ,
ರಾಜ್ಯ ಬಿಜೆಪಿ ಕಾರ್ಯದರ್ಶಿ

Comments are closed.