ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್. ಮಹೇಶ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಸಮ್ಮಿಶ್ರ ಸರ್ಕಾರದ ಮೊದಲ ಸಚಿವರ ವಿಕೆಟ್ ಪತನವಾಗಿದೆ. ಜೆಡಿಎಸ್ ಜತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಬಹುಜನ ಸಮಾಜವಾದಿ ಪಕ್ಷ, ಗೆದ್ದ ಅಭ್ಯರ್ಥಿ ಎನ್. ಮಹೇಶ್ರಿಗೆ ಜೆಡಿಎಸ್ – ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಜತೆ ಕೈಗೂಡಿಸುವಂತೆ ತಿಳಿಸಿತ್ತು. ಆದರೆ ಕಳೆದ ಕೆಲ ದಿನಗಳಿಂದ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಮತ್ತು ಕಾಂಗ್ರೆಸ್ ನಡುವಿನ ಭಿನ್ನಾಭಿಪ್ರಾಯ ಹೆಚ್ಚಾಗುತ್ತಲೇ ಬಂದಿತ್ತು.
ಸಚಿವರ ರಾಜಿನಾಮೆಗೆ ವಿವಿಧ ಪಕ್ಷಗಳ ಮುಖಂಡರ ಪ್ರತಿಕ್ರಿಯೆ
ಈವರೆಗೂ ಅವರು ರಾಜೀನಾಮೆ ನೀಡಿರುವ ವಿಚಾರ ಗೊತ್ತಿಲ್ಲ.ಮೈತ್ರಿ ಸರ್ಕಾರದಲ್ಲಿ ಭಿನ್ನಮತ ಇಲ್ಲ. ಆದರೆ ರಾಷ್ಟ್ರ ಮಟ್ಟದಲ್ಲಿ ಏನೂ ಚರ್ಚೆ ಆಗಿದೆಯೋ ಗೊತ್ತಿಲ್ಲ. ದಸರಾ ಕಾರ್ಯಕ್ರಮಗಳಲ್ಲಿ ಯಾವ ಕಾಂಗ್ರೆಸ್ ನಾಯಕರು ಗೈರಾಗಿಲ್ಲ. ಕೆಲವೊಂದು ಕಾರ್ಯಕ್ರಮಗಳಿಗೆ ಕಾರಣಾಂತರಗಳಿಂದ ಬಂದಿಲ್ಲ ಆದರೆ ಪುಟ್ಟರಂಗಶೆಟ್ಟಿ ಫೋಟೋ ಇಲ್ಲ ಎಂಬುದಕ್ಕೆ ಬೇಸರ ಮಾಡಿಕೊಂಡಿದಾರಷ್ಟೇ. ಅದನ್ನ ಬಿಟ್ಟರೆ ನಮ್ಮಲ್ಲಿ ಯಾವುದೇ ಭಿನ್ನಪ್ರಾಯ ಇಲ್ಲ.
— – ಜಿ.ಟಿ.ದೇವೇಗೌಡ , ಉನ್ನತ ಶಿಕ್ಷಣ ಸಚಿವ
ನಾವ್ಯಾರೂ ಜೋತಿಷಿಗಳಲ್ಲ, ರಾಜಕಾರಣದ ಅನುಭವದ ಮೇಲೆ ಈ ಸರ್ಕಾರ ಬೀಳುತ್ತೆ ಅಂದಿದ್ವಿ. ಈಗ ಮೊದಲ ವಿಕೆಟ್ ಬಿದ್ದಿದೆ. ಯಡಿಯೂರಪ್ಪ ಅತ್ಯಂತ ಗೌರವಯುತವಾಗಿ ನಡೆದುಕೊಂಡೆವು. ಪ್ರಜಾತಂತ್ರದ ವ್ಯವಸ್ಥೆಗೆ ಗೌರವ ಕೊಟ್ಟು ಯಡಿಯೂರಪ್ಪ ರಾಜೀನಾಮೆ ಕೊಟ್ಟರು. ಈ ಸರ್ಕಾರ ತನ್ನಷ್ಟಕ್ಕೆ ತಾನೇ ಕುಸಿಯುತ್ತೆ ಎಂದು ಹೇಳಿದ್ದೇವು ಅದು ಇಂದು ಸತ್ಯ ಆಗಿದೆ
— – ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ
ಎನ್ ಮಹೇಶ್ ಯಾವ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಗೊತ್ತಿಲ್ಲ ಸಿಎಂ ಕುಮಾರಸ್ವಾಮಿ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುತ್ತಾರೆ. ರಾಜೀನಾಮೆ ನೀಡಿದ ವಿಚಾರವನ್ನು ಉದಾಸೀನ ಮಾಡುವಂತಿಲ್ಲ. ಉಪಚುನಾವಣೆಗೆ ಇದು ಯಾವ ರೀತಿಯಲ್ಲೂ ಪರಿಣಾಮ ಬೀರಲ್ಲ. ಸಮಸ್ಯೆ ಪರಿಹಾರವಾಗುತ್ತೆ, ಯಾವುದೇ ಸಮಸ್ಯೆ ಆಗಲ್ಲ
–
— ರವೀಂದ್ರ ಶ್ರೀಕಂಠಯ್ಯ, ಶ್ರೀರಂಗಪಟ್ಟಣ ಶಾಸಕ[/
ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ರಾಜಕೀಯ ಬದಲಾವಣೆಗಳ ಪರಿಣಾಮ ಮಹೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರಬಹುದು. ಅವರ ರಾಜೀನಾಮೆಯಿಂದ ತೆರವಾಗಿರುವ ಸಚಿವ ಸ್ಥಾನಕ್ಜೆ ನಾನು ಆಕಾಂಕ್ಷಿಯಲ್ಲ. ಆದರೆ,ಪಕ್ಷದ ವರಿಷ್ಟರು ಯಾವ ತೀರ್ಮಾನ ಕೈಗೊಂಡರೂ ಅದನ್ನು ಒಪ್ಪುತ್ತೇನೆ
–
— ಕೃಷ್ಣಾರೆಡ್ಡಿ, ಉಪಸಭಾಧ್ಯಕ್ಷರು
ನನಗೆ ಸ್ಪಷ್ಟವಾಗಿ ಮಾಹಿತಿ ಗೊತ್ತಿಲ್ಲ. ಅವರು ಪಕ್ಷ ಕಟ್ಟುವ ಸಲುವಾಗಿ ಈ ಜವಾಬ್ದಾರಿಯಿಂದ ಹೊರ ಬರುತಿದ್ವಿ ಅಂದಿದ್ದರು. ಬೇರೆಯವರ ವಿರುದ್ಧ, ಸರ್ಕಾರದ ವಿರುದ್ದ ಅವರು ಮಾತಾಡಿಲ್ಲ. ಅವರ ಪಕ್ಷದ ಹೈಕಮಾಂಡ್ ತೀರ್ಮಾನ ಇದ್ದರು ಇರಬಹುದು. ಬಿಎಸ್ ಪಿ ಮತ್ತು ಜೆಡಿಎಸ್ ಸಮ್ಮಿಶ್ರ ಅದು ಈಗಲೂ ಕೂಡಾ ಇರುತ್ತೆ. ರಾಜಕೀಯ ಕಾರಣಗಳು ಬೇರೆ ಬೇರೆ ಇರುತ್ತೆ. ಅವರು ರಾಜೀನಾಮೆ ಕೊಟ್ಟಿದ್ದಕ್ಕೆ ಸರ್ಕಾರ ಬಿದ್ದು ಹೋಗುತ್ತೆ ಅಂತ ಅರ್ಥ ಅಲ್ಲ
–
— ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷರು
ಮಹೇಶ್, ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆಂದು ಮಾಹಿತಿ ತಿಳಿದಿಲ್ಲ ದೇವೇಗೌಡರು ಹಾಗೂ ಮಾಯಾವತಿಯವರು ಚರ್ಚಿಸಿ ಸರಿಪಡಿಸುತ್ತಾರೆ. ನಮ್ಮ ನಡುವೆ ಯಾವುದೇ ಗೊಂದಲಗಳಿಲ್ಲ. ಹೈಕಮಾಂಡ್ ಆದೇಶದ ಮೇಲೆ ಅವರು ರಾಜೀನಾಮೆ ನಿರ್ಧಾರ ತೆಗೆದುಕೊಂಡಿರಬಹುದು. ಮುಖ್ಯಮಂತ್ರಿ ಹಾಗೂ ಸಚಿವರ ಸಂಬಂಧದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿ ಇತ್ಯರ್ಥವಾಗುತ್ತೆ. ಮೈತ್ರಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ
–
— ಬಂಡೆಪ್ಪ ಕಾಶಂಪುರ್, ಸಹಕಾರ ಸಚಿವರು
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಚಾರ ನನಗೇ ಗೊತ್ತಿಲ್ಲ. ಅವರ ರಾಜಿನಾಮೆ ವಿಚಾರ ರಾಷ್ಟ್ರೀಯ ವಿಷಯ. ಯಾರು ತಲೆಕೆಡಿಸಿಕೊಳ್ಳಬೇಡಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲಾ
— ಎಚ್.ಡಿ.ರೇವಣ್ಣ, ಲೋಕೋಪಯೋಗಿ ಸಚಿವ
Comments are closed.