ಕರಾವಳಿ

‘ಬರ್ತ್ ಡೇ ಬಾಯ್’ ಕಿಡ್ನಾಪ್ ವದಂತಿ: ಮನೆಯ ಸಮೀಪ ಸಿಕ್ಕ ಮಗು!

Pinterest LinkedIn Tumblr

ಉಡುಪಿ: ನಂದಳಿಕೆ ಗೋಳಿಕಟ್ಟೆ ಕಕ್ಕೆಪದವು ಬಳಿಯ ಮೂರರ ಹರೆಯದ ಗಂಡು ಮಗು ಗುರುವಾರ ಸಂಜೆ ಮನೆಯ ಅಂಗಳದಿಂದ ನಾಪತ್ತೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಿಡ್ನಾಪ್ ವದಂತಿ ಹರಡಿ ಆತಂಕ ಸೃಷ್ಟಿಯಾಗಿತ್ತು. ಇದಾದ ಕೆಲವೇ ಗಂಟೆಯಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸರು ಮಗುವನು ಪತ್ತೆ ಹಚ್ಚಿ ತಾಯಿ ಮಡಿಲು ಸೇರಿಸುವ ಮೂಲಕ ಪ್ರಕರಣ ಸುಖಾಂತ್ಯಗೊಂಡಿದೆ.

ಪ್ರಶಾಂತಿ ಹಾಗೂ ರಾಘು ಅವರ ಪುತ್ರನಾಗಿದ್ದ ಈ ಮಗುವಿಗೆ ಗುರುವಾರ 3ನೇ ಹುಟ್ಟುಹಬ್ಬವಾಗಿತ್ತು. ಆಟವಾಡುತ್ತಿದ್ದ ಈತ ಸುಮಾರು 4 ಗಂಟೆ ಹೊತ್ತಿಗೆ ಏಕಾಏಕಿ ನಾಪತ್ತೆಯಾಗಿದ್ದ. ಮನೆಯವರು ಒಂದಿಷ್ಟು ಹುಡುಕಾಡಿ ಕೂಡಲೇ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ತತ್‌ಕ್ಷಣ ಆಗಮಿಸಿದ ಠಾಣಾಧಿಕಾರಿ ನಾಸಿರ್‌ ಹುಸೇನ್‌ ಹಾಗೂ ಮತ್ತವರ ತಂಡ ಹುಡುಕಾಟ ಪ್ರಾರಂಭಿಸಿದರು. ವಯರ್ ಲೆಸ್ ಮೂಲಕವೂ ಎಲ್ಲಾ ಠಾಣೆಗಳಿಗೆ ಮಾಹಿತಿ ನಈಡುವ ಕೆಲಸವಾಗಿತ್ತು.

ಪೊಲೀಸರು ಹಾಗೂ ಸ್ಥಳಿಯರ ಹುಡುಕಾಟದ ಬಳಿಕ ಮಗು ಸಂಜೆ ಸುಮಾರು 6ರ ಹೊತ್ತಿಗೆ ಮನೆಗೆ 200 ಮೀ. ದೂರದ ಕಾಡಿನ ಮಧ್ಯೆ ಪತ್ತೆಯಾಗಿದ್ದು ಬೆದರಿದ ಬಾಲಕ ಏನಾಯಿತೆಂಬುದನ್ನು ಹೇಳಿಕೊಂಡಿಲ್ಲ.

Comments are closed.