ರಾಮನಗರ: ರಾಮನಗರ ಉಪ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯು ಕೊನೆ ಕ್ಷಣದಲ್ಲಿ ತನ್ನ ಅಭ್ಯರ್ಥಿಯನ್ನು ಬದಲಾಯಿಸುವ ಮೂಲಕ ಈವರೆಗಿನ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ. ಕಾಂಗ್ರೆಸ್ ಪಕ್ಷದ ಒಳ ಜಗಳದ ಲಾಭ ಪಡೆಯುವ ಪ್ಲಾನ್ ಮಾಡಿರುವ ಬಿಜೆಪಿಯು ಚುನಾವಣೆಯಲ್ಲಿ ಕಾಂಗ್ರೆಸ್ನ ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪನವರ ಮಗ ಎಂ. ಚಂದ್ರಶೇಖರ್ಗೆ ಟಿಕೆಟ್ ಘೋಷಣೆ ಮಾಡಿದೆ. ಈ ಮೂಲಕ ಒಕ್ಕಲಿಗರ ಭದ್ರ ಕೋಟೆ ಎಂದೇ ಕರೆಯಲಾಗುವ ರಾಮನಗರದಲ್ಲಿ ಮತಗಳನ್ನು ಒಡೆದು ಅಧಿಕಾರ ಪಡೆಯಲು ರಣತಂತ್ರ ರೂಪಿಸಿದೆ.
ಇದ್ದಕ್ಕಿದ್ದಂತೆಯೇ ಎಂ. ಚಂದ್ರಶೇಖರ್ರನ್ನು ಕಣಕ್ಕಿಳಿಸುವ ತೀರ್ಮಾನ ಕೈಗೊಂಡ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್ ಯಡಿಯೂರಪ್ಪ ಶನಿವಾರ ರಾತ್ರಿ ಅವರನ್ನು ತಮ್ಮ ಡಾಲರ್ಸ್ ಕಾಲೊನಿಯ ಮನೆಗೆ ಕರೆಸಿ ಬಿ. ಫಾರಂ ನೀಡಿದ್ದಾರೆ. ಎಂ ಚಂದ್ರಶೇಖರ್ ಸೋಮವಾರ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆನ್ನಲಾಗಿದೆ. ಈ ಹಿಂದೆ ರಾಮನಗರ ಕ್ಷೇತ್ರದಿಂದ ಪಕ್ಷದ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಹೀಗಾಗಿ ಅವರು ರಾಮನಗರ ಕ್ಷೇತ್ರದಲ್ಲಿ ಪಕ್ಷದ ಪರವಾಗಿ ಪ್ರಚಾರವನ್ನೂ ಆರಂಭಿಸಿದ್ದರು. ಆದರೀಗ ಅಂತಿಮ ಕ್ಷಣದಲ್ಲಿ ಎಲ್ಲವೂ ಬದಲಾಗಿದೆ.
ಜೆಡಿಎಸ್ನಿಂದ ಅನಿತಾ ಕುಮಾರಸ್ವಾಮಿ
ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೆಂಡತಿ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯಲಿದ್ದಾರೆ. ಇವರು ಕೂಡಾ ಸೋಮವಾರ ನಾಮಪತ್ರ ಸಲ್ಲಿಕೆ ಮಾಡುತ್ತಾರೆ.
ಐದು ದಿನಗಳ ಹಿಂದೆಯಷ್ಟೇ ಚಂದ್ರಶೇಖರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಇನ್ನು ಚಂದ್ರಶೇಖರ್ರವರು ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಕಾರಣ, ಬಿಜೆಪಿಯು ಆ ಸಮುದಾಯದ ಮತಗಳನ್ನು ಸೆಳೆಯಲು ಈ ತಂತ್ರ ಹೆಣೆದಿದೆ ಎನ್ನಲಾಗಿದೆ. ಇತ್ತ ರುದ್ರೇಶ್ರನ್ನು ಮನವೊಲಿಸುವಲ್ಲಿಯೂ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.
ಇಕ್ಕಟ್ಟಿಗೆ ಸಿಲುಕಿದ ಸಿ. ಎಂ ಲಿಂಗಪ್ಪ
ಬಿಜೆಪಿಯ ಈ ಕೊನೆಯ ಕ್ಷಣದ ನಿರ್ಧಾರದಿಂದಾಗಿ ಕಾಂಗ್ರೆಸ್ನ ಹಿರಿಯ ಮುಖಂಡ ಲಿಂಗಪ್ಪನವರು ಇಕ್ಕಟ್ಟಿಗೆ ಸಿಲುಕಿದಂತಾಗುದೆ. ಉಪಚುನಾವಣೆಯಲ್ಲಿ ಮಗನನ್ನು ಬೆಂಬಲಿಸಬೇಕೋ ಅಥವಾ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಬೇಕೋ ಎಂದು ತಿಳಿಯದೆ ಒದ್ದಾಡುತ್ತಿದ್ದಾರೆ.
ಒಟ್ಟಾರೆಯಾಗಿ ಅನಿರೀಕ್ಷಿತ ತಿರುವುಗಳನ್ನು ಪಡೆಯುತ್ತಿರುವ ರಾಮನಗರ ಉಪ ಚುನಾವಣೆ ಭಾರೀ ಕುತೂಹಲ ಕೆರಳಿಸಿದೆ. ಮೈತ್ರಿ ಹಾಗೂ ಕಮಲ ಪಾಳಯಗಳೆರಡೂ ಗೆಲುವಿಗಾಗಿ ಇಲ್ಲದ ಕಸರತ್ತು ನಡೆಸುತ್ತಿವೆ. ಅದೇನಿದ್ದರೂ ನವೆಂಬರ್ 3 ರಂದು ನಡೆಯುವ ಈ ಚುನಾವಣೆಯಲ್ಲಿ ಮತದಾರ ಯಾರಿಗೆ ಬೆಂಬಲ ನೀಡುತ್ತಾನೆ ಎಂಬುವುದನ್ನು ಕಾದು ನೋಡಬೇಕಷ್ಟೇ.
Comments are closed.