ಕರ್ನಾಟಕ

ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಕುಂಡಿಕೆ ಬಳಿ ಧಾರ್ಮಿಕ ವಿಧಿ ವಿಧಾನಕ್ಕೆ ಸಾಕ್ಷಿಯಾದ ಮುಖ್ಯಮಂತ್ರಿ ಕುಮಾರಸ್ವಾಮಿ

Pinterest LinkedIn Tumblr


ಮಡಿಕೇರಿ: ಕಾವೇರಿಯ ಉಗಮ ಸ್ಥಳ ತಲಕಾವೇರಿಯಲ್ಲಿ ಬುಧವಾರ ಸಂಜೆ 6.43ಕ್ಕೆ ಪವಿತ್ರ ತೀರ್ಥೋದ್ಭವ ಕಂಡು ಭಕ್ತರು ಪುಳಕಿತರಾದರು.

ತಲಕಾವೇರಿಯ ಬ್ರಹ್ಮ ಕುಂಡಿಕೆಯಲ್ಲಿ ಕಾವೇರಿ ಉಕ್ಕುವುದನ್ನು ಕಂಡು ಹಾಗೂ ಪುರೋಹಿತರು ತೀರ್ಥವನ್ನು ಚೆಲ್ಲಿದ ನಂತರ ಭಕ್ತರು ಸಂತೃಪ್ತಗೊಂಡರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಈ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾದರು. ಶುಭ ಮೇಷ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವವಾಯಿತು.

ತೀರ್ಥೋದ್ಭವದ ಪೂಜಾ ವಿಧಿಗಳು ಸಂಪ್ರದಾಯದಂತೆ ಆರಂಭವಾಗಿದ್ದು, ಸಾವಿರಾರು ಮಂದಿ ತೀರ್ಥೋದ್ಭವಕ್ಕೆ ಆಗಮಿಸಿದ್ದಾರೆ. ಯಾವುದೇ ಗೊಂದಲವಾಗದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಸೂಕ್ತ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದ ನಂತರ ಭಾಗಮಂಡಲಕ್ಕೆ ಬಂದು ಭಗಂಡೇಶ್ವರನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಕುಮಾರಸ್ವಾಮಿ ತಲಕಾವೇರಿಗೆ ಆಗಮಿಸಿದರು.

ಅಲ್ಲಿ ತಲಕಾವೇರಿಯ ಕುಂಡಿಕೆ ಬಳಿ ತೀರ್ಥೊದ್ಭವದ ಕ್ಷಣಗಳನ್ನು ಕಣ್ತುಂಬಿಕೊಂಡರು.

ಕೂಂಬಿಂಗ್‌ ಕಾರ್ಯಾಚರಣೆ: ಭಾಗಮಂಡಲ ಪೊಲೀಸ್‌ ಠಾಣೆ ಹಾಗೂ ನಾಪೋಕ್ಲು ಠಾಣಾ ವ್ಯಾಪ್ತಿಯಲ್ಲಿ ನಕ್ಸಲರು ಹಿಂದೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಎಎನ್‌ಎಫ್‌ ಕೂಂಬಿಂಗ್‌ ಕಾರ್ಯಾಚರಣೆ ನಡೆಸಲಾಯಿತು.

ಸಾವಿರಾರು ಪ್ರವಾಸಿಗರು ತೀರ್ಥೋದ್ಭವದ ಸಂದರ್ಭ ಆಗಮಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಬಂದೋಬಸ್ತ್‌ ಮಾಡಲಾಗಿತ್ತು. 3 ಕೆಎಸ್‌ಆರ್‌ಪಿ ತುಕಡಿ, 8 ಡಿಎಆರ್‌, 2 ಎಎಎನ್‌ಎಫ್‌, 5 ಡಿವೈಎಸ್‌ಪಿ, 15 ಸಿಸಿಐ, 25 ಪಿಎಸ್‌ಐ, 80 ಎಎಸ್‌ಐ, 600 ಪಿಸಿ, 100 ಮಹಿಳಾ ಪಿಸಿ, 200 ಜನ ಗೃಹರಕ್ಷ ಕದಳ ಸಿಬ್ಬಂದಿ ಬಂದೋಬಸ್ತ್‌ನಲ್ಲಿ ತೊಡಗಿದ್ದಾರೆ.

Comments are closed.