ಕರಾವಳಿ

ಕಫದಿಂದ ರಾತ್ರಿ ಮಲಗುವಾಗ ಉಸಿರುಗಟ್ಟಿದಂತಾಗುವುದೇ..ಹಾಗದರೆ ಇಲ್ಲಿದೆ ಸರಳ ಟಿಪ್ಸ್

Pinterest LinkedIn Tumblr

ಶೀತ, ನೆಗಡಿಯಾಗುವುದು ಸರ್ವೇ ಸಾಮಾನ್ಯ. ಆದರೆ ಇದು ಗುಣವಾದ ಮೇಲೂ ನಮ್ಮ ಗಂಟಲಿನಲ್ಲಿ ಕಫ ಉಳಿದುಕೊಂಡಿರುತ್ತದೆ. ಇದು ನಮಗೆ ಕೆಮ್ಮು ತರಬಹುದು ಅಥವಾ ರಾತ್ರಿ ಮಲಗುವಾಗ ಉಸಿರುಗಟ್ಟಿದಂತೆ ಆಗಬಹುದು. ಇದರಿಂದ ಜೀವಕ್ಕೆ ಅಂತಹ ದೊಡ್ಡ ಹಾನಿಯೇನೂ ಆಗುವುದಿಲ್ಲ. ಆದರೆ ಇದು ದೀರ್ಘಕಾಲ ಗಂಟಲಿನಲ್ಲಿ ಉಳಿದುಕೊಂಡರೆ ನಮ್ಮ ಶ್ವಾಸಕೋಶದ ನಳಿಕೆಗಳಿಗೆ ತಡೆಯೊಡ್ಡಿ ಉಸಿರಾಟ ನಾಳದ ಮೇಲ್ಭಾಗದಲ್ಲಿ ಸೋಂಕು ಉಂಟಾಗಲು ಕಾರಣವಾಗಬಹುದು.

ಹಾಗಾದರೆ ಇದನ್ನು ಸುಲಭವಾಗಿ ಹೊರಹಾಕುವುದು ಹೇಗೆ? ನಿಮ್ಮ ಮನೆಯಲ್ಲೇ ನೀವು ಮಾಡಬಹುದಾದ ಕೆಲವು ಮನೆಮದ್ದುಗಳನ್ನು ತಿಳಿದುಕೊಳ್ಳೋಣ ಬನ್ನಿ;

ನಿಂಬೆಹಣ್ಣು:
ನಿಂಬೆಹಣ್ಣಿನಲ್ಲಿರುವ ವಿಟಮಿನ್ ಸಿ ಸೋಂಕುಗಳ ವಿರುದ್ಧ ಹೋರಾಡುತ್ತದೆ, ಅಷ್ಟೇ ಅಲ್ಲ ಇದರಲ್ಲಿರುವ ಆ್ಯಂಟಿ-ಬ್ಯಾಕ್ಟೀರೀಯಾ ಗುಣಗಳು ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿ.

2 ಚಮಚ ನಿಂಬೆರಸ ಮತ್ತು 1 ಚಮಚ ಜೇನುತುಪ್ಪವನ್ನು ಒಂದು ಲೋಟ ಕುದಿಸಿದ ನೀರಿಗೆ ಬೆರೆಸಿ ಈ ಮಿಶ್ರಣವನ್ನು ದಿನಕ್ಕೆ 3 ಬಾರಿ ಸೇವಿಸಬೇಕು. ಹೀಗೆ ಮಾಡುವುದರಿಂದ ಗಂಟಲಿನ ಕಫ ಕರಗಿ ಹೊರಬರುತ್ತದೆ.

ಉಪ್ಪು ನೀರು:
ಈ ವಿಧಾನ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತದ್ದು. ಒಂದು ಲೋಟ ಉಗುರುಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ದಿನದಲ್ಲಿ 5-6 ಸಲ ಬಾಯಿ ಮುಕ್ಕಳಿಸಬೇಕು. ಇದು ಕಫ ಹೆಚ್ಚಾಗುವುದನ್ನು ತಡೆಯುತ್ತದೆ.

ಕಾಳುಮೆಣಸಿನ ಪುಡಿ:
ಕಾಳುಮೆಣಸಿನ ಪುಡಿ ಶೀತ, ನೆಗಡಿಗೆ ಹೇಳಿಮಾಡಿಸಿದ ಮನೆ ಔಷಧಿ. ಇದು ಗಂಟಲಿನಲ್ಲಿರುವ ಕಫವನ್ನು ಕಡಿಮೆ ಮಾಡಿ ಉಸಿರಾಟವನ್ನು ಸುಗಮಗೊಳಿಸುತ್ತದೆ. ಮತ್ತು ಗಂಟಲು ಕೆರೆತ ಕಮ್ಮಿ ಮಾಡಿ ಕೆಮ್ಮನ್ನು ಹೋಗಲಾಡಿಸುತ್ತದೆ.

1 ಚಮಚ ಕಾಳುಮೆಣಸಿನ ಪುಡಿ, ಅಷ್ಟೇ ಪ್ರಮಾಣದ ತುರಿದ ಶುಂಠಿ ಮತ್ತು ಜೇನುತುಪ್ಪಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕಲೆಸಿ ಮಿಶ್ರಣ ಮಾಡಿ. ಇದನ್ನು ದಿನಕ್ಕೆ 2-3 ಸಲ ಸೇವಿಸಬೇಕು. ಇದರಿಂದ ಕಫ ನೀರಾಗಿ ಕರಗಿಹೋಗುತ್ತದೆ.

ಬೆಳ್ಳುಳ್ಳಿ:
ಬೆಳ್ಳುಳ್ಳಿಯಲ್ಲಿ ಉರಿಯನ್ನು ಕಡಿಮೆ ಮಾಡುವ ಗುಣಗಳಿದ್ದು, ಇದು ಕಫಕ್ಕೆ ರಾಮಬಾಣವಿದ್ದಂತೆ. ಬೆಳಿಗ್ಗೆ ಎದ್ದ ಕೂಡಲೇ ಮತ್ತು ರಾತ್ರಿ ಮಲಗುವ ಮುನ್ನ ಬೆಳ್ಳುಳ್ಳಿಯನ್ನು ಚೆನ್ನಾಗಿ ಜಜ್ಜಿ ಸ್ವಲ್ಪ ನೀರಿನೊಂದಿಗೆ ಸೇವಿಸಬೇಕು.

ಇನ್ನು ಶೀತ ಆಗಿ ಮೂಗಿನಲ್ಲಿ ಲೋಳೆ ಕಟ್ಟಿಕೊಂಡಿದ್ದರೆ ಬೆಳ್ಳುಳ್ಳಿಯನ್ನು ಜಜ್ಜಿ, ಹಿಂಡಿ ಅದರ ರಸ ತೆಗೆದು ನೀರಿನೊಂದಿಗೆ ಬೆರೆಸಿ ಈ ಮಿಶ್ರಣದ ಕೆಲವು ಹನಿಗಳನ್ನು ಮೂಗಿನೊಳಗೆ ಬಿಟ್ಟುಕೊಳ್ಳಬೇಕು. ಇದು ಕಟ್ಟಿಕೊಂಡಿರುವ ಲೋಳೆಯನ್ನು ನಿವಾರಿಸುತ್ತದೆ.

ಶುಂಠಿ:
ಶುಂಠೀ ಕೂಡ ಶೀತ, ನೆಗಡಿ ಹೇಳಿ ಮಾಡಿದ ಮನೆಮದ್ದು. ಇದು ಶೀತವನ್ನು ನಿವಾರಿಸಿ ಉಸಿರಾಟವನ್ನು ಸುಗಮಗೊಳಿಸುತ್ತದೆ. ಶುಂಠಿಯನ್ನು ನೇರವಾಗಿ ಅಗಿಯುವುದರಿಂದ ಕಫ ಕರಗುತ್ತದೆ. ಅಥವಾ ಶುಂಠಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಕುದಿಯುವ ನೀರಿನಲ್ಲಿ ಹಾಕಿ ಬೆರೆಯಲು ಬಿಡಬೇಕು. ನಂತರ ಅದಕ್ಕೆ ಜೇನುತುಪ್ಪ ಸೇರಿಸಿ ದಿನಕ್ಕೆ 3- 4 ಬಾರಿ ಸೇವಿಸಬೇಕು. ಇದರಿಂದ ಗಂಟಲಿನ ಕಫ ನಿವಾರಣೆಯಾಗುತ್ತದೆ.

Comments are closed.