ಕರ್ನಾಟಕ

ಬೇಕಿದ್ದರೆ ಶ್ರುತಿಯೇ ಬಂದು ನನ್ನ ಮಗನ ಬಳಿ ಕ್ಷಮೆ ಕೇಳಲಿ. ನಾವು ಕೇಳಲು ಸಾಧ್ಯವಿಲ್ಲ: ಅರ್ಜುನ್​ ಸರ್ಜಾ ತಾಯಿ

Pinterest LinkedIn Tumblr


ಬೆಂಗಳೂರು: ‘ನನ್ನ ಮಗ ಚಿತ್ರರಂಗಕ್ಕೆ ಬಂದು 40 ವರ್ಷವಾಯ್ತು. ಇದುವರೆಗೂ ಆತನ ಮೇಲೆ ಕೆಟ್ಟ ಹೆಸರು, ಆಪಾದನೆಗಳು ಬಂದಿರಲಿಲ್ಲ. ಈಗ ಆರೋಪ ಮಾಡುತ್ತಿರುವುದರ ಹಿಂದೆ ಏನೋ ಕುತಂತ್ರವಿದೆ. ಇಲ್ಲವಾದರೆ, ಇದುವರೆಗೂ ಶ್ರುತಿ ಸುಮ್ಮನಿರುತ್ತಿರಲಿಲ್ಲ’ ಎಂದು ಅರ್ಜುನ್​ ಸರ್ಜಾ ಅವರ ತಾಯಿ ಲಕ್ಷ್ಮೀದೇವಮ್ಮ ಕಿಡಿಕಾರಿದ್ದಾರೆ.

ಬಹುಭಾಷಾ ನಟ ಅರ್ಜುನ್​ ಸರ್ಜಾ ಅವರ ಮೇಲೆ ನಟಿ ಶ್ರುತಿ ಹರಿಹರನ್​ #MeToo ಆರೋಪ ಮಾಡಿದ್ದರು. ‘ವಿಸ್ಮಯ’ ಸಿನಿಮಾ ಶೂಟಿಂಗ್​ ವೇಳೆ ಅರ್ಜುನ್​ ಸರ್ಜಾ ತಮ್ಮೊಡನೆ ಕೆಟ್ಟ ರೀತಿಯಲ್ಲಿ ವರ್ತಿಸಿದ್ದರು ಎಂದು ಆರೋಪಿಸಿದ್ದರು. ಅದಕ್ಕೆ ಈಗಾಗಲೇ ಅರ್ಜುನ್​ ಸರ್ಜಾ, ಅರ್ಜುನ್​ ಅವರ ಮಾವ ರಾಜೇಶ್​, ಮಗಳು ಐಶ್ವರ್ಯ ಮುಂತಾದವರು ಪ್ರತಿಕ್ರಿಯೆ ನೀಡಿ ಸರ್ಜಾ ಪರವಾಗಿ ನಿಂತಿದ್ದಾರೆ.

ಇದೀಗ, ಅರ್ಜುನ್​ ಸರ್ಜಾ ಅವರ ಅಮ್ಮ ಲಕ್ಷ್ಮೀದೇವಮ್ಮ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನನ್ನ ಮಗ ಯಾವ ತಪ್ಪೂ ಮಾಡಿಲ್ಲ ಎಂದ ಮೇಲೆ ಕ್ಷಮೆ ಕೇಳುವ ಮಾತೇ ಇಲ್ಲ. 2 ವರ್ಷ ಸುಮ್ಮನೆ ಇದ್ದು ಈಗ ಆರೋಪ ಮಾಡುತ್ತಿರುವುದರಲ್ಲೇ ಅವರ ನಿಜವಾದ ಉದ್ದೇಶ ಗೊತ್ತಾಗುತ್ತಿದೆ ಎಂದಿದ್ದಾರೆ.

ಪ್ರಕಾಶ್​ ರೈ ವಿರುದ್ಧ ವಾಗ್ದಾಳಿ!

ನನ್ನ ಮಗ ಅರ್ಜುನ್ ಕ್ಷಮೆ ಕೇಳಬೇಕು ಎಂದು ಹೇಳಲು ಪ್ರಕಾಶ್​ ರೈ ಯಾರು? ಆತನೂ ಮೂರು ಮದುವೆ ಆಗಿಲ್ವ? ನನ್ನ ಮಗನ ವಿರುದ್ಧ ಮಾತಾಡೋಕೆ ಅವರು ಯಾರು? ಎಂದು ನಟ ಪ್ರಕಾಶ್ ರೈ ವಿರುದ್ಧ ಅರ್ಜುನ್ ತಾಯಿ ಲಕ್ಷ್ಮಿದೇವಮ್ಮ ವಾಗ್ದಾಳಿ ನಡೆಸಿದ್ದಾರೆ.

ಇಷ್ಟೆಲ್ಲ ಆದಮೇಲೆ ನಾವು ಸುಮ್ಮನೆ ಕೂರುವುದಿಲ್ಲ. ನನ್ನ ಮಗ ಬಹಳ ಕಷ್ಟಪಟ್ಟು ಚಿತ್ರರಂಗದಲ್ಲಿ ಮೇಲೆ ಬಂದಿದ್ದಾನೆ. ನಾವು ಕಾನೂನು ಹೋರಾಟ ಮಾಡಿ ಸತ್ಯವನ್ನು ಆಚೆ ತರುತ್ತೇವೆ. ಬೇಕಿದ್ದರೆ ಶ್ರುತಿಯೇ ಬಂದು ನನ್ನ ಮಗನ ಬಳಿ ಕ್ಷಮೆ ಕೇಳಲಿ. ನಾವು ಕೇಳಲು ಸಾಧ್ಯವಿಲ್ಲ ಎಂದಿದ್ದಾರೆ.

Comments are closed.