ಜಮ್ಮು: ಮಗು ಪಡೆಯಲು 10 ವರ್ಷ ಕಾದ ತಂದೆ, ಆ ಖುಷಿಯನ್ನು ಅನುಭವಿಸಲು ಸಾಧ್ಯವೇ ಆಗಿಲ್ಲ…
ಭಾನುವಾರ ಗಡಿ ನಿಯಂತ್ರಣ ರೇಖೆಯ ಭಾಗದಲ್ಲಿನ ರಜೌರಿ ಜಿಲ್ಲೆಯಲ್ಲಿ ಪಾಕ್ ನುಸುಳುಕೋರರ ಗುಂಡಿಗೆ ಬಲಿಯಾದ ಲಾನ್ಸ್ ನಾಯಕ್ ರಂಜೀತ್ ಸಿಂಗ್ ಭುತ್ಯಾಲ್ ಅವರ ಕುಟುಂಬದ ವ್ಯಥೆ ಇದು…
ಪತಿಯ ಅಂತ್ಯ ಸಂಸ್ಕಾರಕ್ಕೂ ಮುನ್ನ ಪತ್ನಿ ಶಿಮು ದೇವಿ ಮಗುವಿನ ಜನ್ಮವಿತ್ತರು.
ಆಗ ತಾನೆ ಮಗು ಹೆತ್ತ ರಂಜೀತ್ ಅವರ ಪತ್ನಿ ಶಿಮು ದೇವಿ, ಅಂಬ್ಯುಲೆನ್ಸ್ನಲ್ಲಿ ನವಜಾತ ಶಿಶುವನ್ನು ಹಿಡಿದು, ಪತಿಯ ಅಂತ್ಯ ಸಂಸ್ಕಾರಕ್ಕೆ ಆಗಮಿಸಿದ ದೃಶ್ಯ ಮಲಕುಲುವಂತಾಗಿತ್ತು! ಆಗ ತಾನೇ ಹುಟ್ಟಿದ ಹೆಣ್ಣು ಕೂಸನ್ನು ನೋಡುತ್ತಾ, ಅವಳ ಅಪ್ಪನಂತೆ, ನನ್ನ ಮಗಳು ಸೇನೆ ಸೇರಬಹುದು ಎಂದು ಶಿಮುದೇವಿ ಆತ್ಮಸ್ಥೈರ್ಯದಿಂದ ಹೇಳಿದ್ದಾರೆ.
ಅ.22ಕ್ಕೆ ಶಿಮುದೇವಿಗೆ ವೈದ್ಯರು ಪ್ರಸವದ ದಿನಾಂಕ ಕೊಟ್ಟಿದ್ದರು. ಇದೇ ಕಾರಣಕ್ಕೆ ಅ.22ಕ್ಕೆ ರಂಜೀತ್ ರಜೆಯ ನಿಮಿತ್ತ ಮನೆಗೆ ಬರುವವರಿದ್ದರು. ಆದರೆ ವಿಧಿ ಬರೆದಿದ್ದೇ ಬೇರೆ. ಅ.21ರಂದು ನುಸುಳುಕೋರರೊಂದಿಗೆ ನಡೆದ ಕಾಳಗದಲ್ಲಿ ರಂಜೀತ್ ಅಸುನೀಗಿದರು.
ಸಕಲ ಮಿಲಿಟರಿ ಗೌರವದೊಂದಿಗೆ ರಂಜೀತ್ ಅವರ ಅಂತ್ಯ ಸಂಸ್ಕಾರವನ್ನು ಸುಲಿಗಂ ಗ್ರಾಮದಲ್ಲಿ ನಡೆಸಲಾಯಿತು. ಒಂದೆಡೆ 10 ವರ್ಷ ಕಾದು ಮಗು ಮನೆಗೆ ಬಂದ ಖುಷಿಯಾದರೆ, ಮತ್ತೊಂದೆಡೆ ಪತಿಯನ್ನು ಕಳೆದುಕೊಂಡ ದುಃಖ, ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
Comments are closed.