ಧಾರವಾಡ: ವೃದ್ಧ ತಂದೆಯನ್ನು ನೋಡಿಕೊಳ್ಳಲಾಗದ ಪಾಪಿ ಮಗ ತಂದೆಯನ್ನು ಹೆದ್ದಾರಿ ಪಕ್ಕದ ಬೈಪಾಸ್ ರಸ್ತೆಯಲ್ಲಿ ಬಿಟ್ಟು ಹೋಗಿರುವ ಮನಕಲಕುವ ಘಟನೆ ಹುಬ್ಬಳ್ಳಿ-ಧಾರವಾಡ ಹೆದ್ದಾರಿಯಲ್ಲಿ ನಡೆದಿದೆ.
ಧಾರವಾಡ ಹೊರವಲಯದ ಹೆದ್ದಾರಿಯ ಮನ್ಸೂರ ಗ್ರಾಮದ ಬಳಿ ಪುತ್ರ ವಯಸ್ಸಾದ ತಂದೆಯನ್ನು ಬಿಟ್ಟು ಹೋಗಿದ್ದು, ವೃದ್ಧ ರಸ್ತೆ ಪಕ್ಕದಲ್ಲಿ ನರಳಾಡುತ್ತಿದ್ದನ್ನು ಕಂಡ ಗ್ರಾಮಸ್ಥರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೃದ್ಧ ವ್ಯಕ್ತಿ ತನ್ನ ಹೆಸರನ್ನು ವಿಲ್ಸಂಟ್ ಎಂದು ಹೇಳುತ್ತಿದ್ದು, ಮಗ ಸ್ಯಾಮುವೆಲ್ ಬೆಳಗ್ಗೆ ಕಾರಿನಲ್ಲಿ ತಂದು ಬಿಟ್ಟು ಹೋಗಿರುವುದಾಗಿ ಮಾಹಿತಿ ನೀಡಿದ್ದಾರೆ. ಅಲ್ಲದೇ ತಾವು ಬೆಂಗಳೂರು ಯಶವಂತಪುರ 10ನೇ ಬ್ಲಾಕ್ ನಿವಾಸಿ ಎಂದು ಹೇಳಿದ್ದಾರೆ.
ರಸ್ತೆ ಪಕ್ಕದಲ್ಲಿ ಒದ್ದಾಟ ನಡೆಸಿದ್ದ ವೃದ್ಧರನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ವಿಲ್ಸಂಟ್ ಅವರನ್ನು ಅ್ಯಬುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Comments are closed.