ಕರ್ನಾಟಕ

ನನ್ನ ಮೇಲೆ ಹಲ್ಲೆ ನಡೆದಿರುವುದಕ್ಕೆ ಸಿಸಿಟಿವಿ ಸಾಕ್ಷಿ ಇದೆ: ತಂದೆ ದುನಿಯಾ ವಿಜಿ ವಿರುದ್ಧ ದೂರು ನೀಡಿದ ಪುತ್ರಿ

Pinterest LinkedIn Tumblr


ಬೆಂಗಳೂರು: ಫೇಕ್ ಕಂಪ್ಲೇಂಟ್ ಕೊಡುವುದ್ದಕ್ಕೆ ನನಗೆ ತಲೆ ಸರಿಯಿಲ್ಲವಾ? ಏನಾದರೂ ನಡೆದಿದ್ದರೆ ತಾನೇ ದೂರು ನೀಡುವುದು ಎಂದು ನಟ ದುನಿಯಾ ವಿಜಯ್ ಪುತ್ರಿ ಮೋನಿಕಾ ಪ್ರತಿಕ್ರಿಯೆ ನೀಡಿದ್ದಾರೆ.

ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮೋನಿಕಾ ಅವರು, ಜಗಳ ಆಗಿ ನನ್ನ ಮೇಲೆ ಹಲ್ಲೆ ಆಗಿರುವುದ್ದಕ್ಕೆ ನಾನು ದೂರು ನೀಡಿದ್ದೇನೆ. ಆದರೆ ಆಸ್ಪತ್ರೆಯಲ್ಲಿದ್ದಾಗ ನನ್ನ ತಂದೆ ನನಗೆ ಕರೆ ಮಾಡಿ ಸಂಪರ್ಕ ಮಾಡಿಲ್ಲ. ನನ್ನ ವಸ್ತುಗಳನ್ನು ತೆಗೆದುಕೊಂಡು ಬರಲು ಅಪ್ಪನ ಮನೆಗೆ ತೆರಳಿದ್ದೆ. ಈ ವೇಳೆ ಮನೆಗೆ ಹೋಗುತ್ತಿದಂತೆ ಲಾಕ್ ಮಾಡಿ ಕೀರ್ತಿ ಪರ ಪೊಲೀಸರಿಗೆ ಹೇಳಿಕೆ ನೀಡುವಂತೆ ಒತ್ತಡ ಹಾಕಿದರು. ಇದಕ್ಕೆ ನಿರಾಕರಿಸಿದಕ್ಕೆ ನನ್ನ ಮೇಲೆ 4 ರಿಂದ 5 ಜನ ಸೇರಿ ಹಲ್ಲೆ ನಡೆಸಿದರು ಎಂದು ಆರೋಪಿಸಿದ್ದಾರೆ.

ಸದ್ಯ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ವಿಡಿಯೋ ಮೊಬೈಲ್‍ನಲ್ಲಿ ಸೆರೆ ಹಿಡಿದಿರುವ ದೃಶ್ಯಗಳು ಮಾತ್ರ. ಮನೆಯ ಸಿಸಿಟಿವಿ ದೃಶ್ಯಗಳಲ್ಲಿ ನನ್ನ ಮೇಲೆ ಹಲ್ಲೆ ನಡೆಸಿದ ದೃಶ್ಯಗಳು ದಾಖಲಾಗಿದೆ. ಇದನ್ನು ಪರಿಶೀಲನೆ ನಡೆಸಬೇಕು. ಈಗಾಗಲೇ ಪೊಲೀಸರಿಗೆ ದೂರು ನೀಡಿರುವುದರಿಂದ ಮುಂದಿನ ಕ್ರಮ ಅವರೇ ಕೈಗೊಳ್ಳುತ್ತಾರೆ ಎಂದರು.

ನನ್ನ ಮೇಲೆ ನಡೆಸಿದ ಬಳಿಕ ನನ್ನನ್ನು ಗೇಟ್‍ನಿಂದ ಹೊರ ಹಾಕಿದ್ದರು. ನನಗೆ ಕೋಪ ಬಂದ ಕಾರಣ ನಾನು ಮನೆ ಹೊರಭಾಗದಿಂದ ಕಲ್ಲನ್ನು ತೆಗೆದುಕೊಂಡು ಬಾಗಿಲಿಗೆ ಹೊಡೆದೆ. ಈ ವೇಳೆ ಅವರು ನನಗೆ ಏನೆಂದು ಬೈದರೋ, ನಾನು ಅದನ್ನೇ ಬೈದೆ ಅಷ್ಟೇ. ನಡೆದ ಘಟನೆ ಎಲ್ಲವೂ ಪೂರ್ವ ನಿಗದಿಯಂತೆ ಮಾಡಿದ್ದಾರೆ. ನಾನು ನನ್ನ ಬಟ್ಟೆ ಹಾಗೂ ಕಾರಿನ ದಾಖಲಾತಿ ಸೇರಿದಂತೆ ಕೆಲ ವಸ್ತುಗಳನ್ನು ತರಲು ಒಬ್ಬಳೇ ಹೋಗಿದ್ದೆ. ಒಂದೊಮ್ಮೆ ಜಗಳ ಮಾಡುವ ಉದ್ದೇಶ ಹೊಂದಿದ್ದರೆ. ನಾನು 5 ಜನರನ್ನು ಕರೆದುಕೊಂಡು ಹೋಗುತ್ತಿದೆ ವಿನಃ, ಒಬ್ಬಳೇ ಹೋಗುತ್ತಿರಲಿಲ್ಲ ಎಂದರು.

ನಿರಂತರ ಜಗಳ:
ಕೀರ್ತಿ ಗೌಡ ಮನೆಗೆ ಬಂದ ಬಳಿಕ ಮನೆಯಲ್ಲಿ ನಿರಂತರವಾಗಿ ಜಗಳ ನಡೆಯುತ್ತಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ನಾನು, ನನ್ನ ತಂಗಿ ಹೇಳಿಕೊಳ್ಳಲು ಸಾಧ್ಯವಾಗಿರಲಿಲ್ಲ. ಮನೆಯಲ್ಲಿ ಇದ್ದ ವೇಳೆ ನನ್ನ ತಂಗಿಯ ಮೇಲೆಯೂ ಒತ್ತಡ ಹಾಕಿ ಅಮ್ಮನ ವಿರುದ್ಧ ದೂರು ನೀಡಲು ತಿಳಿಸಿದ್ದರು. ಆದರೆ ನಾವು ಒಪ್ಪಿಗೆ ನೀಡಿರಲಿಲ್ಲ. ಅಪ್ಪ ಜೈಲಿಂದ ಬಂದ ಮೇಲೆ ಹೇಗೆ ಇದ್ದಾರೆಂಬುದು ನನಗೆ ಗೊತ್ತಿಲ್ಲ. ಏಕೆಂದರೆ ಅವರು ಬಂದ ಕೂಡಲೇ 15 ದಿನ ಪ್ರವಾಸಕ್ಕೆ ಸಿದ್ಧರಾದರು. ಈ ವೇಳೆ ನಮ್ಮನ್ನು ಮನೆಯಲ್ಲಿ ಯಾರು ನೋಡಿಕೊಳ್ಳಲು ಇಲ್ಲದ ಕಾರಣ ಅಮ್ಮನ ಮನೆಗೆ ಬಂದೆ. 15 ದಿನದ ಬಳಿಕ ನನ್ನ ವಸ್ತುಗಳನ್ನು ತರಲು ಮನೆಗೆ ತೆರಳಿದ್ದೆ ಎಂದು ತಿಳಿಸಿದ್ದಾರೆ.

ನನ್ನ ಮೇಲೆ ಹಲ್ಲೆ ನಡೆಸಿದ ವೇಳೆ ಕೈ ಗೆ ರಕ್ತ ಬರುವಂತೆ ಗಾಯವಾಗಿಲ್ಲ. ಆದರೆ ಮೂಳೆಗೆ ಗಾಯವಾಗಿದೆ. ವೈದ್ಯರು ಚಿಕಿತ್ಸೆ ನೀಡಿ ಮತ್ತೆ ನೋವು ಹೆಚ್ಚಾದರೆ ಬರುವಂತೆ ಸಲಹೆ ನೀಡಿದ್ದಾರೆ. ಆದ್ದರಿಂದ ನಾನು ಮನೆಗೆ ತೆರಳುತ್ತಿದ್ದೇನೆ. ರಕ್ತ ಬರುವಂತೆ ಮಾಡಿದರೆ ಮಾತ್ರ ಅದು ಹಲ್ಲೆ ಎಂದು ಕರೆಯುವುದಾದರೆ ನಾನು ಏನು ಮಾಡಲು ಸಾಧ್ಯವಿಲ್ಲ. ಇಲ್ಲಿ ನಾನು ಯಾರ ಮೇಲೂ ಹೋರಾಟ ಮಾಡುತ್ತಿಲ್ಲ. ಪೊಲೀಸರೆ ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ಇದೇ ವೇಳೆ ಮಾತನಾಡಿದ ದುನಿಯಾ ವಿಜಯ್ ಪತ್ನಿ ನಾಗರತ್ನ ಅವರು, ನಾವು ಜೀವದ ಆಸೆ ಬಿಟ್ಟು ಬಿಟ್ಟಿದ್ದೇವೆ. ಅಪ್ಪನೇ ಈ ರೀತಿ ಮಾಡುತ್ತಾರೆ ಎಂದರೆ ಏನು ಹೇಳಲು ಸಾಧ್ಯ. ಅವರು ಸಿನಿಮಾ ಸೆಲೆಬ್ರೆಟಿ ಆಗಿರುವುದಿಂದ ಎಲ್ಲರೂ ಬೆಂಬಲ ನೀಡುತ್ತಾರೆ. ಸಾಯಿಸುವುದಾದರೆ ಸಾಯಿಸಲಿ. ಈ ಜೀವನವೇ ಸಾಕಾಗಿದೆ. ನನ್ನ ಮಕ್ಕಳು ನನಗೆ ಎಂದು ಭಾರ ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Comments are closed.