ಬೆಂಗಳೂರು(ನ.10): ಕರ್ನಾಟಕ ವಿಧಾನಸಭಾ ಉಪಚುನಾವಣೆಗೆ ಕೇಂದ್ರ ಚುನಾವಣೆ ಆಯೋಗವು ದಿನಾಂಕ ನಿಗದಿ ಮಾಡಿದೆ. ಮುಂಬರುವ ಡಿ.5ರಂದು ನಡೆಯಲಿರುವ ಈ ಉಪಚುನಾವಣೆ ಗೆಲ್ಲಲು ಆಡಳಿತರೂಢ ಬಿಜೆಪಿ ಸೇರಿದಂತೆ ಕಾಂಗ್ರೆಸ್-ಜೆಡಿಎಸ್ ಕೂಡ ಭಾರೀ ಸರ್ಕಸ್ ನಡೆಸುತ್ತಿವೆ. ಇತ್ತ ಕಾಂಗ್ರೆಸ್ ಜೆಡಿಎಸ್ ಜೊತೆಗಿನ ಮೈತ್ರಿ ತೊರೆದು ಏಕಾಂಗಿ ಹೋರಾಟಕ್ಕೆ ಸಜ್ಜಾಗಿದೆ. ಅತ್ತ ಜೆಡಿಎಸ್ ಪ್ರತ್ಯೇಕವಾಗಿ ಚುನಾವಣೆ ಎದುರಿಸುವುದಾಗಿ ಘೋಷಿಸಿದೆ. ಈ ಮಧ್ಯೆ ಹೇಗಾದರೂ ಸರಿ ಉಪಚುನಾವಣೆ ಗೆದ್ದು ರಾಜ್ಯಾಧಿಕಾರ ಉಳಿಸಿಕೊಳ್ಳಬೇಕೆಂದು ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಜಿದ್ದಿಗೆ ಬಿದ್ದಿದೆ.
ಈ ಮಧ್ಯೆ ಅನರ್ಹ ಶಾಸಕರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಲು ವಿಳಂಬ ಮಾಡುತ್ತಿರುವಾಗಲೇ ಕರ್ನಾಟಕ ವಿಧಾನಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಪಕ್ರಿಯೆ ಶುರುವಾಗುತ್ತಿದೆ. ರಾಜ್ಯದ 15 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲು ಮುಂದಾಗಿರುವ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ರಾಜ್ಯ ಚುನಾವಣಾ ಆಯೋಗಕ್ಕೆ ನಾಳೆಯಿಂದ ನಾಮಪತ್ರ ಸಲ್ಲಿಸಲಿದ್ಧಾರೆ. ಸುಪ್ರೀಂಕೋರ್ಟ್ ತೀರ್ಪು ಇನ್ನೂ ನೀಡದ ಕಾರಣ ಅನರ್ಹ ಶಾಸಕರು ನಾಮಪತ್ರ ಸಲ್ಲಿಸಲಾಗುತ್ತಿಲ್ಲ.
ನವೆಂಬರ್ 11ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗುತ್ತದೆ. ನಾಮಪತ್ರ ಸಲ್ಲಿಕೆಗೆ ಇದೇ 18ನೇ ತರೀಕು ಕೊನೆಯ ದಿನಾಂಕ. ನಾಮಪತ್ರ ಪರಿಶೀಲನೆ ನ.19ನೇ ತಾರೀಕಿನಂದು ನಡೆಯಲಿದೆ. ಅಭ್ಯರ್ಥಿಗಳು ನಾಮಪತ್ರ ವಾಪಸ್ ಹಿಂತೆಗೆದುಕೊಳ್ಳಲು ನವೆಂಬರ್ 21ರವೆಗೂ ಅವಕಾಶ ಮಾಡಿಕೊಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ಧಾರೆ.
ಮುಂದಿನ ಡಿಸೆಂಬರ್ 5ಕ್ಕೆ 15 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ನಂತರ ಡಿ.9ರಂದು ಫಲಿತಾಂಶ ಪ್ರಕಟವಾಗಲಿದೆ. 15 ಮತ ಕ್ಷೇತ್ರಗಳಲ್ಲಿ ಒಟ್ಟು 4185 ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗಿದೆ. 22598 ಚುನಾವಣೆ ಸಿಬ್ಬಂದಿ ನೇಮಕ ಮಾಡಲಾಗಿದೆ. ಈ 15 ಕ್ಷೇತ್ರಗಳಲ್ಲಿ ಒಟ್ಟು 37,50565 ಮತದಾರರಿದ್ದಾರೆ. ಅದರಲ್ಲಿ 19,1791 ಪುರುಷರು, 18,37375 ಮಹಿಳೆಯರು ಮತ್ತು 399 ಇತರೆ ಮತದಾರರಿದ್ದಾರೆ ಎಂದು ಸಂಜೀವ್ ಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯ್ಲಲಿ ಹೀಗೆ ಮಾತು ಮುಂದುವರೆಸಿದ ಸಂಜೀವ್ ಕುಮಾರ್, 18 ರಿಂದ 19 ವರ್ಷದ 71,613 ಯುವ ಮತದಾರರು ಇದ್ದಾರೆ. ಯಾವುದೇ ಭಯ, ಆತಂಕ ಇಲ್ಲದೆ ಎಲ್ಲರೂ ಬಂದು ಮತದಾನ ಮಾಡಬಹುದು. ಮತದಾನಕ್ಕೆ ಬೇಕಾದ ಎಲ್ಲ ಭದ್ರತೆಯನ್ನು ನಾವು ವ್ಯವಸ್ಥೆ ಮಾಡಿದ್ದೇವೆ. ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರು, ರಾಣೆಬೆನ್ನೂರು, ವಿಜಯ ನಗರ, ಚಿಕ್ಕಬಳ್ಳಾಪುರ, ಕೆ.ಆರ್ ಪರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆ.ಆರ್. ಪೇಟೆ, ಹುಣಸೂರು ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಎಲ್ಲಾ ಕ್ಷೇತ್ರಗಳಲ್ಲೂ ನಾಳೆಯಿಂದ ನೀತಿ ಸಂಹಿತೆ ಜಾರಿಯಾಗಲಿದೆ ಎಂದರು.
ಚುನಾವಣೆ ಆಯೋಗ ಯಾವುದೇ ದ್ವಂದ್ವದಲ್ಲಿ ಇಲ್ಲ. ಅನರ್ಹ ಶಾಸಕರ ವಿಷಯ ಸುಪ್ರೀಂಕೋರ್ಟ್ನಲ್ಲೇ ಇರುವುದರಿಂದ ನಾನು ಏನೂ ಹೇಳುವುದಿಲ್ಲ. ಸುಪ್ರೀಂಕೋರ್ಟ್ ಅನರ್ಹ ಶಾಸಕರ ಪ್ರಕರಣಗಳಲ್ಲಿ ಬುಧವಾರ ತೀರ್ಪು ನೀಡಲಿದೆ. ಹೀಗಾಗಿ ಎಲ್ಲರೂ ಕಾದು ನೋಡಿ ಎಂದಿದ್ದಾರೆ ಸಂಜೀವ್ ಕುಮಾರ್.
Comments are closed.