ಲಖನೌ (ಉತ್ತರ ಪ್ರದೇಶ): ದೇಶ ಕಂಡ ಶತಮಾನಗಳ ಸುದೀರ್ಘ ವಿವಾದವೊಂದು ಮುಗಿದೇ ಹೋಯ್ತು ಎಂದು ಭಾವಿಸುತ್ತಿರುವಾಗಲೇ ಮತ್ತೆ ಎಡೆ ಎತ್ತಿದೆ. ಅಯೋಧ್ಯಾ ಭೂ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ಪುನರ್ ವಿರ್ಮರ್ಶಾ ಮೇಲ್ಮನವಿ ಸಲ್ಲಿಸಲು ಮುಸ್ಲಿಂ ಸಂಘಟನೆಗಳು ತೀರ್ಮಾನಿಸಿವೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಸುನ್ನಿ ವಕ್ಫ್ ಬೋರ್ಡ್ ಹಾಗೂ ಜಮಿಯತ್ ಉಲೇಮಾ ಇ ಹಿಂದ್ ಸಂಘಟನೆಗಳು ಪ್ರತ್ಯೇಕವಾಗಿ ಸಭೆ ಸೇರಿ ಒಕ್ಕೊರಲ ತೀರ್ಮಾನ ಕೈಗೊಂಡಿವೆ. ಭಾನುವಾರ ದೇಶದ ವಿವಿಧ ಭಾಗಗಳಲ್ಲಿ ನಡೆದ ಮೂರೂ ಸಂಘಟನೆಗಳ ಸಭೆಯಲ್ಲಿ ಅಯೋಧ್ಯಾ ವಿವಾದದ ಪುನರ್ ವಿಮರ್ಶಾ ಅರ್ಜಿ ಸಲ್ಲಿಕೆ ಪರ ಒಕ್ಕೊರಲು ನಿಲುವು ಕೈಗೊಳ್ಳಲಾಗಿದೆ.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸಭೆಯಲ್ಲಿ ಸುನ್ನಿ ವಕ್ಫ್ ಬೋರ್ಡ್ ವಕೀಲರೂ ಭಾಗವಹಿಸಿದ್ದರು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಸುನ್ನಿ ವಕ್ಫ್ ಬೋರ್ಡ್ ಪರ ವಕೀಲ ಝಫರ್ಯಾಬ್ ಗಿಲಾನಿ, ಸುಪ್ರೀಂ ಕೋರ್ಟ್ ಆದೇಶದನ್ವಯ ಸರ್ಕಾರ ನೀಡಲಿರುವ 5 ಎಕರೆ ಭೂಮಿ ನಮಗೆ ಬೇಡ ಎಂದರು. ಅಷ್ಟೇ ಅಲ್ಲ, ತಿಂಗಳೊಳಗೆ ಪುನರ್ ವಿಮರ್ಶಾ ಅರ್ಜಿ ಸಲ್ಲಿಸುತ್ತೇವೆ ಎಂದು ಪ್ರಕಟಿಸಿದರು. ಸುಪ್ರೀಂ ತೀರ್ಪಿನ ವಿಚಾರದಲ್ಲಿ ಮೇಲ್ಮನವಿ ಸಲ್ಲಿಸಲು ಕಾರಣಗಳೇನು ಎಂದೂ ಗಿಲಾನಿ ವಿವರಿಸಿದರು.
ಸುಪ್ರೀಂ ತೀರ್ಪಿಗೆ ಮೇಲ್ಮನವಿ ಸಲ್ಲಿಸಲು 5 ಪ್ರಮುಖ ಕಾರಣಗಳು..!
1 – ಸುಪ್ರೀಂ ತೀರ್ಪಿನಲ್ಲಿ ಮುಸ್ಲಿಂ ಕಕ್ಷಿದಾರರಿಗೆ ಅನ್ಯಾಯವಾಗಿದೆ
2 – ವಿವಾದಿತ ಸ್ಥಳವನ್ನು ಬಿಟ್ಟು ಬೇರೆಡೆ ಭೂಮಿ ನೀಡಿರುವುದು ಸರಿಯಲ್ಲ
3 – ಷರಿಯಾ ಕಾನೂನಿನ ಅನ್ವಯ ಬೇರೆಡೆ ನೀಡಿರುವ ಭೂಮಿ ತೆಗೆದುಕೊಳ್ಳಬಾರದು
4 – ಷರಿಯಾ ಕಾನೂನಿನ ಪ್ರಕಾರ ಮಸೀದಿ ಇದ್ದ ಸ್ಥಳದಲ್ಲಿಯೇ ಮತ್ತೆ ಕಟ್ಟಬೇಕು
5 – ಮಸೀದಿ ಇದ್ದ ಸ್ಥಳಕ್ಕೆ ಬದಲಾಗಿ ಬೇರೆಡೆ ಮಸೀದಿ ನಿರ್ಮಾಣಕ್ಕೆ ಸ್ಥಳ ಪಡೆಯುವುದು ಅಥವಾ ಹಣ ಪಡೆಯುವುದು ಷರಿಯಾ ಕಾನೂನಿನ ಪ್ರಕಾರ ನಿಷಿದ್ಧ
ಸುಪ್ರೀಂ ತೀರ್ಪಿನಲ್ಲಿ ಏನಿತ್ತು..?
ನವೆಂಬರ್ 9ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ವಿವಾದಿತ 2.77 ಎಕರೆ ಭೂಮಿಯನ್ನು ಅದರ ಹಕ್ಕುದಾರ ರಾಮಲಲ್ಲಾಗೆ ಬಿಟ್ಟುಕೊಡುವಂತೆ ತೀರ್ಪು ನೀಡಿತ್ತು. ಮುಸ್ಲಿಂ ಕಕ್ಷಿದಾರರಿಗೆ ಬಾಬ್ರಿ ಮಸೀದಿ ಕಟ್ಟಿಕೊಳ್ಳಲು ಅಯೋಧ್ಯೆಯಲ್ಲೇ 5 ಎಕರೆ ಭೂಮಿ ನೀಡಲು ಆದೇಶಿಸಿತ್ತು. ಅಷ್ಟೇ ಅಲ್ಲ, ಈ ಪ್ರಕರಣದ ಮತ್ತೊಬ್ಬ ದಾವೆದಾರ ಅಖಾರಾ ಪರಿಷತ್ಗೆ ರಾಮಮಂದಿರ ನಿರ್ಮಾಣ ಟ್ರಸ್ಟ್ನಲ್ಲಿ ಸ್ಥಾನ ನೀಡುವಂತೆ ಸೂಚಿಸಿತ್ತು.
ಭಾನುವಾರ ಸಭೆ ಮೇಲೆ ಸಭೆ..!
ಸುಪ್ರೀಂ ತೀರ್ಪು ಹೊರಬಿದ್ದ ಸಂದರ್ಭದಲ್ಲಿ ಮೇಲ್ಮನವಿ ಸಲ್ಲಿಸೋದಿಲ್ಲ ಎಂದು ಸುನ್ನಿ ವಕ್ಫ್ ಬೋರ್ಡ್ ಹೇಳಿತ್ತು. ಹೀಗಾಗಿ, ವಿವಾದ ಸುಖಾಂತ್ಯ ಕಂಡಿದೆ ಎಂದೇ ಭಾವಿಸಲಾಗಿತ್ತು. ಆದ್ರೆ, ಭಾನುವಾರ ದೇಶದ 2 ಅತಿದೊಡ್ಡ ಮುಸ್ಲಿಂ ಸಂಘಟನೆಗಳು ಸಭೆ ನಡೆಸಿದವು. ಜಮಿಯತ್ ಉಲೇಮಾ ಇ ಹಿಂದ್ ಸಂಘಟನೆ ಸಭೆ ನಡೆಸಿ ಮೇಲ್ಮನವಿ ಪರ ಒಕ್ಕೊರಲ ನಿರ್ಣಯ ಕೈಗೊಂಡಿತು. ಇದರ ಬೆನ್ನಲ್ಲೇ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕೂಡಾ ಸುಪ್ರೀಂ ತೀರ್ಪಿನ ವಿರುದ್ಧ ಪುನರ್ ವಿಮರ್ಶಾ ಅರ್ಜಿ ಸಲ್ಲಿಸಲು ಸಮ್ಮತಿಸಿತು. ಈ ಮೂಲಕ, ಮುಗಿದೇ ಹೋಯ್ತು ಎಂದು ಭಾವಿಸಲಾಗಿದ್ದ ಅಯೋಧ್ಯಾ ವಿವಾದ ಸುಪ್ರೀಂ ಅಂಗಳದಲ್ಲಿ ಮತ್ತೆ ಮಾಡಲು ಸಜ್ಜಾಗಿ ನಿಲ್ಲುವಂತಾಯ್ತು.
Comments are closed.