ರಾಷ್ಟ್ರೀಯ

ಮೇ 3ರವರೆಗೆ ದೇಶಾದ್ಯಂತ ಲಾಕ್ ಡೌನ್ ಮುಂದೂಡಿದ ಪ್ರಧಾನಿ ಮೋದಿ

Pinterest LinkedIn Tumblr

ನವದೆಹಲಿ: ದೇಶದ ಜನತೆಯ ಸಹಕಾರದಿಂದ ಕೊರೋನಾ ಒಂದಷ್ಟು ಮಟ್ಟಿದೆ ನಿಯಂತ್ರಣಕ್ಕೆ ಬರಲು ಅನುಕೂಲವಾಗಿದ್ದು, ಕೊರೋನಾ ಹತ್ತಿಕ್ಕಲು ದೇಶದಾದ್ಯಂತ ಮೇ 3ರವರೆಗೂ ಲಾಕ್’ಡೌನ್ ಮುಂದೂಡುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ.

ಕೊರೊನಾ ವೈರಸ್ ದಾಳಿಯ ಹಿನ್ನೆಲೆಯಲ್ಲಿ ದೇಶದಲ್ಲಿ ಹೇರಲಾಗಿದ್ದ 21 ದಿನಗಳ ಲಾಕ್‌ಡೌನ್ ಅವಧಿ ಮುಕ್ತಾಯವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಂದು ದೇಶವನ್ನುದ್ದೇಶಿಸಿ ಮಾತನಾಡಿದರು.

ಲಾಕ್‌ಡೌನ್ ಅವಧಿಯಲ್ಲಿ ದೇಶ ತೋರಿದ ಸಂಯಮ ಹಾಗೂ ಪ್ರಬುದ್ಧತೆಯನ್ನು ಕೊಂಡಾಡಿದ ಪ್ರಧಾನಿ ಮೋದಿ, ನಮ್ಮ ಒಗ್ಗಟ್ಟಿನ ಪ್ರದರ್ಶನ ಕಂಡು ಇಡೀ ವಿಶ್ವವೇ ಬೆರಗಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಲಾಕ್‌ ಸಮಯದಲ್ಲಿ ನಾವು ತೋರಿದ ಒಗ್ಗಟ್ಟು ಪ್ರದರ್ಶನದಿಂದಾಗಿ, ದೇಶ ಕೊರೊನಾ ವೈರಸ್ ವಿರುದ್ಧದ ಸಮರದಲ್ಲಿ ವಿಜಯದತ್ತ ಹೆಜ್ಜೆಯಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಪ್ರಧಾನಿ ಮೋದಿ ಈ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ಎಲ್ಲಾ ಸಂಕಷ್ಟಗಳನ್ನೂ ಮೀರಿ ದೇಶದ ಜನತೆ ಲಾಕ್‌ಡೌನ್ ಯಶಸ್ವಿಗೊಳಿಸಿರುವುದಕ್ಕೆ ನಾನು ದೇಶವಾಸಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.

ಅನ್ಯ ದೇಶಗಳಿಗೆ ಹೋಲಿಸಿದರೆ ಭಾರತ ಕೊರೊನಾ ವೈರಸ್ ವಿರುದ್ಧ ಕೈಗೊಂಡಿರುವ ಕ್ರಮಗಳು ಪರಿಣಾಮಕಾರಿಯಾಗಿವೆ ಎಂದು ಪ್ರಧಾನಿ ಮೋದಿ ಹೇಳಿದರು.

ವಿಶ್ವದ ಬಲಿಷ್ಠ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಸ್ಥಿತಿ ಉತ್ತಮವಾಗಿದೆ ಎಂದು ಮೋಧಿ ಸ್ಪಷ್ಟಪಡಿಸಿದರು.

ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ನಾವು ಆಯ್ಕೆ ಮಾಡಿದ ಹಾದಿ ಸರಿಯಾಗಿದ್ದು, ಇನ್ನೂ ಮುಂದೆಯೂ ಇದೇ ಹಾದಿಯಲ್ಲಿ ಸಾಗಬೇಕಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

ಆರ್ಥಿಕ ಹೊಡೆತವನ್ನು ಸಹಿಸಿಕೊಂಡಾದರೂ ಸರಿ ದೇಶವಾಸಿಗಳ ಜೀವ ರಕ್ಷಣೆಗೆ ಕೇಂದ್ರ ಸರ್ಕಾರ ಕಟಿಬದ್ಧವಾಗಿದೆ ಎಂದು ಈ ವೇಳೆ ಪ್ರಧಾನಿ ಮೋದಿ ದೇಶಕ್ಕೆ ಭರವಸೆ ನೀಡಿದರು.

ಇದೇ ಕಾರಣಕ್ಕೆ ಲಾಕ್‌ಡೌನ್‌ನ್ನು ಇದೇ ಮೇ.3ರವೆರೆಗೆ ವಿಸ್ತರಿಸುವ ನಿರ್ಣಯ ಕೈಗೊಂಡಿರುವುದಾಗಿ ಪ್ರಧಾನಿ ಮೋದಿ ಸ್ಪಷ್ಟಪಡಿಸಿದರು. ತಜ್ಞರೊಂದಿಗೆ ಸಮಾಲೋಚನೆ ನಡೆಸಿದ ಬಳಿಕವೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೋದಿ ಸ್ಪಷ್ಟಪಡಿಸಿದರು.

ಆದರೆ ಏ.20ರ ಬಳಿಕ ಪರಿಸ್ಥಿತಿಯನ್ನು ಗಮನಿಸಿ ದೇಶದ ಕೆಲವು ರಾಜ್ಯಗಳಲ್ಲಿ ಜಿಲ್ಲಾವಾರು ಲಾಕ್‌ಡೌನ್‌ನ್ನು ಸರಳಗೊಳಿಸುವುದಾಗಿಯೂ ಪ್ರಧಾನಿ ಮೋದಿ ಮಾಹಿತಿ ನೀಡಿದ್ದಾರೆ. ಆದರೆ ವೈರಸ್ ನಿಯಂತ್ರಣಕ್ಕೆ ಬಂದಿದ್ದು, ಜನಜೀವನ ಸಹಜವಾಗಿದ್ದರೆ ಮಾತ್ರ ಈ ರಿಯಾಯ್ತಿ ನೀಡಲಾಗುವುದು ಎಂದೂ ಮೋದಿ ಸ್ಪಷ್ಡಪಡಿಸಿದರು.

ಪ್ರಧಾನಿ ಮೋದಿ ದೇಶದ ಜನತೆಗೆ ಮಾಡಿದ 7 ಮನವಿ:
1. ಮನೆಯ ಹಿರಿಯ ಸದಸ್ಯರ ಆರೋಗ್ಯದತ್ತ ಹೆಚ್ಚನ ಗಮನ ಕೊಡಬೇಕು
2. ಲಾಕ್‌ಡೌನ್ ಆದೇಶ ಕಟ್ಟುನಿಟ್ಟಾಗಿ ಪಾಲಿಸಬೇಕು.
3. ಆಯುಷ್ಯ ಮಂತ್ರಾಲಯದ ಸಲಹೆಯನ್ನು ಕಡ್ಡಾಯವಾಗಿ ಪಾಲಿಸಬೇಕು
4. ಆರೋಗ್ಯ ಸೇತು ಮೊಬೈಲ್ ಆಪ್ ಡೌನ್‌ಲೋಡ್ ಮಾಡಿಕೊಂಡು ಇತರರಿಗೂ ಇದರ ಕುರಿತು ಮಾಹಿತಿ ನೀಡಬೇಕು
5. ಸಂಕಷ್ಟದಲ್ಲಿರುವ ಬಡವರ ನೆರವಿಗೆ ಬಂದು ಮಾನವೀಯತೆ ಮೆರೆಯಬೇಕು
6. ಸಹೋದ್ಯೋಗಿಗಳೊಂದಿಗೆ ಸಂವೇದನೆ ಇರಲಿ, ಯಾರನ್ನೂ ಕೆಲಸದಿಂದ ತೆಗೆಯಬಾರದು
7. ವೈದ್ಯ ಸಮುದಾಯ, ಪೊಲೀಸ್ ಇಲಾಖೆ ಹಾಗೂ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಎಲ್ಲರನ್ನೂ ಗೌರವದಿಂದ ಕಾಣಬೇಕು.

Comments are closed.