ಕರಾವಳಿ

ಚೈತ್ರಾ ಕುಂದಾಪುರ ಮೇಲೆ ಮತ್ತೊಂದು‌ ವಂಚನೆ ಪ್ರಕರಣ ದಾಖಲು; ಬಟ್ಟೆ ಅಂಗಡಿ ಹಾಕಿಸಿಕೊಡುವುದಾಗಿ 5 ಲಕ್ಷ ದೋಖಾ..!

Pinterest LinkedIn Tumblr

ಉಡುಪಿ: ಬಟ್ಟೆ ಅಂಗಡಿಯನ್ನು ಹಾಕಿಕೊಡುವುದಾಗಿ ನಂಬಿಸಿ ಐದು ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಮತ್ತೊಂದು ಆರೋಪ ಚೈತ್ರಾ ಕುಂದಾಪುರ ಮೇಲೆ ಬಂದಿದೆ.

ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ 5 ಕೋಟಿ ವಂಚನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಚೈತ್ರಾ ಕುಂದಾಪುರ ಬಂಧನಕ್ಕೊಳಗಾಗಿದ್ದು ಸಿಸಿಬಿ ವಶದಲ್ಲಿದ್ದಾರೆ. ಈ ಬೆನ್ನೆಲ್ಲೆ ಮತ್ತೊಂದು ವಂಚನೆ ಆರೋಪ ಕೇಳಿಬಂದಿದೆ. ಈ ಹಿಂದೆ ಉಡುಪಿ ಕೋಡಿಯ ವ್ಯಕ್ತಿಯೊಬ್ಬರಿಗೆ ಬಟ್ಟೆ ಅಂಗಡಿ ತೆರೆಯಲು ಅಗತ್ಯ ಅನುಮತಿ, ವ್ಯವಸ್ಥೆ ಮಾಡಿಕೊಡುವುದಾಗಿ ನಂಬಿಸಿ ಐದು ಲಕ್ಷ ಹಣ ಪಡೆದು ಆ ನಂತರ ಬೆದರಿಸಿ ಹಣ ನೀಡದೆ ವಂಚನೆ ಮಾಡಿದ್ದಾರೆ ಎಂದು ಕೋಟ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಮೀನು ವ್ಯಾಪಾರ ಮಾಡುವ ಕೊಂಡಿರುವ ಸುದಿನ ಎಂಬುವರು ವಂಚನೆಗೊಳಗಾದ ವ್ಯಕ್ತಿ. 2015ರಲ್ಲಿ ಸುಧೀನ ಅವರಿಗೆ ಚೈತ್ರಾ ಕುಂದಾಪುರ ಪರಿಚಯವಾಗಿದೆ. ಬಿಜೆಪಿ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿರುವ ಸಚಿವರು, ಮಂತ್ರಿಗಳ, ಶಾಸಕರ ನಿಕಟ ಸಂಪರ್ಕವಿದೆ ಎಂದು ನಂಬಿಸಿದ್ದ ಚೈತ್ರಾ, 2018-2023 ರ ಅವಧಿಯಲ್ಲಿ ಅಂಗಡಿ ನಿರ್ಮಾಣಕ್ಕೆ ಐದು ಲಕ್ಷ ಹಣವನ್ನು ಹಂತ ಹಂತವಾಗಿ ಪಡೆದ್ದಾಳೆ. ಮೂರು ಲಕ್ಷವನ್ನ ಚೈತ್ರಾ ಖಾತೆಗೆ ವರ್ಗಾಯಿಸಿದ್ದ ಸುದೀನ, ಉಳಿದ ಎರಡು ಲಕ್ಷ ಹಣವನ್ನ ನಗದು ರೂಪದಲ್ಲಿ ನೀಡಿದ್ದರು.

ಅತ್ಯಾಚಾರ ಪ್ರಕರಣ ಹಾಕುತ್ತೇನೆ ಎಂದು ಬೆದರಿಕೆ
ಸುದಿನ್ ಅವರು ಕೇಳಿದ ಸಂದರ್ಭದಲ್ಲಿ ಕೊನೆಗೆ ಹಂತದಲ್ಲಿದೆ ಎಂದು ಸುಳ್ಳು ಹೇಳುತ್ತಿದ್ದ ಚೈತ್ರಾ, ಚುನಾವಣಾ ಪ್ರಚಾರ, ಭಾಷಣ, ಕಾರ್ಯಕಾರಣಿ ಸಭೆ, ಪಕ್ಷದ ಮುಖಂಡರ ಭೇಟಿ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಅನುಮಾನಗೊಂಡ ಸುಧೀನ ಕೂಡಲೇ ಬಟ್ಟೆ ಅಂಗಡಿಗೆ ಒತ್ತಾಯಿಸಿದ್ದು ಈ ವೇಳೆ ಸುಳ್ಳು ಅತ್ಯಾಚಾರ ಪ್ರಕರಣ ಕೊಡುತ್ತೇನೆ, ಬಾಡಿಗೆ ಗೂಂಡಾಗಳಿಂದ ಕೊಲೆ‌ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸದ್ಯ ಉದ್ಯಮಿ ಗೋವಿಂದ ಪೂಜಾರಿಗೆ ಐದು ಕೋಟಿ ವಂಚನೆ ಮಾಡಿದ್ದಾರೆ ಎಂಬ ದೂರು ದಾಖಲಾಗಿ ಬಂಧನವಾದ ಬಳಿಕ ಇತ್ತ ಸುಧೀನ ಅವರು ಕೂಡಾ ನನಗೂ ವಂಚನೆಯಾಗಿದೆ ಎಂದು ಬ್ರಹ್ಮಾವರ ವೃತ್ತ ವ್ಯಾಪ್ತಿಯ ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಚೈತ್ರಾ ವಿರುದ್ಧ 506, 417, 420 ಐಪಿಸಿ‌ ಸೆಕ್ಷನ್ ಅಡಿ ಎಫ್ಐಆರ್ ದಾಖಲಿಸಿದ್ದಾರೆ.

Comments are closed.