Saudi Arabia

ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಮೃತಪಟ್ಟ ಉಡುಪಿ ಜಿಲ್ಲೆಯ ಗಂಗೊಳ್ಳಿ ಮೂಲದ ಯುವಕ

Pinterest LinkedIn Tumblr

ಕುಂದಾಪುರ: ಸ್ಥಳೀಯ ಜಾಮಿಯಾ ಮೊಹಲ್ಲಾ ಪೊಲೀಸ್ ಚೆಕ್ ಪೋಸ್ಟ್ ಎದುರಿನ ನಿವಾಸಿ ಬಷೀರ್ ಅಹ್ಮದ್ ಎಂಬವರ ಪುತ್ರ 30 ವರುಷ ಪ್ರಾಯದ ಮುಬಾಶೀರ್ ಬಷೀರ್ ಇಂದು ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾನೆ ಎಂಬ ಮಾಹಿತಿ ಮಾಹಿತಿ ದೊರೆತಿದ್ದು, ಇದನ್ನು ಸೌದಿಯಲ್ಲಿ ಇರುವ ಸ್ಥಳೀಯ ಅನಿವಾಸಿ ಭಾರತೀಯರು ಹಾಗೂ ಗಂಗೊಳ್ಳಿಯಲ್ಲಿ ಇರುವ ಅವರ ಕುಟುಂಬಸ್ಥರು ದೃಢಪಡಿಸಿದ್ದಾರೆ‌.

ಎರಡು ವರುಷಗಳ ಹಿಂದೆ ಮಹಾರಾಷ್ಟ್ರದ ಪೂನಾ ಮೂಲದ ಯುವತಿಯನ್ನು ವಿವಾಹವಾಗಿದ್ದ ಇವರು ಪತ್ನಿಯ ಜೊತೆಯಲ್ಲಿಯೇ ಸೌದಿಯಲ್ಲಿ ಉದ್ಯೋಗದಲ್ಲಿದ್ದರು. ಪ್ರಾಥಮಿಕ ಶಿಕ್ಷಣವನ್ನು ಕುಂದಾಪುರ ಹೆಚ್ಎಂಎಂ ಶಾಲೆ, ಪ್ರೌಡ ಶಿಕ್ಷಣವನ್ನು ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆ, ಪಿಯು ಶಿಕ್ಷಣವನ್ನು ಭಂಡಾರ್ಕಾರ್ಸ್ ಕಾಲೇಜು, ತದನಂತರ ಇಂಜಿನಿಯರಿಂಗ್ ಪದವಿಯನ್ನು ಭಟ್ಕಳದ ಅಂಜುಮನ್ ಕಾಲೇಜು ಹಾಗೂ ಚೆನ್ನೈ ಯ ಕಾಲೇಜಿನಲ್ಲಿ ಮಾಡಿದ್ದರು.

ಊರಿನಲ್ಲಿದ್ದಾಗ ಜನರ ಕಷ್ಟ ಸುಖದಲ್ಲಿ ಭಾಗಿಯಾಗುತ್ತಿದ್ದ ಇವರು 4 ವರ್ಷಗಳ ಹಿಂದೆ ತ್ರಾಸಿ ಮರವಂತೆ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಉಪ್ಪಿನಂಗಡಿ ಮೂಲದ ಬಾಲಕನ ಅಂತ್ಯಸಂಸ್ಕಾರದ ಕಾರ್ಯವನ್ನು, ವಿಧಿವಿಧಾನಗಳನ್ನು ಗಂಗೊಳ್ಳಿಯ ತನ್ನ ಮನೆಯಲ್ಲಿಯೇ ನೆರವೇರಿಸಲು ಅವಕಾಶ ಮಾಡಿ ಕೊಟ್ಟಿದ್ದಲ್ಲದೆ, ಗಾಯಾಳುವೋರ್ವರ ಆಸ್ಪತ್ರೆ ವೆಚ್ಚವನ್ನು ತಾನೇ ಭರಿಸಿದ್ದರು. ಕಷ್ಟದಲ್ಲಿ ಇದ್ದಾಗ ಸಹಾಯ ಮಾಡುವುದಲ್ಲದೇ, ತುರ್ತು ಸಂದರ್ಭ ಹೆಗಲಿಗೆ ಹೆಗಲು ಕೊಡುತ್ತಿದ್ದ ಇವರು ಕೆಲ ಸಮಯದ ಹಿಂದೆ ಉದ್ಯೋಗಕ್ಕಾಗಿ ಸೌದಿ ತೆರಳಿದ್ದರು.

ಮೃತ ಯುವಕ ಪತ್ನಿ, ತಾಯಿ, ತಂದೆ ಹಾಗೂ ಓರ್ವ ಸಹೋದರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದು, ಅಂತ್ಯಕ್ರಿಯೆ ವಿಧಿವಿಧಾನಗಳ ಬಗ್ಗೆ ಸೌದಿ ದೇಶದ ಕಾನೂನೂ ಕ್ರಮಗಳ ನಂತರವೇ ತಿಳಿದು ಬರಲಿದೆ. ಮಬಾಶೀರ್ ಮೃತ ಸುದ್ದಿ ತಿಳಿಯುತ್ತಿದ್ದಂತೆ ಗಂಗೊಳ್ಳಿಯ ಅವರ ಮನೆಗೆ ಕುಟುಂಬಸ್ಥರು, ಮಿತ್ರರು ಭಾರೀ ಸಂಖ್ಯೆಯಲ್ಲಿ ಆಗಮಿಸಿ ಕಂಬನಿ ಮಿಡಿಯುತ್ತಿದ್ದಾರೆ.

Comments are closed.