ಬೆಂಗಳೂರು: ಫೇಸ್ಬುಕ್ನಲ್ಲಿ ನಕಲಿ ಖಾತೆ ತೆರೆದು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಸೈಬರ್ ವಂಚನೆ ಮಾಡುತ್ತಿದ್ದ 7 ಮಂದಿ ಆರೋಪಿಗಳನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 9 ಮೊಬೈಲ್, 11 ಬ್ಯಾಂಕ್ ಪಾಸ್ ಬುಕ್, 6 ಚೆಕ್ ಬುಕ್, 31 ಎಟಿಎಂ ಕಾರ್ಡ್, 9 ಆಧಾರ್ ಕಾರ್ಡ್ ಜಪ್ತಿ ಮಾಡಲಾಗಿದೆ.
ಮೈಸೂರು ಮೂಲದ ಖಾಸೀಫ್, ಅಜರುದ್ದೀನ್, ಮುದಾಸೀರ್, ಶಶಿಕುಮಾರ್, ಇಮ್ಮಿಯಾಜ್ ಮತ್ತು ಶಫಿವುಲ್ಲಾ ಷರೀಫ್ ಮತ್ತು ಶಿಡ್ಲಘಟ್ಟದ ಸೈಯ್ಯದ್ ಡ್ಯಾನಿಶ್ ಬಂಧಿತರು.
ಆರೋಪಿಗಳು ಆಡುಗೋಡಿಯ ಮೊಹಮ್ಮದ್ ಕಾಶಿಫ್ ಎಂಬುವವರ ಸ್ನೇಹಿತ ಹೆಸರಿನಲ್ಲಿ ಫೇಸ್ಬುಕ್ ಖಾತೆ ತೆರೆದು 1.50 ಲಕ್ಷ ಹಣ ವರ್ಗಾಯಿಸಿಕೊಂಡು ವಂಚಿಸಿದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾದ ಮೊಹಮ್ಮದ್ ಕಾಶಿಫ್ಗೆ ಜ.7ರಂದು ಅವರ ಸ್ನೇಹಿತನ ಹೆಸರು, ಫೋಟೋ ಹೊಂದಿದ್ದ ಫೇಸ್ಬುಕ್ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಹೀಗಾಗಿ ಕಾಶಿಫ್ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ್ದರು. ಕೆಲ ಸಮಯದ ಬಳಿಕ ಅದೇ ಖಾತೆಯಿಂದ ನಾನು ದುಬೈನಲ್ಲಿದ್ದು, ಕೆಲ ದಿನಗಳಲ್ಲೇ ಭಾರತಕ್ಕೆ ಬರಲಿದ್ದೇನೆ. ನನ್ನ ಬಳಿ ಇರುವ ಅಪಾರ ಹಣವನ್ನು ಭಾರತಕ್ಕೆ ತಂದರೆ, ಹೆಚ್ಚಿನ ತೆರಿಗೆ ಪಾವತಿಸಬೇಕಾಗುತ್ತದೆ. ಹೀಗಾಗಿ ನನ್ನ ಬಳಿ ಇರುವ ಹಣವನ್ನು ನಿನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತೇನೆ. ನಾನು ಬೆಂಗಳೂರಿಗೆ ಬಂದ ಬಳಿಕ ಆ ಹಣ ವಾಪಾಸ್ ಪಡೆಯುತ್ತೇನೆ ಎಂದು ಮೆಸೇಜ್ ಮಾಡಿದ್ದಾರೆ.
7.58 ಲಕ್ಷ ವರ್ಗಾವಣೆಯ ನಕಲಿ ರಶೀದಿ: ಇದನ್ನು ನಂಬಿದ ಕಾಶಿಫ್, ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿದ್ದಾರೆ. ಬಳಿಕ ದುಷ್ಕರ್ಮಿಗಳು ₹7.85 ಲಕ್ಷ ವರ್ಗಾಯಿಸಿರು ವಂತೆ ನಕಲಿ ರಶೀದಿ ಸೃಷ್ಟಿಸಿ, ಅದನ್ನು ಕಾಶಿಫ್ ಗೆ ಕಳುಹಿಸಿದ್ದಾರೆ. 24 ಗಂಟೆಯೊಳಗೆ ಈ ಹಣ ಖಾತೆಗೆ ಜಮೆಯಾಗಲಿದೆ ಎಂದು ಹೇಳಿದ್ದಾರೆ. ಮಾರನೇ ದಿನ ನಾನು ಸೌದಿ ಅರೇಬಿಯಾದ ಪೊಲೀಸ್ ಠಾಣೆಯಲ್ಲಿ ತೊಂದರೆಗೆ ಸಿಲುಕಿದ್ದೇನೆ. ತುರ್ತಾಗಿ ₹1.50 ಲಕ್ಷ ಅಗತ್ಯವಿದೆ ಎಂದು ಬ್ಯಾಂಕ್ವೊಂದರ ಖಾತೆಗೆ ವಿವರ ಕಳುಹಿಸಿದ್ದಾರೆ. ಇದು ನಿಜ ಇರಬೇಕು ಎಂದು ಭಾವಿಸಿದ ಕಾಶಿಫ್, ದುಷ್ಕರ್ಮಿ ನೀಡಿದ್ದ ಖಾತೆಗೆ 1.50 ಲಕ್ಷ ವರ್ಗಾಯಿಸಿದ್ದಾರೆ.
ನಂತರ 24 ತಾಸು ಕಳೆದರೂ ದುಷ್ಕರ್ಮಿ ಕಳುಹಿಸಿದ್ದ ₹7.85 ಲಕ್ಷ ಖಾತೆಗೆ ಜಮೆಯಾಗಿ ರಲಿಲ್ಲ. ಈ ವೇಳೆ ಆತಂಕಗೊಂಡು ದುಷ್ಕರ್ಮಿಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿಲ್ಲ. ಕೊನೆಗೆ ತಾನು ಸೈಬರ್ ವಂಚನೆಗೆ ಒಳಗಾಗಿರುವುದು ಕಾಶಿಫ್ಗೆ ಅರಿವಿಗೆ ಬಂದಿದೆ. ಬಳಿಕ ಆಡು ಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಿ ಆರೋಪಿಗಳನ್ನು ಬಂಧಿ ಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Comments are closed.