ಉಡುಪಿ: ನಿಯಮ ಮೀರಿ ಕರ್ಕಶ ಸದ್ದು ಮಾಡಿದ ದುಬೈ ನೋಂದಣಿಯ ಮೂರು ಕಾರುಗಳನ್ನು ವಶಕ್ಕೆ ಪಡೆದ ಮಣಿಪಾಲ ಪೊಲೀಸರು ತಲಾ 1,500 ರೂ. ದಂಡ ವಿಧಿಸಿದ್ದಾರೆ.
ದುಬೈನಲ್ಲಿರುವ ಕೇರಳ ಮೂಲದ ಯುವಕರು ಮಣಿಪಾಲದಲ್ಲಿರುವ ಸ್ನೇಹಿತರ ಆಹ್ವಾನದ ಮೇರೆಗೆ ಡಾಡ್ಜ್ ಕಾರಿನಲ್ಲಿ ಬಂದಿದ್ದರು. ಈ ವೇಳೆ ಜಿಲ್ಲಾಧಿಕಾರಿ ಕಚೇರಿ (ರಜತಾದ್ರಿ) ರಸ್ತೆಯಲ್ಲಿ ನಿಯಮ ಮೀರಿ ಓಡಾಟ ನಡೆಸಿದ್ದ ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಆರು ತಿಂಗಳು ಭಾರತದಲ್ಲಿ ತಿರುಗಾಡಲು ಕಾರುಗಳನ್ನು, ಸಮುದ್ರದ ಮುಖಾಂತರ ಹಡಗಿನಲ್ಲಿ ಆಮದು ಮಾಡಿಕೊಂಡಿದ್ದರು. ದುಬೈ ದೇಶಕ್ಕೆ 30 ಲಕ್ಷ ರೂ. ಹಾಗೂ ಭಾರತಕ್ಕೆ 1 ಕೋಟಿ ರೂ. ಹಣ ಪಾವತಿಸಿರುವುದಾಗಿ ಪೊಲೀಸರ ಬಳಿ ಯುವಕರು ತಿಳಿಸಿದ್ದಾರೆ.
ಕಾರುಗಳ ದಾಖಲೆಗಳನ್ನ ಆರ್ಟಿಓಗೆ ಕಳುಹಿಸಿದ ಪೊಲೀಸರು, ದುಬೈ ನೋಂದಣಿ ಕಾರು ಓಡಾಟಕ್ಕೆ ಅನುಮತಿ ಇದೆಯೇ ಎಂದು ಪರಿಶೀಲನೆ ನಡೆಸಿದರು. ಕಾರು ಚಲಾಯಿಸುವ ಅನುಮತಿ ಇರುವ ಹಿನ್ನೆಲೆ ಆರ್ಟಿಓ ಅನುಮತಿ ಮೇರೆಗೆ ಕರ್ಕಶ ಶಬ್ದ ಮಾಡಿದ 3 ಕಾರುಗಳ ಮೇಲೆ 1,500 ರೂ. ದಂಡ ಹಾಕಿದ್ದಾರೆ ಎಂದು ತಿಳಿದುಬಂದಿದೆ.
Comments are closed.