ಕುಂದಾಪುರ: ತಿರುವನಂತಪುರಂ ನಿಜಾಮುದ್ದೀನ್ ಎಕ್ಸ್ಪ್ರೆಸ್ ಮತ್ತು ಎರ್ನಾಕುಲಂ ನಿಜಾಮುದ್ಧಿನ್ ಎಕ್ಸ್ಪ್ರೆಸ್ ರೈಲುಗಳಿಗೆ ಕುಂದಾಪುರ ನಿಲುಗಡೆ ಬೇಕು ಎನ್ನುವ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ವರ್ಷಗಳ ಬೇಡಿಕೆಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಈಡೇರಿಸಿದ್ದಾರೆ ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ತಿಳಿಸಿದ್ದಾರೆ.
ಎರಡೂ ರೈಲುಗಳಿಗೆ ಕುಂದಾಪುರ ನಿಲುಗಡೆ ನೀಡಿ ಸಚಿವರು ಆದೇಶ ನೀಡಿದ್ದಾರೆಂದು ಸಂಸದರು ತಿಳಿಸಿದ್ದು ಕೊಲ್ಲೂರು ಮೂಕಾಂಬಿಕಾ ದೇಗುಲದ ಭಕ್ತಾದಿಗಳಿಗೆ, ದೆಹಲಿ,ಮುಂಬಯಿ, ವಾಪಿ ,ಸಿಲ್ವಾಸ ತೆರಳುವ ಕುಂದಾಪುರದ ಪ್ರಯಾಣಿಕರಿಗೆ ಬಾರೀ ಅನುಕೂಲವಾಗಲಿದ್ದು ಪ್ರಯಾಣಿಕರು ಹರ್ಷ ವ್ಯಕ್ತ ಪಡಿಸಿದ್ದಾರೆ.
ಕರಾವಳಿ ಕರ್ನಾಟಕದ ಅಸಂಖ್ಯಾತ ಮಂದಿ ಮುಂಬಯಿ ಹೊರವಲಯ, ಗುಜಾರಾತ್ ಬಳಿಯ ದಮನ್, ಸಿಲ್ವಾಸ, ವಾಪಿ ಮತ್ತಿತರ ಪ್ರದೇಶಗಳಲ್ಲಿ ವಾಸವಾಗಿದ್ದು ಈ ಪ್ರಯಾಣಿಕರಿಗೆ ಮತ್ಸ್ಯಗಂಧ ಮತ್ತು ಮಂಗಳೂರು ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡಿ ಬೇರೆ ರೈಲುಗಳನ್ನು ಹಿಡಿಯಬೇಕಾದ ಸ್ಥಿತಿ ಇದ್ದಿದ್ದು ಈಗ ಒಂದೇ ರೈಲಿನಲ್ಲಿ ಕುಂದಾಪುರದಿಂದ ಪ್ರಯಾಣ ಮಾಡಬಹುದಾಗಿದೆ.
ಸಂಸದರಾಗಿ ಮೊದಲ ಸಲ ಕುಂದಾಪುರ ರೈಲು ನಿಲ್ದಾಣಕ್ಕೆ ಭೇಟಿ ನೀಡಿದಾಗ ಸಮಿತಿ ಸಲ್ಲಿಸಿದ ಮನವಿಯಂತೆ ಸಂಸದರು ಕೇಂದ್ರ ಮಂತ್ರಿಗಳಾದ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವ ಸೋಮಣ್ಣನವರಿಗೆ ಮನವಿ ಮಾಡಿ ಕರಾವಳಿ ಭಾಗದ ಬೇಡಿಕೆಗಳನ್ನು ಸಲ್ಲಸಿದ್ದರು.
ರೈಲು ವೇಳಾಪಟ್ಟಿ: ಪ್ರತೀ ಬುಧವಾರ ಮಧ್ಯಾಹ್ನ 2 ಗಂಟೆಗೆ ಕುಂದಾಪುರದಿಂದ ಎರ್ನಾಕುಲಂ ದೆಹಲಿ ಕಡೆ ತೆರಳುವ ರೈಲು ಶನಿವಾರ ಮದ್ಯಾಹ್ನ 2 ಗಂಟೆಗೆ ದೆಹಲಿಯಿಂದ ಬಂದು ಎರ್ನಾಕುಲಂ ಕಡೆ ತೆರಳುತ್ತದೆ. ಇನ್ನು ತಿರುವನಂತಪುರಂ ದೆಹಲಿ ರೈಲು ಪ್ರತೀ ಶನಿವಾರ ಮದ್ಯಾಹ್ನ 2 ಗಂಟೆಗೆ ಕುಂದಾಪುರ ಮೂಲಕ ದೆಹಲಿಗೆ ತೆರಳಲಿದ್ದು, ಪ್ರತೀ ಗುರುವಾರ ಮದ್ಯಾಹ್ನ 2 ಗಂಟೆಗೆ ದೆಹಲಿಯಿಂದ ಕುಂದಾಪುರ ಮೂಲಕ ತಿರುವನಂತಪುರಂ ತಲುಪಲಿದೆ.
ದೇಶದ ರಾಜಧಾನಿ ದೆಹಲಿಗೆ ಹಗಲು ವೇಳೆಯಲ್ಲಿ ಸಂಚರಿಸುವ ಪ್ರಯಾಣಿಕರಿಗಾಗಿ ಮತ್ತು ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ದೆಹಲಿಗೆ ತೆರಳುವ ಎರಡು ರೈಲುಗಳಿಗೆ ಕುಂದಾಪುರದಲ್ಲಿ ನಿಲುಗಡೆ ಬೇಕೆನ್ನುವುದು ಸಾರ್ವಜನಿಕರ ಮತ್ತು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಹಲವು ವರ್ಷಗಳ ಬೇಡಿಕೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಸಚಿವರುಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದು, ಈ ಮನವಿಯನ್ನು ಪರಿಗಣಿಸಿದ ಸಚಿವರುಗಳು, ಎರ್ನಾಕುಲಂ ನಿಜಾಮುದ್ದೀನ್ ಎಕ್ಸ್ಪ್ರೆಸ್ ಹಾಗೂ ತಿರುವನಂತಪುರಂ ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲುಗಳನ್ನು ಕುಂದಾಪುರದಲ್ಲಿ ನಿಲುಗಡೆಗೆ ಒಪ್ಪಿಗೆ ಸೂಚಿಸಿ ಆದೇಶ ನೀಡಿದ್ದಾರೆ. ಉಡುಪಿ-ಚಿಕ್ಕಮಗಳೂರು ರೈಲು ಮತ್ತು ಹೆದ್ದಾರಿಯ ಅಭಿವೃದ್ಧಿ ಕುರಿತಾದ ಸಾರ್ವಜನಿಕ ಬೇಡಿಕೆಗಳನ್ನು ನಿರಂತರವಾಗಿ ಈಡೇರಿಸುವ ಬದ್ದತೆಯಿದೆ.
-ಕೋಟ ಶ್ರೀನಿವಾಸ ಪೂಜಾರಿ (ಸಂಸದ)
Comments are closed.