ಮಧುರೈ: ಎಐಎಡಿಎಂಕೆ ಪಕ್ಷದಿಂದ ಉಚ್ಚಾಟನೆಯಾಗಿರುವ ರಾಜ್ಯಸಭಾ ಸಂಸದೆ ಶಶಿಕಲಾ ಪುಷ್ಪ, ಅವರ ಪತಿ ಮತ್ತು ಪುತ್ರನ ವಿರುದ್ಧ ತಮ್ಮ ಮಾಜಿ ಮನೆಗೆಲಸದವರನ್ನು ಗೃಹ ಬಂಧನದಲ್ಲಿಟ್ಟು ಮತ್ತು ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ದಾಖಲಿಸಲಾಗಿದೆ.
ಶಶಿಕಲಾ ಅವರು ಟುಟಿಕೋರಿನ್ ಮೇಯರ್ (20111-2012) ಆಗಿದ್ದ ಸಂದರ್ಭದಲ್ಲಿ ಅವರ ಮನೆಯಲ್ಲಿ ತನ್ನ ಸಹೋದರಿಯ ಜತೆ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವರು ಈ ದೂರನ್ನು ನೀಡಿದ್ದಾರೆ. ಶಶಿಕಲಾ, ಅವರ ಪತಿ ಲಿಂಗೇಶ್ವರ ಮತ್ತು ಪುತ್ರ ಎಲ್ ಪ್ರದೀಪ್ ರಾಜ ನಮ್ಮಿಬ್ಬರನ್ನು ಗೃಹ ಬಂಧನದಲ್ಲಿಟ್ಟಿದ್ದೇ ಅಲ್ಲದೇ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಆಕೆ ಟುಟಿಕೋರಿನ್ ಜಿಲ್ಲೆಯ ಪುದುಕೊಟ್ಟಾಯಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಎಂಕೆ ಸಂಸದ ಶಿವ ಅವರಿಗೆ ಕಪಾಳಮೋಕ್ಷ ಮಾಡಿದ್ದ ಆರೋಪದ ಮೇಲೆ ಶಶಿಕಲಾ ಅವರನ್ನು ಎಐಎಡಿಎಂಕೆ ಮುಖ್ಯಸ್ಥೆ, ತಮಿಳುನಾಡು ಸಿಎಂ ಜಯಲಲಿತಾ ಅವರು ಪಕ್ಷದಿಂದ ಉಚ್ಚಾಟಿಸಿದ್ದರು. ಪಕ್ಷದ ಸಿದ್ಧಾಂತ ಮತ್ತು ಮೌಲ್ಯಗಳನ್ನು ಉಲ್ಲಂಘಿಸಿದ್ದಷ್ಟೇ ಅಲ್ಲದೇ, ಪಕ್ಷಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪದ ಮೇಲೆ ಅವರ ಮೇಲೆ ಈ ಕ್ರಮವನ್ನು ಕೈಗೊಳ್ಳಲಾಗಿತ್ತು.
Comments are closed.