ಮುಂಬೈ: ನರೇಂದ್ರ ಮೋದಿ ಅವರಿಗೆ ಪ್ರಧಾನಿ ಪಟ್ಟದ ಅಹಂ ಇದೆ. ಹಾಗಾಗಿ ಅವರು ನನ್ನ ಪತ್ರಗಳಿಗೆ ಉತ್ತರಿಸುವುದಿಲ್ಲ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.
ಶನಿವಾರ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅಟ್ಪಾಡಿ ತೆಹಸಿಲ್ನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಣ್ಣಾ ಹಜಾರೆ, ಕಳೆದ ಮೂರು ವರ್ಷಗಳಲ್ಲಿ ನಾನು ಸರಿಸುಮಾರು 30 ಪತ್ರಗಳನ್ನು ಬರೆದಿದ್ದೇನೆ. ಮೋದಿ ಅವರಿಗೆ ಪ್ರಧಾನಿ ಎಂಬ ಅಹಂ ಇದೆ, ಆದ್ದರಿಂದ ಅವರು ನನ್ನ ಪತ್ರಕ್ಕೆ ಉತ್ತರಿಸಿಲ್ಲ ಎಂದಿದ್ದಾರೆ.
ಮಾರ್ಚ್ 23ರಂದು ನವದೆಹಲಿಯಲ್ಲಿ ಮತ್ತೊಂದು ಆಂದೋಲನ ಹಮ್ಮಿಕೊಳ್ಳುವುದಾಗಿ ಹಜಾರೆ ಹೇಳಿದ್ದರು. ಈ ಆಂದೋಲನಕ್ಕೆ ಪೂರ್ವಭಾವಿಯಾಗಿ ಈ ರ್ಯಾಲಿ ಆಯೋಜಿಸಲಾಗಿದೆ. ಹಿಂದೆಂದೂ ಕಂಡಿರದ ದೊಡ್ಡ ಮಟ್ಟದ ಆಂದೋಲನ ನಡೆಯಲಿದ್ದು, ಇದು ಸರ್ಕಾರಕ್ಕೆ ನೀಡುವ ಎಚ್ಚರಿಕೆಯಾಗಲಿದೆ.
ಚಳವಳಿ, ರ್ಯಾಲಿಗಳ ಮೂಲಕ ಮತ ಪಡೆಯುವ ಉದ್ದೇಶ ನನಗಿಲ್ಲ. ಜನ ಲೋಕಪಾಲ್ಗಾಗಿ ಬೃಹತ್ ರ್ಯಾಲಿ ನಡೆದಂತೆಯೇ ರೈತರ ಸಮಸ್ಯೆ ಪರಿಹಾರಕ್ಕಾಗಿ ರ್ಯಾಲಿ ನಡೆಯಲಿದೆ.
ಲೋಕಪಾಲದ ಅನುಷ್ಠಾನ, ಲೋಕಾಯುಕ್ತರ ನೇಮಕ, ರೈತರಿಗೆ 5,000 ಪಿಂಚಣಿ ಮತ್ತು ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಸಿಗಬೇಕು ಎಂದು ಹಜಾರೆ ಒತ್ತಾಯಿಸಿದ್ದಾರೆ.
Comments are closed.