ರಾಷ್ಟ್ರೀಯ

18 ತಿಂಗಳು 33 ಅಡಿ ಬಾವಿ ತೋಡಿದ 70ರ ವೃದ್ಧ ಬುಂದೇಲ್‌ಖಂಡದ “ದಶರಥ ಮಾಂಜಿ”

Pinterest LinkedIn Tumblr


ಛತರ್‌ಪುರ್: ಈತ ಗಯಾದ ಪರ್ವತ ಪುರುಷ ದಶರಥ ಮಾಂಜಿಯಂತೆ ಪ್ರಸಿದ್ಧನಲ್ಲದಿರಬಹುದು, ಆದರೆ ಆತನಿಗಿಂತ ಕಡಿಮೆ ಏನಲ್ಲ ಇವನ ಸಾಧನೆ. ಈತನ ಅದಮ್ಯ ಚೈತನ್ಯಕ್ಕೆ ಸಾಟಿ ಇಲ್ಲ. ಅಷ್ಟಕ್ಕೂ ಆತ ದೇಶವ್ಯಾಪಿ ಸುದ್ದಿಯಾಗುತ್ತಿರುವುದಾದರೂ ಏಕೆ? ತಿಳಿಯಲು ಮುಂದೆ ಓದಿ.

ಬುಂದೇಲ್‌ಖಂಡ ವಲಯದಲ್ಲಿ ಬರುವ ಬರ ಪೀಡಿತ ಛತರ್‌ಪುರ್ ಜಿಲ್ಲೆಯ ಹದುವಾ ಗ್ರಾಮದ ನಿವಾಸಿಯಾಗಿರುವ 70 ವರ್ಷದ ಸೀತಾರಾಮ್ ಲೋಧಿ 18 ತಿಂಗಳಲ್ಲಿ 33 ಅಡಿ ಬಾವಿ ಕೊರೆದಿದ್ದಾನೆ. ಅದು ಕೂಡ ಏಕಾಂಗಿಯಾಗಿ. ಕುಟುಂಬದವರ ವಿರೋಧದ ನಡುವೆ ಈ ಸಾಹಸಕ್ಕೆ ಕೈ ಹಾಕಿದ ಅವರು ಬಾವಿಯಲ್ಲಿ ನೀರು ಕಾಣಿಸುವವರೆಗೂ ಸುಮ್ಮನಾಗಿಲ್ಲ ಅವರ ಪ್ರಯತ್ನಕ್ಕೆ ಫಲ ದೊರೆತಿದ್ದು ಬಾವಿಯಲ್ಲಿ ನೀರು ಕಾಣುತ್ತಿದ್ದಂತೆ ಪರಿವಾರದವರೆಲ್ಲ ಅವರ ಪ್ರಶಂಸೆಗಿಳಿದಿದ್ದಾರೆ.

ಸೀತಾರಮಾ ಲೋಧಿ ಅವಿವಾಹಿತರಾಗಿದ್ದು ತಮ್ಮ ತಮ್ಮನ ಪರಿವಾರದ ಜತೆ ವಾಸಿಸುತ್ತಿದ್ದಾರೆ. ಕುಟುಂಬಕ್ಕೆ 20 ಎಕರೆ ಜಮೀನಿದ್ದು ನೀರಿನ ಕೊರತೆ ಇಂದ ಬೆಳೆ ಬೆಳೆಯಲಾಗುತ್ತಿರಲಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿರ್ಣಯ ಮಾಡಿದ ವೃದ್ದ ಸೀತಾರಾಮ್ ಪಿಕಾಸು, ಗುದ್ದಲಿ, ಕುಟಾರಿ ಹಿಡಿದುಕೊಂಡು ನೆಲವನ್ನು ಅಗೆಯ ಹತ್ತಿದರು. ಮನೆಯವರ ಅಸಹಕಾರ, ವಿರೋಧದ ನಡುವೆಯೇ ಅವರೊಬ್ಬರೇ ಬಾವಿ ತೋಡ ಹತ್ತಿದರು.

2015ರ ಅಂತ್ಯದಲ್ಲಿ ಬಾವಿ ಕೊರೆಯಲು ಆರಂಭಿಸಿದ ಅವರು 2017ರವರೆಗೆ , 18 ತಿಂಗಳು ಬಾವಿ ತೋಡಿದ್ದಾರೆ. ಬರೋಬ್ಬರಿ 33 ಅಡಿಗೆ ನೀರು ಜಿನುಗಿದಾಗ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಅವರ ಸಂತೋಷ ಹೆಚ್ಚು ದಿನ ಉಳಿಯಲಿಲ್ಲ. ಬಾವಿಗೆ ಪ್ಲಾಸ್ಟರ್ ಮಾಡಿರಲಿಲ್ಲವಾದ್ದರಿಂದ ಮಳೆ ಶುರುವಾಗುತ್ತಿದ್ದಂತೆ ಬಾವಿಯಲ್ಲಿ ಮಣ್ಣು ಕುಸಿಯಿತು.

ಆದರೆ ಆತ್ಮವಿಶ್ವಾಸ ಕಳೆದುಕೊಳ್ಳದ ಸೀತಾರಾಮ್ ಮತ್ತೆ ಬಾವಿಯನ್ನು ತೋಡಲು ನಿರ್ಧರಿಸಿದ್ದಾರೆ. ಸರ್ಕಾರದಿಂದ ಅವರು ಬಯಸುವುದೊಂದೇ. ತಮ್ಮ ಬಾವಿಯ ಗೋಡೆಗೆ ಪ್ಲಾಸ್ಟರಿಂಗ್ ಮಾಡಿಕೊಡಲಿ ಎಂದು.

ಸೀತಾರಾಮ್ ದೃಢ ನಿಶ್ಚಯ, ಬತ್ತದ ಉತ್ಸಾಹಕ್ಕೆ ಇಂದಲ್ಲ ನಾಳೆ ಗೆಲುವು ಸಿಗುವುದರಲ್ಲಿ ಸಂದೇಹವಿಲ್ಲ, ಈಗ ನಾವು ಸಹ ಅವರ ಈ ಕೆಲಸಕ್ಕೆ ಸಹಕಾರ ನೀಡುತ್ತೇವೆ, ಎನ್ನುತ್ತಾರೆ ಅವರ ಕುಟುಂಬದ ಸದಸ್ಯರು.

Comments are closed.