ರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿ ಹತ್ಯೆ: ಹಾಫೀಜ್‌ ಸಯೀದ್‌ ಬೆಂಬಲಿಗರ ಬೆದರಿಕೆ

Pinterest LinkedIn Tumblr


ರಾವಲಕೋಟ್‌ : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆಗೈಯಲಾಗುವುದು ಮತ್ತು ಭಾರತವನ್ನು ಹೋಳು ಮಾಡಲಾಗುವುದು ಎಂದು ಬೆದರಿಕೆ ಒಡ್ಡುವ ಮೂಲಕ ಪಾಕಿಸ್ಥಾನದ ನಿಷೇಧಿತ ಜಮಾತ್‌ ಉದ್‌ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥನಾಗಿರುವ ಹಾಫೀಜ್‌ ಸಯೀದ್‌ನ ಬೆಂಬಲಿಗರು, ನಿಕಟವರ್ತಿಗಳು ಮತ್ತು ಸದಸ್ಯರು ಸಾರ್ವಜನಿಕ ವೇದಿಕೆಯಲ್ಲಿ ತಮ್ಮ ಉರಿ ನಾಲಗೆಯನ್ನು ಹರಿಯಬಿಟ್ಟಿದ್ದಾರೆ.

“ಇಸ್ಲಾಂ ಧ್ವಜವನ್ನು ಭಾರತದಲ್ಲಿ ಮತ್ತು ಅಮೆರಿಕದಲ್ಲಿ ಹಾರಿಸಲಾಗುವುದು. ಪ್ರಧಾನಿ ಮೋದಿಯನ್ನು ಹತ್ಯೆ ಮಾಡಲಾಗುವುದು. ಅಸಂಖ್ಯ ಹುತಾತ್ಮರು ಸೃಷ್ಟಿಗೊಳ್ಳುವ ಮೂಲಕ ಭಾರತ ಮತ್ತು ಇಸ್ರೇಲ್‌ ಹೋಳು ಹೋಳಾಗಲಿದೆ ಎಂದು ನಿಷೇಧಿತ ಜಮಾತ್‌ ಉದ್‌ ದಾವಾ ಉಗ್ರ ಸಂಘಟನೆಯ ಹಿರಿಯ ಸದಸ್ಯರಾಗಿರುವ ಮೌಲಾನಾ ಬಶೀರ್‌ ಅಹ್ಮದ್‌ ಖಾಕಿ ಸಾರ್ವಜನಿಕ ವೇದಿಕೆಯಿಂದ ಈ ಮಾತುಗಳನ್ನು ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಪೂಂಚ್‌ ಜಿಲ್ಲೆಯ ಪಾಕ್‌ ಆಕ್ರಮಿತ ಕಾಶ್ಮೀರದ ರಾವಲ್‌ಕೋಟ್‌ ನಗರದಲ್ಲಿ ಪವಿತ್ರ ರಮ್ಜಾನ್‌ ಮಾಸದ ಶುಕ್ರವಾರದ ಪ್ರಾರ್ಥನೆಯ ವೇಳೆ ಈ ಮಾತುಗಳನ್ನು ಆಡಿರುವುದಾಗಿ ವರದಿಯಾಗಿದೆ.

ಪವಿತ್ರ ರಮ್ಜಾನ್‌ ಮಾಸದಲ್ಲಿ ಜಿಹಾದ್‌ ಕೈಗೊಳ್ಳುವಂತೆಯೂ ಬಶೀರ್‌ ಧಾರ್ಮಿಕ ಶ್ರದ್ಧಾಳುಗಳನ್ನು ಪ್ರಚೋದಿಸಿದರು. ಜೆಯುಡಿ ಕೇಡರ್‌ಗಳು ಕಾಶ್ಮೀರದಲ್ಲಿ ಭಾರತೀಯ ಸೇನೆಯ ವಿರುದ್ಧ ಈಗಲೂ ಜಿಹಾದ್‌ ನಡೆಸುತ್ತಿದ್ದಾರೆ. ಪಿಓಕೆಯ ಪ್ರತಿಯೊಬ್ಬರೂ ತಮ್ಮ ಪುತ್ರರನ್ನು ಜಿಹಾದ್‌ ಗಾಗಿ ನೀಡಬೇಕು. ಅಂತೆಯೇ ಜಿಹಾದಿಗಳಿಗೆ ಆಹಾರ, ಬೇಳೆಕಾಳು, ನಗದನ್ನು ನೀಡಿ ಬೆಂಬಲಿಸಬೇಕು’ ಎಂದು ಬಶೀರ್‌ ಕರೆ ನೀಡಿದರು.

Comments are closed.