ಹೊಸದಿಲ್ಲಿ: ಜೈಪುರದ ರ್ಯಾಲಿಯಲ್ಲಿ ಕಾಂಗ್ರೆಸ್ ಅನ್ನು “ಬೇಲ್ ಗಾಡಿ’ ಎಂದು ಲೇವಡಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್ ರವಿವಾರ ತಿರುಗೇಟು ನೀಡಿದ್ದಾರೆ. ಗೋರಕ್ಷಣೆ ನೆಪದಲ್ಲಿ ಅಮಾಯಕರನ್ನು ಬಿಜೆಪಿ ಕಾರ್ಯಕರ್ತರು ಥಳಿಸುತ್ತಿದ್ದಾರೆ ಎಂದು ಆರೋಪಿಸಿರುವ ಸಿಬಲ್, ಜನರು ಈಗ ಬಿಜೆಪಿಯನ್ನು “ಲಿಂಚ್ ಪೂಜಾರಿ’ ಎಂದು ಕರೆಯುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಜಾರ್ಖಂಡ್ನ ರಾಮಗಢದಲ್ಲಿ ಗೋ ಸಾಗಾಟ ಮಾಡುತ್ತಿದ್ದರು ಎಂಬ ಕಾರಣಕ್ಕಾಗಿ ವ್ಯಕ್ತಿಯನ್ನು ಎಂಟು ಮಂದಿ ಥಳಿಸಿದ್ದರು. ಅವರಿಗೆ ಕೇಂದ್ರ ಸಚಿವ ಜಯಂತ್ ಸಿನ್ಹಾ ಹಾರ ಹಾಕಿರುವುದನ್ನು ಪ್ರಶ್ನೆ ಮಾಡಿರುವ ಸಿಬಲ್, “ವ್ಯಕ್ತಿಯನ್ನು ಥಳಿಸಿ ಕೊಂದ ಎಂಟು ಮಂದಿಗೆ ಜಾಮೀನು ಸಿಕ್ಕಿದ ಬಳಿಕ ಕೇಂದ್ರ ಸಚಿವ ಸಿನ್ಹಾ ಹಾರ ಹಾಕಿದ್ದಾರೆ. ಮೋದಿಯವರೇ ನಿಮ್ಮ ಅಭಿಪ್ರಾಯ ತಪ್ಪು. ನಿಮ್ಮ ಸರಕಾರವನ್ನೇ ಜನ ಲಿಂಚ್ ಪೂಜಾರಿ ಎಂದು ಕರೆಯು ತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
ಹಳೇ ವೀಡಿಯೋ ಹಾಕಿದ ಕಾಂಗ್ರೆಸ್: ಇದೇ ವೇಳೆ ಶನಿವಾರದ ರ್ಯಾಲಿಯಲ್ಲಿ ರಾಜಸ್ಥಾನ ಸಿಎಂ ವಸುಂಧರಾ ರಾಜೇ ವಿರುದ್ಧ ಘೋಷಣೆ ಕೂಗಲಾಗಿತ್ತು ಎಂದು ಭಾವನೆ ಬರುವಂತೆ ಕಾಂಗ್ರೆಸ್ 5 ತಿಂಗಳ ಹಳೆಯ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಲು ಹೋಗಿ ನಗೆಪಾಟಲಿಗೀಡಾಗಿದೆ. ಈ ಬಗ್ಗೆ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಪ್ರಶ್ನೆ ಮಾಡಿ ಟೀಕಿಸಿದ್ದಾರೆ.
Comments are closed.