ರಾಷ್ಟ್ರೀಯ

ವಿವಾದಕ್ಕೆ ಆಸ್ಪದ ಕೊಡುವ ಮತ್ತು ಸಾಮಾಜಿಕ ಶಾಂತಿ ಕದಡುವ ವಿಚಾರಗಳಿಂದ ದೂರವಿರೋಣ: ರಾಷ್ಟ್ರಪತಿ ಸ್ವಾತಂತ್ರ್ಯೋತ್ಸವ ಸಂದೇಶ

Pinterest LinkedIn Tumblr

ಹೊಸದಿಲ್ಲಿ: ವಿವಾದಕ್ಕೆ ಆಸ್ಪದ ಕೊಡುವ ಮತ್ತು ಸಾಮಾಜಿಕ ಶಾಂತಿ ಕದಡುವ ವಿಚಾರಗಳಿಂದ ದೂರವಿದ್ದು, ಉತ್ತಮ ಸಂದೇಶ ನೀಡುವ ಸಮಾಜವನ್ನು ನಾವು ನಿರ್ಮಿಸೋಣ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಸ್ವಾತಂತ್ರ್ಯೋತ್ಸವ ಸಂದೇಶದಲ್ಲಿ ತಿಳಿಸಿದ್ದಾರೆ.

72ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಮುನ್ನಾದಿನವಾದ ಮಂಗಳವಾರ ಸಂಜೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ದೇಶಕ್ಕೆ ಅಗತ್ಯವಾದ ಧನಾತ್ಮಕ ಚಿಂತನೆಗಳತ್ತ ಗಮನ ಹರಿಸೋಣ, ನಾವು ಸಾಧಿಸಬೇಕಾದ ಬಹಳಷ್ಟು ವಿಚಾರಗಳಿವೆ, ಅವುಗಳತ್ತ ಗಮನ ಹರಿಸೋಣ ಎಂದಿದ್ದಾರೆ.

ಮಹಾತ್ಮಾ ಗಾಂಧೀಜಿಯವರ ಅಹಿಂಸಾ ತತ್ವವನ್ನು ಪುನರುಚ್ಚರಿಸಿದ ಕೋವಿಂದ್, ಹಿಂಸೆಗಿಂತ ಅಹಿಂಸೆ ಮಹತ್ವದ್ದು. ಸಾಮೂಹಿಕ ಗಲಭೆ, ಹತ್ಯೆಯಂತಹ ವಿಚಾರಗಳಿಂದ ದೂರವಿದ್ದು, ಅಹಿಂಸಾ ಸಮಾಜವನ್ನು ನಿರ್ಮಿಸೋಣ ಎಂದು ಕರೆ ನೀಡಿದ್ದಾರೆ.

ಮಹಿಳೆಯರ ರಕ್ಷಣೆ ಮತ್ತು ಅವರಿಗೆ ಸಾಮಾಜಿಕ ಭದ್ರತೆಯ ಕುರಿತು ಪ್ರಸ್ತಾಪಿಸಿದ ಕೋವಿಂದ್, ಬಡತನವನ್ನು ಹೋಗಲಾಡಿಸಲು ಎಲ್ಲರೂ ಶ್ರಮಿಸಬೇಕಿದೆ. ದೇಶಕ್ಕೆ ಆಹಾರ ಭದ್ರತೆ ನೀಡುತ್ತಿರುವ ರೈತರ ಪಾತ್ರ ಮಹತ್ವದ್ದಾಗಿದೆ.

ಬಡವರಿಗೆ ಸೂರು, ಬಯಲುಶೌಚಮುಕ್ತ ಹಳ್ಳಿಗಳು, ಎಲ್ಲರಿಗೂ ವಿದ್ಯುತ್ ಸಹಿತ ಹಲವು ಮಹತ್ವದ ಮೈಲಿಗಲ್ಲಿ ಸಾಧಿಸುವಲ್ಲಿ ನಾವೆಲ್ಲ ಕೈಜೋಡಿಸಬೇಕು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ.

Comments are closed.