ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಗಡಿ ಪ್ರದೇಶದಲ್ಲಿ ರಾಮಪಥ (14 ವರ್ಷಗಳ ವನವಾಸದ ವೇಳೆ ಅರಣ್ಯ ಪ್ರವೇಶಿಸಲು ರಾಮ ತೆರಳಿದ್ದ ಮಾರ್ಗಗಳು) ವನ್ನು ನಿರ್ಮಾಣ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ಗೆ ಅಧಿಕಾರ ಸಿಕ್ಕಿದ್ದೇ ಆದಲ್ಲಿ ರಾಮಪಥವಷ್ಟೇ ಅಲ್ಲದೇ ನರ್ಮದಾ ಪರಿಕ್ರಮ ಪಥವನ್ನೂ ನಿರ್ಮಾಣ ಮಾಡುವುದಾಗಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಮಧ್ಯಪ್ರದೇಶದ್ಲಲಿ 2003 ರಿಂದಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಹೊಸ ದಾಳವನ್ನು ಪ್ರಯೋಗಿಸಲು ಮುಂದಾಗಿರುವ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮಪಥ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದೆ.
“ರಾಮಪಥ ನಿರ್ಮಾಣ ಮಾಡುವ ಭರವಸೆಯನ್ನು ಬಿಜೆಪಿ ಈ ವರೆಗೂ ಈಡೇರಿಸಿಲ್ಲ. ರಾಜ್ಯದ ಗಡಿ ಪ್ರದೇಶಗಳಲ್ಲಿ ರಾಮಪಥವನ್ನಿ ನಿರ್ಮಾಣ ಮಾಡಲು ನಾವು ಯೋಜನೆ ರೂಪಿಸಿದ್ದೇವೆ” ಎಂದು ದಿಗ್ವಿಜಯ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಾಂಗ್ರೆಸ್ ಮೃದು ಹಿಂದುತ್ವ ಧೋರಣೆಯನ್ನು ಅನುಸರಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ದಿಗ್ವಿಜಯ್ ಸಿಂಗ್, ಮೃದು ಹಿಂದುತ್ವ, ಉಗ್ರ ಹಿಂದುತ್ವ ಎಂಬುದೇನೂ ಇಲ್ಲ, ಹಿಂದುತ್ವ ರಿಲಿಜಿಯನ್ ಗೆ ಸಂಬಂಧಿಸಿದ್ದಲ್ಲ ಎಂದು ಹೇಳಿದ್ದಾರೆ.
ರಾಮ ವನವಾಸಕ್ಕಾಗಿ ಹೋಗುವಾಗ ಮಧ್ಯಪ್ರದೇಶದ ಈಗಿನ ಸಂತಾ, ಪನ್ನಾ, ಶಹ್ಡಾಲ್, ಜಬಲ್ಪುರ್ ಮತ್ತು ವಿದಿಶಾ ಜಿಲ್ಲೆಗಳ ಮೂಲಕ ಸಂಚರಿಸಿದ್ದ, ಈ ಮಾರ್ಗಗಳಲ್ಲಿ ರಾಮಪಥ ನಿರ್ಮಾಣ ಯೋಜನೆಯ ಬಗ್ಗೆ2007 ರಲ್ಲೇ ಬಿಜೆಪಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಭರವಸೆ ನೀಡಿದ್ದರು ಆದರೆ ಈವರೆಗೂ ಅದು ಈಡೇರಿಲ್ಲ ಎಂದು ದಿವ್ಗಿಜಯ್ ಸಿಂಗ್ ಆರೋಪಿಸಿದ್ದಾರೆ.
Comments are closed.