ನವದೆಹಲಿ: ಸುಪ್ರೀಂ ಕೋರ್ಟ್ ಅಮ್ರ್ಪಾಲಿ ಬಿಲ್ಡರ್ಸ್ನ ಮೂವರು ನಿರ್ದೇಶಕರನ್ನು ಬಂಧಿಸುವಂತೆ ಆದೇಶಿಸಿದೆ. ಸುಪ್ರೀಂ ಕೋರ್ಟ್ ಜೊತೆ ಯಾವುದೇ ಆಟ ಆಡಬೇಡಿ ಎಂದು ಎಚ್ಚರಿಸಿರುವ ಸರ್ವೋಚ್ಚ ನ್ಯಾಯಾಲಯ ನಿರ್ದೇಶಕರಾದ ಅನಿಲ್ ಶರ್ಮಾ, ಶಿವಪ್ರಿಯ ಹಾಗೂ ಅಜಯ್ ಕುಮಾರ್ರನ್ನು ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ. ಎಲ್ಲಾ ದಾಖಲೆಗಳನ್ನು ಆಡಿಟರ್ಸ್ಗೆ ನೀಡುವವರೆಗೆ ಈ ಮೂವರು ಪೊಲೀಸ್ ಕಸ್ಟಡಿಯಲ್ಲೇ ಇರಬೇಕೆಂದು ಸುಪ್ರೀಂ ಆದೇಶಿಸಿದೆ.
ಏನಿದು ಪ್ರಕರಣ:
ಅಪೂರ್ಣ ವಸತಿ ಯೋಜನೆ ಹಾಗೂ ಆದೇಶಗಳನ್ನು ಕಡೆಗಣಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮ್ರ್ಪಾಲಿ ರಿಯಲ್ ಎಸ್ಟೇಟ್ ಗ್ರೂಪ್ ವಿರುದ್ಧ ಸುಪ್ರೀಂ ಕೋರ್ಟ್ ಮತ್ತಷ್ಟು ಕಟು ನಿಲುವು ತೋರಿಸಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ ಈ ಆದೇಶ ನೀಡಿದೆ.
ಜಸ್ಟೀಸ್ ಅರುಣ್ ಮಿಶ್ರಾ ಹಾಗೂ ಜಸ್ಟೀಸ್ ಯುಯು ಲಲಿತ್ ನೇತೃತ್ವದ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿ ‘ಕಣ್ಣು ಮುಚ್ಚಾಲೆ’ ಆಡಬೇಡಿ ಎಂದಿದ್ದಾರೆ. ಅಲ್ಲದೇ ಬಿಲ್ಡರ್ಸ್ಗಳು ಬೇಕೆಂದೇ ಕೋರ್ಟ್ ಆದೇಶವನ್ನು ಪಾಲಿಸುತ್ತಿಲ್ಲ. ಇದು ನ್ಯಾಯಾಲಯದ ಘನತೆಯೊಂದಿಗೆ ಚೆಲ್ಲಾಟವಾಡಿದಂತೆ ಎಂದಿದ್ದಾರೆ.
ಕಳೆದ ಬಾರಿಯ ವಿಚಾರಣೆ ವೇಳೆ ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್ 2015ರಿಂದ ಈವರೆಗೆ ಅಮ್ರ್ಪಾಲಿ ಬಿಲ್ಡರ್ಸ್ನ 46 ಕಂಪೆನಿಗಳ ಎಲ್ಲಾ ಖಾತೆಗಳ ವಿವರವನ್ನು ಯಾಕೆ ಕೋರ್ಟ್ಗೆ ನೀಡಿಲ್ಲ ಎಂದು ಪ್ರಶ್ನಿಸಿತ್ತು. ಅಲ್ಲದೇ 10 ದಿನಗಳೊಳಗೆ ಎಲ್ಲಾ ಅಕೌಂಟ್ಗಳ ಬ್ಯಾಲೆನ್ಸ್ ಶೀಟ್ ಸಲ್ಲಿಸುವಂತೆ ನಿರ್ದೇಶಿಸಿತ್ತು.
ಕಳೆದ ಬಾರಿಯ ವಿಚಾರಣೆಯಲ್ಲಿ ಸುಪ್ರೀಂ ತನ್ನ ಆದೇಶದಲ್ಲಿ ಅಮ್ರ್ಪಾಲಿ ಗ್ರೂಪ್ ಹೆಸರಿನಲ್ಲಿರುವ 16 ಆಸ್ತಿಗಳು ಹರಾಜಾಗಲಿವೆ ಹಾಗೂ 46 ಕಂಪೆನಿಗಳು ಹಾಗೂ ಅದರ ನಿರ್ದೇಶಕರ ಸಂಪತ್ತು ಫಾರೆನ್ಸಿಕ್ ಅಡಿಟ್ ಆಗಬೇಕು ಎಂದಿತ್ತು. ಇದರೊಂದಿಗೆ ಕಂಪೆನಿಯ ನಿರ್ದೇಶಕರಲ್ಲೊಬ್ಬರಾದ ಅನಿಲ್ ಶರ್ಮಾರಿಗೆ 4 ದಿನಗಳಲ್ಲಿ ಸಂಪತ್ತಿನ ವಿವರವನ್ನು ಅಫಿಡವಿಟ್ನಲ್ಲಿ ಸಲ್ಲಿಸುವಂತೆಯೂ ಸೂಚಿಸಿತ್ತು.
Comments are closed.