ರಾಷ್ಟ್ರೀಯ

ಗೋವಾ: ಸರ್ಕಾರ ರಚನೆಗೆ ಮುಂದಾಗಿದ್ದ ಕಾಂಗ್ರೆಸ್ಸಿನ ಇಬ್ಬರು ಶಾಸಕರು ಬಿಜೆಪಿ ಸೇರ್ಪಡೆ

Pinterest LinkedIn Tumblr


ನವದೆಹಲಿ: ಗೋವಾದಲ್ಲಿ ಸರ್ಕಾರ ರಚನೆಗೆ ಮುಂದಾಗಿದ್ದ ಕಾಂಗ್ರೆಸ್​​ಗೆ ಮೊದಲ ಹಂತದಲ್ಲೇ ಭಾರೀ ಹಿನ್ನಡೆಯಾಗಿದೆ. ಕಾಂಗ್ರೆಸ್​​ನ ಶಾಸರಾದ ದಯಾನಂದ್ ಸೊಪ್ಟೆ ಮತ್ತು ಸುಭಾಶ್ ಶಿರೋಡ್ಕರ್ ಈಗಾಗಲೇ ಕಾಂಗ್ರೆಸ್​​ ರಾಜೀನಾಮೆ ನೀಡಿದ್ದು, ಇಂದು ಬಿಜೆಪಿ ಸೇರ್ಪಡೆಯಾಗಲಿದ್ಧಾರೆ ಎನ್ನುತ್ತಿವೆ ಮೂಲಗಳು. ಅಲ್ಲದೇ ಕೈ ಪಾಳೆಯದ ಮತ್ತಷ್ಟು ಶಾಸಕರು ಕೂಡ ಕೇಸರಿ ಪಕ್ಷದತ್ತ ಒಲವು ತೋರಿದ್ಧಾರೆ ಎನ್ನಲಾಗಿದೆ.

ದಯಾನಂದ್ ಸೊಪ್ಟೆ ಮತ್ತು ಸುಭಾಶ್ ಶಿರೋಡ್ಕರ್ ರಾಜೀನಾಮೆ ನೀಡಿದ ಬಳಿಕ ಧಿಡೀರ್​​ ದೆಹಲಿಗೆ ತೆರಳಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​​ ಶಾ ಅವರನ್ನು ಭೇಟಿ ಮಾಡಿ ರಾಜೀನಾಮೆ ವಿಚಾರದ ಬಗ್ಗೆ ಚರ್ಚಿಸಿದ್ದರು. ಈ ವೇಳೆ ಇಬ್ಬರು ಕಾಂಗ್ರೆಸ್​ ಶಾಸಕರು ಇಂದು ಬಿಜೆಪಿಗೆ ಸೇರ್ಪಡೆಯಾಗುವ ಬಗ್ಗೆ ಸೇರಿದಂತೆ ಮುಂದಿನ ಕಾರ್ಯಕ್ರಮಗಳ ಕುರಿತು ಗಂಭೀರ ಮಾತುಕತೆ ನಡೆಸಲಾಯ್ತು ಎನ್ನುತ್ತಿವೆ ಬಿಜೆಪಿ ಮೂಲಗಳು.

ಅಮಿತ್​​ ಶಾ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತಾಡಿದ ಶಿರೋಡ್ಕರ್​​​ ನಾವು ಕಾಂಗ್ರೆಸ್​​ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನು ಮೂವರು ಕಾಂಗ್ರೆಸ್​​ ಬಂಡಾಯ ಶಾಸಕರು ಬಿಜೆಪಿಗೆ ಬರಲಿದ್ಧಾರೆ. ನಾವು ಕಳೆದ ಸೋಮವಾರವೇ ಬಿಜೆಪಿ ಸೇರಬೇಕಿತ್ತು. ಆದರೆ, ರಾಜೀನಾಮೆ ನೀಡಲು ವಿಳಂಬವಾಗಿದ್ದ ಕಾರಣಕ್ಕೆ ಸೇರ್ಪಡೆಯಾಗಲು ಆಗಲಿಲ್ಲ ಎಂದಿದ್ಧಾರೆ.

ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಅನಾರೋಗ್ಯ ಪೀಡಿತರಾಗಿ ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆದು ಸದ್ಯ ಗುಣಮುಖರಾಗಿದ್ದಾರೆ. ಆಸ್ಪತ್ರೆಯಲ್ಲಿದ್ದಾಗಲೂ ಆಡಳಿತ ಯಂತ್ರ ಸರಾಗ ನಡೆಯುವುದಂತೆ ನೋಡಿಕೊಂಡಿದ್ದರು ಎನ್ನಲಾಗಿದೆ. ಆದರೆ, ಬಿಜೆಪಿ ಸರ್ಕಾರಕ್ಕೆ ಬೇಕಾದ ಬೆಂಬಲವಿಲ್ಲ, ಆಡಳಿತ ಯಂತ್ರ ಕುಸಿದಿದೆ ಎಂದು ಕಾಂಗ್ರೆಸ್​​ ಆರೋಪಿಸಿದೆ. ಈ ಮೂಲಕ ತನ್ನ ಸರ್ಕಾರ ರಚನೆ ಮಾಡುವ ಪ್ರಯತ್ನ ಮತ್ತೊಮ್ಮೆ ಮುಂದುವರೆಸಿದೆ.

ಇದೀಗ ಗೋವಾ ಕಾಂಗ್ರೆಸ್​​ಗೆ ಮೊದಲ ಹಂತದಲ್ಲೇ ಹಿನ್ನಡೆಯಾಗಿದೆ. ದಯಾನಂದ್ ಸೊಪ್ಟೆ ಮತ್ತು ಸುಭಾಶ್ ಶಿರೋಡ್ಕರ್ ಬೆನ್ನಲ್ಲೇ ಮತ್ತಷ್ಟು ಶಾಸಕರು ರಾಜೀನಾಮೆ ನೀಡಲಿದ್ದಾರ ಎಂಬ ಭೀತಿಯೂ ಕಾಂಗ್ರೆಸ್​​ಗೆ ಕಾಡತೊಡಗಿದೆ. ಇಬ್ಬರು ಕಾಂಗ್ರೆಸ್ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಗೋವಾ ರಾಜ್ಯಪಾಲ ಮೃದುಲಾ ಸಿನ್ಹಾ ಕೂಡ ತಿಳಿಸಿದ್ದಾರೆ. ಇದರೊಂದಿಗೆ 40 ಶಾಸಕರ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ ಬಲ 16ರಿಂದ 14ಕ್ಕೆ ಕುಸಿದಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೋವಾದ 40 ಕ್ಷೇತ್ರಗಳ ಪೈಕಿ ಕಾಂಗ್ರೆಸ್​ 16 ಸೀಟುಗಳು ಗೆದ್ದಿತ್ತು. ಬಿಜೆಪಿ ಕೇವಲ 14 ಸೀಟು ಗೆದ್ದು ಗೋವಾದ ಫಾರ್ವರ್ಡ್ ಪಕ್ಷ, ಎಂಜಿಪಿಯ ತಲಾ ಮೂವರು ಹಾಗೂ 3 ಪಕ್ಷೇತರರ ಶಾಸಕರ ಬೆಂಬಲೊಂದಿಗೆ ಸರ್ಕಾರ ರಚಿಸಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್​​ ಬಿಜೆಪಿ ಅಕ್ರಮವಾಗಿ ಸರ್ಕಾರ ರಚಿಸಿದೆ ಎಂದು ಆರೋಪಿಸಿತ್ತು.

ಪರಿಕ್ಕರ್​​ ರಾಜೀನಾಮೆಗೆ ಒತ್ತಾಯ: ಗೋವಾದಲ್ಲಿ ಬಿಜೆಪಿ ಅಧಿಕಾರ ಲಾಲಸೆಯಿಂದ ಕೂಡಿದೆ. ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ರಾಜೀನಾಮೆ ನೀಡಬೇಕು. ರಾಜ್ಯ ವಿಧಾನಸಭೆ ವಿಶೇಷ ಅಧಿವೇಶನ ನಡೆಸುವ ಮೂಲಕ ಬಹುಮತ ಸಾಬೀತು ಮಾಡಲು ಅವಕಾಶ ಕಲ್ಪಿಸಬೇಕು. ಬಿಜೆಪಿ ದುರಾಡಳಿತದಿಂದ ಜನ ಬೇಸತ್ತಿದ್ಧಾರೆ ಎಂದು ಗೋವಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಚೋಡಂಕರ್ ವಾಗ್ದಾಳಿ ನಡೆಸಿದ್ದಾರೆ.

ಮನೋಹರ್ ಬಗ್ಗೆ ಬಿಜೆಪಿಗೆ ಭಯ: ಈಗಾಗಲೇ ಮನೋಹರ್ ಪರಿಕ್ಕಾರ್ ಅವರು ಗೋವಾ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತೇನೆ ಎಂದಿದ್ಧಾರಂತೆ. ರಾಜೀನಾಮೆ ಅಂಗೀಕರಿಸುವಂತೆ ಬಿಜೆಪಿ ಹೈಕಮಾಂಡ್​​ಗೆ ಕೂಡ ಮನವಿ ಮಾಡಿದ್ದಾರೆ. ಆದರೆ, ಪರಕ್ಕರ್​​ ಸಿಎಂ ಸ್ಥಾನದಿಂದ ಕೆಳಗಿಳಿದರೆ, ಗೋವಾದಲ್ಲಿನ ಬಿಜೆಪಿ ಸರ್ಕಾರ ಕುಸಿಯುವ ಸಾಧ್ಯತೆಯಿದೆ. ಹೀಗಾಗಿ ಅಮಿತ್​​ ಶಾ ಪರಿಕ್ಕರ್ ರಾಜೀನಾಮೆ ಸ್ವೀಕರಿಸಲಿಲ್ಲ ಎಂಬ ಚರ್ಚೆಯೂ ನಡೆಯುತ್ತಿದೆ.

Comments are closed.