ನವದೆಹಲಿ: ಒಂದು ಕಡೆ ಕೇರಳದಲ್ಲಿ ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ತಡೆಗಟ್ಟಲು ಪ್ರಯತ್ನಿಸುತ್ತಿರುವ ಪ್ರತಿಭಟನಾಕಾರರಿಗೆ ಬಿಜೆಪಿ ನೇರವಾಗಿಯೇ ಬೆಂಬಲ ಘೋಷಿಸಿದೆ. ಇನ್ನೊಂದೆಡೆ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಶಬರಿಮಲೆಗೆ ಮಹಿಳೆಯರು ಪ್ರವೇಶ ಮಾಡಿದರೆ ತಪ್ಪೇನು? ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಬಿಜೆಪಿ ನಾಯಕರು ಇಬ್ಬಂದಿ ನೀತಿ ಅನುಸರಿಸುತ್ತಿದ್ದಾರಾ? ಎಂಬ ಅನುಮಾನ ಮೂಡುತ್ತಿದೆ.
ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಹುದು ಎಂಬ ತೀರ್ಪು ಬರುವ ಮೊದಲು ಇಸ್ಲಾಂ ಧರ್ಮದಲ್ಲಿರುವ ತ್ರಿವಳಿ ತಲಾಖ್ ನಿಷೇಧ ಎಂಬ ತೀರ್ಪು ಬಂದಿತ್ತು. ಆಗ ದೇಶಕ್ಕೆ ದೇಶವೇ ಆ ತೀರ್ಪಿಗೆ ಚಪ್ಪಾಳೆ ತಟ್ಟಿತ್ತು. ಅದೇ ಜನರು ಇಂದು ಶಬರಿಮಲೆ ತೀರ್ಪಿನ ವಿರುದ್ಧ ಆಕ್ಷೇಪ ಎತ್ತುತ್ತಿರುವುದು ಯಾಕೆ? ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ.
ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಎಲ್ಲ ವಯೋಮಾನದ ಮಹಿಳೆಯರೂ ಪ್ರವೇಶಿಸಬಹುದು ಎಂದು ತೀರ್ಪು ನೀಡಿರುವ ಸುಪ್ರೀಂಕೋರ್ಟ್ ವಿರುದ್ಧ ಘೋಷಣೆ ಕೂಗುತ್ತ ಕೇರಳದಲ್ಲಿ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ಧ್ವನಿಯೆತ್ತಿರುವ ಸುಬ್ರಮಣಿಯನ್ ಸ್ವಾಮಿ, ಸುಪ್ರೀಂಕೋರ್ಟ್ ತೀರ್ಪನ್ನು ಎಲ್ಲರೂ ಗೌರವಿಸಬೇಕು ಎಂದಿದ್ದಾರೆ.
ಶಬರಿಮಲೆ ವಿಷಯದಲ್ಲಿ ಕಾನೂನಿಗಿಂತಲೂ ನಮ್ಮ ಸಂಸ್ಕೃತಿ, ನಡೆದುಕೊಂಡು ಬಂದಿರುವ ಪದ್ಧತಿ ದೊಡ್ಡದು ಎಂದು ಹೇಳಲಾಗುತ್ತಿದೆ. ತ್ರಿವಳಿ ತಲಾಖ್ ಕೂಡ ಅವರ ಧರ್ಮದ ಸಂಸ್ಕೃತಿಯೇ ಆಗಿತ್ತು. ನಾವು ಮುಂದುವರಿಯುತ್ತಿದ್ದೇವೆ ಎಂದಾಗ ಅದನ್ನು ಸ್ವಾಗತಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಅದುಬಿಟ್ಟು ಇದುವರೆಗೆ ನಡೆದುಕೊಂಡು ಬಂದಿದ್ದೇ ಮುಂದೂ ನಡೆಯಬೇಕು ಎಂದು ವಾದಿಸುವುದು ಮೂರ್ಖತನ ಎಂದಿದ್ದಾರೆ.
Comments are closed.