ಬಿಹಾರ: ಶಸ್ತ್ರಚಿಕಿತ್ಸೆ ಕೊಠಡಿಗೆ ನುಗ್ಗಿದ ಬೀದಿ ನಾಯಿಯೊಂದು ಆಪರೇಷನ್ ನಡೆಯುವ ವೇಳೆ ಕತ್ತರಿಸಿ ಇಟ್ಟಿದ್ದ ರೋಗಿಯ ಕಾಲನ್ನು ಕಚ್ಚಿಕೊಂಡು ಹೋಗಿರುವ ವಿಚಿತ್ರ ಘಟನೆ ಬಿಹಾರದ ಆಸ್ಪತ್ರೆಯೊಂದರಲ್ಲಿ ಗುರುವಾರ ನಡೆದಿದೆ.
ಬಾಕ್ಸರ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಅರಾ ಜಿಲ್ಲೆಯ ರಾಮನಾಥ್ ಮಿಶ್ರಾ ಎಂಬಾತ ಬಾಕ್ಸರ್ ರೈಲ್ವೆ ನಿಲ್ದಾಣದಿಂದ ನಿರ್ಗಮಿಸುತ್ತಿದ್ದ ಶ್ರಮಜೀವಿ ಎಕ್ಸ್ಪ್ರೆಸ್ ರೈಲನ್ನು ಹಿಡಿಯಲು ಹೋಗಿ ಜಾರಿ, ರೈಲ್ವೆ ಹಳಿ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಇದನ್ನು ಗಮನಿಸಿದ ರೈಲ್ವೆ ಪೊಲೀಸರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಈ ವೇಳೆ ವೈದ್ಯರು ಗಾಯಗೊಂಡಿದ್ದ ಮಿಶ್ರಾ ಅವರ ಕಾಲನ್ನು ಕತ್ತರಿಸಿ ಪಕ್ಕಕ್ಕಿಟ್ಟು ಡ್ರೆಸ್ಸಿಂಗ್ ಮಾಡುವ ಮುಂಚೆ ಸ್ವಚ್ಛಗೊಳಿಸುತ್ತಿದ್ದಾಗ ಆಪರೇಷನ್ ಕೊಠಡಿಗೆ ನುಗ್ಗಿದ ನಾಯಿ ಕತ್ತರಿಸಿಟ್ಟಿದ್ದ ಕಾಲಿನ ಭಾಗವನ್ನು ಕಚ್ಚಿಕೊಂಡು ಅಲ್ಲಿಂದ ಪರಾರಿಯಾಗಿದೆ. ಆನಂತರ ಗಂಭೀರ ಗಾಯಗೊಂಡಿದ್ದ ಮಿಶ್ರಾ ಅವರು ಕೂಡ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು.
ಕಪ್ಪು ಬಣ್ಣದ ನಾಯಿ ಬಾಯಿಯಲ್ಲಿ ಒಂದು ತುಂಡು ಮಾಂಸ ಮತ್ತು ಮೂಳೆಯನ್ನು ಕಚ್ಚಿಕೊಂಡು ಸರ್ದಾರ್ ಆಸ್ಪತ್ರೆಯಿಂದ ಪರಾರಿಯಾಗುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅಂದಹಾಗೆ ಬಾಕ್ಸರ್ ಜಿಲ್ಲೆಯು ಕೇಂದ್ರ ಆರೋಗ್ಯ ಸಚಿವ ಅಶ್ವಿನ್ ಕುಮಾರ್ ಛೌಬೆ ಅವರ ಲೋಕಸಭಾ ಕ್ಷೇತ್ರವಾಗಿದೆ
Comments are closed.