ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವನ್ನು ಕಟುವಾಗಿ ಟೀಕಿಸುವ ನಟ ಪ್ರಕಾಶ್ ರೈ ಅವರು, ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲು ಮುಂದಾಗಿದ್ದಾರೆ. ಬೆಂಗಳೂರು ಸೆಂಟ್ರಲ್ನಿಂದ ಸ್ಪರ್ಧೆ ಮಾಡುವುದಾಗಿ ಘೋಷಿಸಿರುವ ರೈ ಅವರಿಗೆ, ಆಪ್ ಪಕ್ಷ ಬೆಂಬಲಿಸುವುದಾಗಿ ತಿಳಿಸಿದೆ. ಅಲ್ಲದೇ ಎಲ್ಲಾ ರೀತಿಯಲ್ಲಿ ತಮಗೆ ಸಹಾಯ ಮಾಡುವುದಾಗಿ ರಾಜ್ಯ ಆಪ್ ನಾಯಕರು ಭರವಸೆ ನೀಡಿದ್ಧಾರೆ. ಜೊತೆಗೆ ಈ ಬಗ್ಗೆ ಅಧಿಕೃತವಾಗಿ ಸಿಎಂ ಕೇಜ್ರಿವಾಲ್ರನ್ನು ಭೇಟಿಯಾಗಲು ರೈ ದೆಹಲಿಗೆ ತೆರಳಿದ್ದರು.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ದತೆ ನಡೆಸಿಕೊಳ್ಳುತ್ತಿರುವ ಪ್ರಕಾಶ್ ರೈ ಅವರು, ಈಗಾಗಲೇ ಕ್ಷೇತ್ರದಲ್ಲಿ ಚುರುಕಾಗಿ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಬೆಂಬಲ ನೀಡಬಹುದಾದ ಪಕ್ಷದ ವಕ್ತಾರರನ್ನು ಭೇಟಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ದೆಹಲಿಗೆ ಆಗಮಿಸಿದ್ದ ಪ್ರಕಾಶ್ ರೈ, ಸಿಎಂ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ರೈ ಅವರಿಗೆ ಆಪ್ ಸಂಪೂರ್ಣವಾಗಿ ಬೆಂಬಲಿಸುದಾಗಿ ಅಧಿಕೃತವಾಗಿ ಘೋಷಿಸಿತು. ಮಾತುಕತೆಯ ನಂತರ ಟ್ವೀಟ್ ಮೂಲಕ ದೆಹಲಿ ಸಿಎಂ ಮತ್ತು ಆಪ್ ಮುಖ್ಯಸ್ಥ ಕೇಜ್ರಿವಾಲ್ ಅವರು ರೈ ಅವರ ಬೆಂಬಲಕ್ಕೆ ನಿಲ್ಲುವುದಾಗಿ ತಿಳಿಸಿದರು.
ಒಂದು ವಾರದ ಹಿಂದೇ ಜನವರಿ 1 ರಂದು ಹೊಸವರ್ಷಕ್ಕೆ ತಾವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ತಮ್ಮ ಆಪ್ತರಿಗೆ ಹೊಸ ವರ್ಷದ ಶುಭಾಶಯ ಕೋರಿದ್ದು ಪ್ರಕಾಶ್ ರೈ, ಪಕ್ಷೇತರ ಅಭ್ಯರ್ಥಿಯಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಯಲು ನಿರ್ಧರಿಸಿದ್ದೇನೆ. ನನ್ನ ಮೇಲೆ ಹೆಚ್ಚು ಜವಾಬ್ದಾರಿಗಳಿವೆ. ಸಂಸತ್ನಲ್ಲಿ ಜನರ ಪರವಾಗಿ ಧ್ವನಿಯೆತ್ತಲು ಬೆಂಬಲಿಸಿ ಎಂದು ಕೇಳಿಕೊಂಡಿದ್ದರು.
ನನ್ನ ಸ್ಪರ್ಧೆ ಬಗ್ಗೆ ನಿರ್ಧಾರ ಮಾಡಲಾಗಿದೆ. ಈ ಕುರಿತು ಈಗಾಗಲೇ ನಮ್ಮ ಆಪ್ತರ ಬಳಿ ಚರ್ಚಿಸಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ನಿಲ್ಲಲು ಎಲ್ಲಾ ರೀತಿಯ ತಯಾರಿ ನಡೆಸಲಾಗುತ್ತಿದೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಹಾಗೆಯೇ ಇನ್ನುಂದೆ ಸಂಸತ್ನಲ್ಲಿಯೂ ಜಸ್ಟ್ ಆಸ್ಕಿಂಗ್ ಅಭಿಯಾನ ಶುರುವಾಗಲಿದೆ. ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದೇನೆ ಎನ್ನುವುದರ ಕುರಿತು ಸದ್ಯದಲ್ಲೇ ಮಾಹಿತಿ ನೀಡಲಿದ್ದೇನೆ ಎಂದು ಟ್ವೀಟ್ ಮೂಲಕ ತಮ್ಮ ಆಪ್ತರಿಗೆ ಸಿಹಿಸುದ್ದಿ ನೀಡಿದ್ದರು.
ಇದೀಗ ರೈ ಬೆಂಗಳೂರು ಸೆಂಟ್ರಲ್ನಿಂದ ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಮಾಹಿತಿ ನೀಡಿದ್ದಾರೆ. ಈಗಾಗಲೇ ಆಪ್ ಪಕ್ಷವೂ ಬೆಂಬಲಿಸುವುದಾಗಿ ಘೋಷಿಸಿದ್ದು, ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ರೈ ಭೇಟಿ ಮಾಡಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ತಂತ್ರ ರೂಪಿಸುತ್ತಿರುವ ನಟ ರೈ ಅವರು, ಇಂದು ಕೇಜ್ರಿವಾಲ್ ಅವರ ಜೊತೆ ಮಾತುಕತೆ ನಡೆಸಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಸ್ವತಂತ್ರವಾಗಿ ಪಕ್ಷ ಕಟ್ಟಿ ರಾಷ್ಟ್ರ ರಾಜಧಾನಿಯ ಆಡಳಿತ ಚುಕ್ಕಾಣಿ ಹಿಡಿದಿರುವ ಕೇಜ್ರಿವಾಲ್ ದಕ್ಷಿಣ ರಾಜ್ಯಗಳಲ್ಲಿ ಅಷ್ಟೇನು ಪ್ರಾಬಲ್ಯ ಹೊಂದಿಲ್ಲ. ಪ್ರಕಾಶ್ ರೈ ಅವರೊಂದಿಗೆ ಕೈ ಜೋಡಿಸುವ ಮೂಲಕ ತಮ್ಮ ಪಕ್ಷ ಬಲಪಡಿಸಿಕೊಳ್ಳಲು ಮುಂದಾಗಿದ್ದಾರಾ? ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. ಇನ್ನೊಂದೆಡೆ ಇತ್ತೀಚೆಗೆ ಸಕ್ರಿಯ ರಾಜಕಾರಣಕ್ಕೆ ಹೊಸದಾಗಿ ಕಾಲಿಟ್ಟ ರೈ ಅವರೇ, ಕೇಜ್ರಿವಾಲ್ ಅವರಿಂದ ಗೆಲುವು ಸಲುವಾಗಿಯೇ ಒಂದಷ್ಟು ಸಲಹೆ ಪಡೆದಿದ್ದಾರ? ಎಂಬುದನ್ನ ಅವರೇ ಸ್ಪಷ್ಟಪಡಿಸಬೇಕಾಗಿದೆ.
ಗೌರಿ ಲಂಕೇಶ್ ಹತ್ಯೆ ಬಳಿಕ ಹತ್ಯೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ಒಂದು ಮಾತನ್ನು ಆಡಲಿಲ್ಲ ಎಂದು ಪ್ರಶ್ನಿಸುತ್ತಾ ಬಂದು ಪ್ರಕಾಶ್ ರೈ, ರಾಜಕೀಯವಾಗಿ ಪ್ರಧಾನಿ ಮೋದಿ ಅವರನ್ನು ಬಹಿರಂಗವಾಗಿ ಟೀಕಿಸಲು ಆರಂಭಿಸಿದರು. ಸಾರ್ವಜನಿಕ ಸಮಾರಂಭಗಳಲ್ಲಿಯೂ ಬಲಪಂಥೀಯ ಸಂಘಟನೆಗಳ ವಿರುದ್ಧ ಸಿಡಿದೆದ್ದು ಹಿಂದೂ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾದರು. ಇದೀಗ ತಮ್ಮ ಧ್ವನಿಗೆ ರಾಜಕೀಯ ಶಕ್ತಿ ಅಗತ್ಯತೆಯನ್ನು ಮನಗಂಡ ಅವರು ರಾಜಕೀಯಕ್ಕೆ ದುಮುಕಿದ್ದಾರೆ. ಈಗಾಗಲೇ ಆಮ್ ಆದ್ಮಿ ಪಕ್ಷ ಬೆಂಬಲ ಸೂಚಿಸಿದ್ದು, ಮುಂದೆ ಏನಾಗಲಿದೆ? ಎಂದು ಕಾದು ನೋಡಬೇಕಿದೆ.
Comments are closed.