ರಾಷ್ಟ್ರೀಯ

ಆಧಾರ್, ಚುನಾವಣಾ ಗುರುತು ಪತ್ರ, ಪಾಸ್ ಪೋರ್ಟ್ ಭಾರತದ ಪೌರತ್ವ ಪಡೆಯಲು ದಾಖಲೆಗಳಾಗಲ್ಲ: ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ

Pinterest LinkedIn Tumblr

ನವದೆಹಲಿ: ಭಾರತದ ಪೌರತ್ವಕ್ಕೆ ಆಧಾರ್, ಚುನಾವಣಾ ಗುರುತು ಪತ್ರ ಮತ್ತು ಪಾಸ್ ಪೋರ್ಟ್ ದಾಖಲೆಗಳಲ್ಲ ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಪೌರತ್ವ ದಾಖಲಾತಿಗೆ ಅಗತ್ಯವಿರುವ ದಾಖಲೆಗಳನ್ನು ಅಧಿಕಾರಿಗಳು ಕೇಳುತ್ತಿದ್ದು ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಹಬ್ಬುತ್ತಿರುವ ವದಂತಿಗಳ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ.

ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ ಆರ್ ಸಿ ಬಗ್ಗೆ ಎದ್ದಿರುವ ಪ್ರತಿಭಟನೆ ಮತ್ತು ಹಿಂಸಾಚಾರ ಸಂಬಂಧ 13 ಪ್ರಶ್ನೆಗಳನ್ನು ಅದಕ್ಕೆ ಉತ್ತರಗಳನ್ನು ಸಿದ್ದಪಡಿಸಿರುವ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಇರುವ ವಾಸ್ತವಾಂಶಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡಿದೆ.

ಎನ್ ಆರ್ ಸಿ ಬಗ್ಗೆ ಈಗ ಮಾತನಾಡುವುದು ಬಹಳ ಬೇಗನೆ ಆಗುತ್ತದೆ ಆದರೆ ಚುನಾವಣಾ ಗುರುತುಪತ್ರ, ಆಧಾರ್ ಕಾರ್ಡು ಮತ್ತು ಪಾಸ್ ಪೋರ್ಟ್ ಪೌರತ್ವ ಪಡೆಯಲು ಸಲ್ಲಿಸಬೇಕಾದ ದಾಖಲೆಗಳಾಗುವುದಿಲ್ಲ. ಇವುಗಳು ಪ್ರಯಾಣ ಮಾಡುವಾಗ ಸಲ್ಲಿಸುವ ದಾಖಲೆಗಳು ಮತ್ತು ಭಾರತದಲ್ಲಿ ವಾಸವಿದ್ದೇವೆ ಎಂದು ಖಚಿತಪಡಿಸಲು ತೋರಿಸುವ ದಾಖಲೆಗಳು ಮಾತ್ರ ಆಗಿರುತ್ತವೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವಾಲಯ ವಕ್ತಾರರು, ವ್ಯಕ್ತಿಯ ಜನ್ಮ ಪ್ರಮಾಣ ಪತ್ರ, ಜನನ ಸ್ಥಳ ಪ್ರಮಾಣಪತ್ರ ಅಥವಾ ಇವೆರಡನ್ನೂ ಸಲ್ಲಿಸಿ ಭಾರತದ ಪೌರತ್ವಕ್ಕೆ ಸಂಬಂಧಿಸಿದಂತೆ ದಾಖಲೆಯಾಗುತ್ತದೆ. ಪೌರತ್ವ ಕಾಯ್ದೆ ಹೆಸರಿನಲ್ಲಿ ಯಾರಿಗೂ ಕಿರುಕುಳ ನೀಡುವುದಾಗಲಿ, ಅನನುಕೂಲತೆ ಮಾಡುವುದಾಗಲಿ ಮಾಡುವುದಿಲ್ಲ.

ಅನಕ್ಷರಸ್ಥ ನಾಗರಿಕರಿಗೆ ಸಮುದಾಯದ ಸದಸ್ಯರು ನೀಡುವ ಸಾಕ್ಷಿಗಳು, ಸ್ಥಳೀಯ ಸಾಕ್ಷಿಗಳು ದಾಖಲೆಗಳಾಗುತ್ತವೆ.
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಗೃಹ ಸಚಿವಾಲಯ ಕಾನೂನು ಸಚಿವಾಲಯ ಜೊತೆ ಸಮಾಲೋಚಿಸಿ ಕಾನೂನನ್ನು ತಯಾರಿಸುತ್ತಿದೆ.

ಯಾರಿಗೂ ಸುಖಾಸುಮ್ಮನೆ ಭಾರತದ ಪೌರತ್ವ ಸಿಗುವುದಿಲ್ಲ. ಅವರ ಅರ್ಹತೆಯನ್ನು ಸಾಬೀತುಪಡಿಸಬೇಕು. ಇಲ್ಲಿರುವ ಜನರನ್ನು ಹೊರಗೆ ಕಳುಹಿಸುವುದಿಲ್ಲ. ಜನರು ಅತಿಯಾಗಿ ಆತಂಕಗೊಂಡಿದ್ದಾರೆ. ಕಾನೂನಿನಲ್ಲಿ ಜನರಿಗೆ ಸುರಕ್ಷತೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಸಿಎಎ ಕಾಯ್ದೆಯ 14ಎ ಸೆಕ್ಷನ್ ನಡಿ ಜನರಿಗೆ ದೇಶದ ಗುರುತು ಪತ್ರ ನೀಡಲಾಗುತ್ತದೆ.

ಸಿಎಎಯನ್ನು ಜಾರಿಗೆ ತರುವುದಿಲ್ಲ ಎಂದು ಕೇರಳ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಪಟ್ಟುಹಿಡಿದಿದ್ದರೂ ಸಿಎಎ, ಎನ್ ಪಿಆರ್ ಮತ್ತು ಎನ್ ಆರ್ ಸಿಗಳನ್ನು ಜಾರಿಗೆ ತರದಿರಲು ಸಾಧ್ಯವೇ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

Comments are closed.