ರಾಷ್ಟ್ರೀಯ

ನಿರ್ಭಯಾ ದೋಷಿಗಳು ಗಲ್ಲಿಗೇರಿದ ದಿನ ವಕೀಲನಿಂದ ಆಕೆಯ ‘ಚಾರಿತ್ರ್ಯ’ ಪ್ರಶ್ನೆ!

Pinterest LinkedIn Tumblr


ಹೊಸ ದಿಲ್ಲಿ: ಇಡೀ ದೇಶವೇ ಆಕ್ರೋಶಗೊಂಡಿದ್ದ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ತಿಹಾರ್‌ ಜೈಲಿನಲ್ಲಿ ಗಲ್ಲು ಶಿಕ್ಷೆ ವಿಧಿಸಿದ ದಿನವೇ, ಅಪರಾಧಿಗಳ ಪರ ವಕೀಲ ಎ.ಪಿ. ಸಿಂಗ್ ತಮ್ಮ ಎಲುಬಿಲ್ಲದ ನಾಲಗೆಯನ್ನು ಹರಿಬಿಟ್ಟಿದ್ದಾರೆ. ನಿರ್ಭಯಾ ಪ್ರಕರಣದಲ್ಲಿ ಅಪರಾಧಿಗಳ ಗಲ್ಲು ಶಿಕ್ಷೆ ತಡೆಯಲು ನಾನಾ ತಂತ್ರಗಳನ್ನು ಅನುಸರಿಸಿ ತಲೆನೋವಾಗಿದ್ದ ಎ.ಪಿ. ಸಿಂಗ್, ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾದ ದಿನವೇ ನಿರ್ಭಯಾ ಚಾರಿತ್ರ್ಯವನ್ನು ಶಂಕಿಸಿದ್ಧಾರೆ.

ತಡರಾತ್ರಿಯಾದರೂ ನಿರ್ಭಯಾ ಮನೆಗೆ ಏಕೆ ಹೋಗಿರಲಿಲ್ಲ? ಆಕೆ ಯಾರ ಜೊತೆಗಿದ್ದಳು? ಈ ಪ್ರಶ್ನೆಯನ್ನು ನಿರ್ಭಯಾ ತಾಯಿಗೆ ಯಾರಾದ್ರೂ ಕೇಳಿದ್ದೀರಾ ಎಂದು ನಾಚಿಕೆಗೇಡಿನ ಪ್ರಶ್ನೆಯನ್ನು ಮಾಧ್ಯಮಗಳಿಗೆ ಎ.ಪಿ. ಸಿಂಗ್ ಕೇಳಿದ್ದಾರೆ. ಏಳೂವರೆ ವರ್ಷಗಳಿಂದ ನೀವು ಒಬ್ಬ ತಾಯಿಗಾಗಿ ಇಷ್ಟೆಲ್ಲಾ ಹೋರಾಟ ಮಾಡ್ತಿದ್ದೀರಿ.. ಆ ತಾಯಿಗೆ ರಾತ್ರಿ 12.30 ಆಗಿದ್ದರೂ ತನ್ನ ಮಗಳು ಎಲ್ಲಿದ್ದಾಳೆ ಎಂದೇ ಗೊತ್ತಿರಲಿಲ್ಲ. ಆ ತಾಯಿಯನ್ನು ಎಂದಾದರೂ ಪ್ರಶ್ನಿಸಿದ್ದೀರಾ ಎಂದು ಎ.ಪಿ. ಸಿಂಗ್ ಮಾಧ್ಯಮಗಳನ್ನು ಪ್ರಶ್ನಿಸಿದ್ದಾರೆ.

ರಾತ್ರಿ 12.30ರವರೆಗೆ ಯುವತಿಯೊಬ್ಬಳು ಮನೆಯಿಂದ ಹೊರಗೆ ಇದ್ದರೆ ಆಕೆಯ ಚಾರಿತ್ರ್ಯ ನಿರ್ಧಾರವಾಗುತ್ತೆ ಎಂದು ಮತ್ತೊಬ್ಬ ದನಿಗೂಡಿಸುತ್ತಾನೆ. ಆಗ ಅಲ್ಲಿದ್ದ ಮಹಿಳೆಯೊಬ್ಬರು ಎ.ಪಿ. ಸಿಂಗ್‌ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಗಾಂಧೀಜಿ ಕರೆಯನ್ನೇ ಲೇವಡಿ ಮಾಡಿದರಾ ಎ.ಪಿ. ಸಿಂಗ್..?

ಮಧ್ಯರಾತ್ರಿ 12 ಗಂಟೆಯಾದರೂ ಮಹಿಳೆಯೊಬ್ಬಳು ರಸ್ತೆಯಲ್ಲಿ ಓಡಾಡುವಂತಾದರೆ ಮಾತ್ರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಂತೆ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಈಗ ನೋಡಿದರೆ, ಮಧ್ಯರಾತ್ರಿ 12 ಗಂಟೆಗೆ ಯುವತಿ ಓಡಾಡಿದ್ದನ್ನೇ ಪ್ರಶ್ನಿಸಿ ಆಕೆಯ ಚಾರಿತ್ರ್ಯವನ್ನು ಅಳೆಯುತ್ತಿದ್ದಾರೆ ಈ ವಕೀಲ ಮಹಾಶಯರು..!

ಸಮಾಜದ ಎಲ್ಲ ರಂಗಗಳಲ್ಲಿ ಮಹಿಳೆಯರು ಪುರುಷರಿಗಿಂತಾ ಮೇಲುಗೈ ಸಾಧಿಸಿರುವ ಇಂದಿನ ದಿನಗಳಲ್ಲಿ, ಅದೂ ಕೂಡಾ ಯುವತಿಯೊಬ್ಬಳ ಬರ್ಬರ ಅತ್ಯಾಚಾರದ ಪ್ರಕರಣದಲ್ಲಿ ಅಪರಾಧಿಗಳ ಪರ ವಹಿಸಿದ್ದ ವಕೀಲರು ಈ ರೀತಿ ಮಾಧ್ಯಮಗಳ ಎದುರು ಹೇಳಿಕೆ ನೀಡ್ತಿರೋದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗ್ತಿದೆ.

ಅಪರಾಧಿಗಳ ತಂದೆ-ತಾಯಿಗಳ ನೋವು ನೋಡಿ ಎನ್ನುವ ವಕೀಲರು, ಏನೂ ತಪ್ಪು ಮಾಡದೆ ಅತ್ಯಾಚಾರಕ್ಕೀಡಾಗಿ ಜೀವಬಿಟ್ಟ ಯುವತಿಯ ಚಾರಿತ್ರ್ಯವನ್ನು ಪ್ರಶ್ನಿಸುತ್ತಿರುವುದು ಖಂಡನೀಯ.

Comments are closed.