ಮಂಗಳೂರು: ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ ಅಂಗವಾಗಿ ಕರ್ನಾಟಕ ಜೀವವೈವಿಧ್ಯ ಮಂಡಳಿ ವತಿಯಿಂದ “ಮುಖ್ಯವಾಹಿನಿಗೆ ಜೀವವೈವಿಧ್ಯತೆ; ಜನತೆಯ ಜೀವನಾಧಾರದ ಸುಸ್ಥಿರತೆ’ ಎಂಬ ಕಾರ್ಯಕ್ರಮ ಬುಧವಾರ ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ “ಟ್ರೇಡೇಬಲ್ ಬಯೋ ಡೈವರ್ಸಿಟಿ ಇನ್ ಕರ್ನಾಟಕ’ ಪುಸ್ತಕವನ್ನು ಸಚಿವರು ಬಿಡುಗಡೆಗೊಳಿಸಿದರು. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಕೃತಿ ಸಂರಕ್ಷಣೆ ಯಲ್ಲಿ ತೊಡಗಿಸುವ ಕೆಲಸ ಕರ್ನಾಟಕ ಜೀವ ವೈವಿಧ್ಯ ಮಂಡಳಿಯಿಂದ ಆಗಬೇಕಿದೆ. ರಾಜ್ಯದಲ್ಲಿ ಅರಣ್ಯ, ವನ್ಯಜೀವಿ ಸಂರಕ್ಷಣಾ ಕಾಯ್ದೆಯಿದ್ದು, ಸಮಗ್ರವಾಗಿ ಸುಸ್ಥಿರ ರೀತಿಯಲ್ಲಿ ಮಣ್ಣಿನ ರಕ್ಷಣೆ ಮಾಡಲು ಕೂಡ ಇದು ಸಹಾಯಕ. ಜೀವ ವೈವಿಧ್ಯ ರಕ್ಷಣಾ ಕಾರ್ಯ ಪಂಚಾ ಯತ್ ವ್ಯಾಪ್ತಿಯಿಂದಲೂ ನಡೆಯಬೇಕಾಗಿದ್ದು, ಇದರ ಉದ್ದೇಶ ಜನ ಸಾಮಾನ್ಯರಿಗೂ ತಲುಪಬೇಕಾಗಿದೆ ಎಂದು ಹೇಳಿದರು.
ಸಂಸದ ನಳಿನ್ ಕುಮಾರ್ ಕಟೀಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೀವವೈವಿಧ್ಯ ರಕ್ಷಣೆಯಲ್ಲಿ ಕೊಡುಗೆ ನೀಡಿದ ಡಾ| ಗುರುರಾಜ್, ಡಾ| ಪುಷ್ಪಾ ಎಚ್.ಕೆ., ಕೂಡ್ಲು ತೋಟ ರಮೇಶ್ ಅವರನ್ನು ಈ ಸಂದರ್ಭ ಪ್ರಶಸ್ತಿ ಫಲಕ ಹಾಗೂ 50,000 ರೂ. ನಗದು ನೀಡಿ ಸಮ್ಮಾನಿಸಲಾಯಿತು.
ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಆರ್.ಎಂ.ಎನ್. ಸಹಾಯ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಜೀವ ವೈವಿಧ್ಯ ಮಂಡಳಿ ಸದಸ್ಯ ಕಾರ್ಯದರ್ಶಿ ಆರ್.ಕೆ. ಸಿಂಗ್, ಮುಖ್ಯ ಅರಣ್ಯಾಧಿಕಾರಿ ಸಂಜಯ್ ಬಿಜು, ಮಂಗಳೂರು ಮೀನುಗಾರಿಕಾ ಕಾಲೇಜಿನ ಪ್ರೊ| ಶಿವಾನಂದ ಮೂರ್ತಿ, ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು ಉಪಸ್ಥಿತರಿದ್ದರು.
Comments are closed.