ಮಂಗಳೂರು, ಡಿಸೆಂಬರ್. 26: ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಬೃಹತ್ ಜಾಲವೊಂದನ್ನು ಭೇದಿಸಿರುವ ಮಂಗಳೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳ ಅಧಿಕಾರಿ ಮತ್ತು ರೌಡಿ ನಿಗ್ರಹ ದಳದ ತಂಡ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ನಿಷೇಧಿತ ಮಾದಕವಸ್ತುಗಳಾದ ಎಲ್ಎಸ್ಡಿ, ಎಂ.ಡಿ ಎಂ.ಎ ಮತ್ತು ಎಂಡಿಎಂ ಟ್ಯಾಬ್ಲೆಟ್ಗಳನ್ನು ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಜಾಲವನ್ನು ಪತ್ತೆಹಚ್ಚಿ ಇಬ್ಬರನ್ನು ಸೊತ್ತು ಸಮೇತಾ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನಗರದ ಹಂಪನಕಟ್ಟೆ ಪರಿಸರದ ಕಾರ್ಲ್ ಡಿಕುನ್ಹ ಯಾನೆ ಆಸ್ಟಿನ್(29), ಕುಲಶೇಖರ ಸಿಲ್ವರ್ಗೇಟ್ ನಿವಾಸಿ ಅನೂಪ್ ಡಿ ಅಲ್ಮೇಡಾ (26) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಎಂ ಡಿ ಎಂ ಪೀಲ್ಸ್ -93, ಹುಂಡೈ ಇಯಾನ್ ಕಾರು-1, ಮೊಬೈಲ್ ಪೋನ್-3 ಹಾಗೂ 30,850 ನಗದು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಳ್ಳಲಾದ ಸೊತ್ತುಗಳ ಮೌಲ್ಯ 2,36,000ರೂ. ಎಂದು ಅಂದಾಜಿಸಲಾಗಿದೆ.
ಮಂಗಳೂರು ದಕ್ಷಿಣ ಉಪವಿಭಾಗದ ರೌಡಿ ನಿಗ್ರಹ ದಳದ ಸಹಾಯಕ ಪೊಲಿಸ್ ಆಯುಕ್ತರಿಗೆ ಮಂಗಳೂರು ನಗರದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಮಾಹಿತಿಯಂತೆ ಈ ಮೊದಲು ನಿಖಿಲ್ ಕೆ.ಬಿ., ಶ್ರವಣ ಪೂಜಾರಿ, ರೋಶನ್ ವೇಗಸ್, ಬಾಶೀಂ ಬಶೀರ್ ಎಂಬವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪ್ರಕರಣದಲ್ಲಿ ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಕಾರ್ಲ್ ಎಂಬಾತನ ಮೇಲೆ 2014 ಮತ್ತು 2015ರಲ್ಲಿ ಎನ್.ಸಿ.ಬಿ. ಬೆಂಗಳೂರು ಇಲ್ಲಿ ಪ್ರಕರಣಗಳು ದಾಖಲಾಗಿವೆ.
ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಅವರ ನಿರ್ದೇಶನದಂತೆ ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ರೌಡಿ ನಿಗ್ರಹ ದಳದ ಎ ಸಿ ಪಿ ಶ್ರೀ ರಾಮರಾವ್ ಅವರು ಉಳ್ಳಾಲ ಠಾಣಾ ಪಿಎಸ್ಐ ಗುರಪ್ಪ ಕಾಂತಿ ಮತ್ತು ಸಿಬ್ಬಂದಿಯವರಾದ ಎಎಸ್ಐ ಸುಂದರ ಅಚಾರ್, ಎಚ್ಸಿಗಳಾದ ಮೋಹನ್ ಕೆ.ವಿ., ಗಿರೀಶ್ ಬೆಂಗ್ರೆ, ರವಿನಾಥ್, ಮುಲ್ಕಿ, ಸುನೀಲ್ ಕುಮಾರ್, ರೆಜಿ ವಿ.ಎಂ, ರವಿಚಂದ್ರ ಪಡ್ರೆ , ದಾಮೋದರ, ರಾಜರಾಮ ಕೆ., ಮುಹಮ್ಮದ್ ಶರೀಫ್, ದಯಾನಂದ, ಸುಧೀರ್ ಶೆಟ್ಟಿ, ಮಹೇಶ್ ಪಾಟಾಳಿ ಮತ್ತು ಮುಹಮ್ಮದ್ ಇಕ್ಬಾಲ್ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.
Comments are closed.