ಕರಾವಳಿ

ಕೃಷ್ಣ ಮಠದಲ್ಲಿ ಜೀವ ಬೆದರಿಕೆ ಇದ್ದ ಕಾರಣ ಪ್ರಧಾನಿ ಮೋದಿ ಭೇಟಿ ನೀಡಿಲ್ಲ: ಸಂಸದೆ ಶೋಭಾ ಕರಂದ್ಲಾಜೆ

Pinterest LinkedIn Tumblr

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೀವ ಬೆದರಿಕೆ ಇದ್ದ ಕಾರಣ ಅವರು ಕೃಷ್ಣಮಠಕ್ಕೆ ಭೇಟಿ ನೀಡಲಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕೃಷ್ಣಮಠದಲ್ಲಿ ಪ್ರಧಾನಿ ಅವರಿಗೆ ಜೀವ ಬೆದರಿಕೆ ಇರುವ ಕಾರಣ ಅಲ್ಲಿಗೆ ಹೋಗುವುದು ಸೂಕ್ತವಲ್ಲ ಎಂದು ಎಸ್‌ಪಿಜಿ ಸಿಬ್ಬಂದಿ ಎಚ್ಚರಿಕೆ ನೀಡಿದ್ದರು. ಪ್ರಧಾನಿಯಾಗಿ ಭದ್ರತಾ ಸುರಕ್ಷತೆಗಳನ್ನು ಪಾಲಿಸಬೇಕಾಗಿರುವುದರಿಂದ ಅವರು ಮಠಕ್ಕೆ ಭೇಟಿ ನೀಡಲಿಲ್ಲ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಮಠಕ್ಕೆ ಭೇಟಿ ನೀಡಲು ಸಾಧ್ಯವಾಗದೆ ಇರುವುದರ ಬಗ್ಗೆ ಮೋದಿ ಅವರಲ್ಲಿ ಬೇಸರವಿದೆ. ಅಲ್ಲಿನ ಮಠಾಧೀಶರುಗಳು ಆತ್ಮೀಯರು. ಈ ಹಿಂದೆ ಹಲವು ಸಲ ಭೇಟಿ ನೀಡಿದ್ದೇನೆ. ಆದರೆ, ಭದ್ರತಾ ಕಾರಣದಿಂದ ಹೋಗುವಂತಿಲ್ಲ ಎಂದು ಮೋದಿ ಹೇಳಿರುವುದಾಗಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಚುನಾವಣಾ ಪ್ರಚಾರಕ್ಕೆಂದು ಮಂಗಳವಾರ ಉಡುಪಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕೃಷ್ಣಮಠಕ್ಕೆ ಭೇಟಿ ನೀಡಿರಲಿಲ್ಲ. ಅವರ ವೇಳಾಪಟ್ಟಿಯಲ್ಲಿಯೂ ಉಡುಪಿ ಮಠದ ಭೇಟಿ ಇರಲಿಲ್ಲ.

ಮಠದಲ್ಲಿ ಎರಡು ದಿನಗಳಿಂದ ತಪಾಸಣೆ ನಡೆಸಿದ್ದಲ್ಲದೆ, ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಹೀಗಾಗಿ ಅವರು ಪ್ರಚಾರ ಭಾಷಣ ಮುಗಿಸಿ ಅಲ್ಲಿಗೆ ಭೇಟಿ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು.

Comments are closed.