ಕರಾವಳಿ

ಶಾಲೆಗಳಲ್ಲಿ ತರಕಾರಿ ಬೆಳೆಯುವ ಪರಿಪಾಠ ಆರಂಭ :ನರೇಗಾ ಯೋಜನೆಯಡಿ ಕಡ್ಡಾಯ ಅಕ್ಷರ ಕೈತೋಟಕ್ಕೆ ಚಾಲನೆ

Pinterest LinkedIn Tumblr

ಮಂಗಳೂರು, ಜುಲೈ.5 : ಜಿಲ್ಲೆಯಲ್ಲಿ 1423 ಪ್ರಾಥಮಿಕ ಶಾಲೆಗಳಿದ್ದು, ಇದರಲ್ಲಿ 942 ಗ್ರಾ.ಪಂ. ವ್ಯಾಪ್ತಿಯ ಶಾಲೆಗಳು ನೇರವಾಗಿ ನರೇಗಾ ಯೋಜನೆಗೊಳಪಡಲಿವೆ. ಆಯಾ ಗ್ರಾ.ಪಂ.ಗಳ ನೇತೃತ್ವ ಹಾಗೂ ತೋಟಗಾರಿಕಾ ಇಲಾಖೆಯ ತಾಂತ್ರಿಕ ಒಗ್ಗೂಡುವಿಕೆ ಯೊಂದಿಗೆ ಈ ಅಕ್ಷರ ಕೈತೋಟ ನಿರ್ಮಾಣವಾಗಲಿದೆ.

ಉದ್ಯೋಗ ಚೀಟಿ ಹೊಂದಿರುವವರನ್ನು ಈ ಅಕ್ಷರ ಕೈತೋಟಗಳ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ 730 ಶಾಲೆಗಳಲ್ಲಿ ತಲಾ 1 ಎಕರೆಯಂತೆ ಭೂಮಿ ಲಭ್ಯವಿದೆ. ಪ್ರಸಕ್ತ ಸಾಲಿನಲ್ಲಿ 107 ಎಕರೆಯನ್ನು ಈ ಕೈತೋಟ ನಿರ್ಮಾಣಕ್ಕಾಗಿ ಮೀಸಲಿಡಲಾಗುವುದು. ಅದಕ್ಕಾಗಿ 5 ಕೋಟಿ ರೂ. ನರೇಗಾದಡಿ ಹಣ ವಿನಿಯೋಗಿಸಲು ಚಿಂತಿಸಲಾಗಿದೆ. ಇದರಿಂದ 1 ಲಕ್ಷ 40,000 ಮಾನವ ದಿನಗಳ ಮೂಲಕ 3800 ಕುಟುಂಬಗಳಿಗೆ ಉದ್ಯೋಗ ಒದಗಿಸಬಹುದು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ ಹೇಳಿದ್ದಾರೆ.

ಕೇಂದ್ರ ಸರಕಾರದ ನರೇಗಾ ಯೋಜನೆಯಡಿ ದ.ಕ. ಜಿಲ್ಲೆಯ ಎಲ್ಲಾ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಕಡ್ಡಾಯ ಅಕ್ಷರ ಕೈತೋಟಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನಲ್ಲಿ ಬುಧವಾರ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಡಾ.ಎಂ.ಆರ್. ರವಿ ಅವರು, ಈಗಾಗಲೇ ಜಿಲ್ಲಾ ಪಂಚಾಯತ್ ವ್ಯಾಪ್ತಿಯ 407 ಶಾಲೆಗಳಲ್ಲಿ ಸ್ಥಳೀಯರು, ಶಾಲಾ ಶಿಕ್ಷಕರು ಹಾಗೂ ಎಸ್‌ಡಿಎಂಸಿಯ ಸಹಭಾಗಿತ್ವದಲ್ಲಿ ತರಕಾರಿ ಬೆಳೆಯುವ ಪರಿಪಾಠ ಆರಂಭಗೊಂಡಿದೆ. ಇದೀಗ ಪ್ರಸಕ್ತ ಸಾಲಿನಿಂದ ನರೇಗಾದ ಸಂಯೋಜನೆಯೊಂದಿಗೆ ಶಾಲೆಗಳಲ್ಲಿ ಅಕ್ಷರ ಕೈತೋಟ ನಿರ್ಮಾಣವಾಗಲಿದೆ ಎಂದರು.

ಶಾಲೆಗಳಲ್ಲಿ ನೆಡಲಾಗುವ ಗಿಡಗಳಿಗೆ ಮಕ್ಕಳ ಹೆಸರನ್ನು ಇಡುವ ಮೂಲಕ ಅವರಲ್ಲಿ ಪರಿಸರ ಪ್ರೇಮವನ್ನು ಬೆಳೆಸಲು ಕೂಡಾ ಈ ಯೋಜನೆ ಪೂರಕವಾಗಲಿದೆ. ನರೇಗಾ ಯೋಜನೆಯಡಿ ಸದ್ಯ ನುಗ್ಗೆಕಾಯಿ, ನಿಬೆ, ನೆಲ್ಲಿಕಾಯಿ, ಬಾಳೆ, ಪಪ್ಪಾಯಿ, ಮಾವು, ಸಪೋಟಾ ಬೆಳೆಯಲು ಅವಕಾಶವಿದೆ. ತರಕಾರಿ, ಸೊಪ್ಪುಗಳನ್ನು ಕೂಡಾ ಇದರ ಜತೆಯಾಗಿ ಬೆಳೆಸುವ ಕೆಲಸ ಮಾಡಲಾಗುವುದು. ನಗರ ಪ್ರದೇಶದಲ್ಲಿ 146 ಶಾಲೆಗಳಲ್ಲಿ ಜಾಗದ ಕೊರತೆ ಇದೆ. ಅಂತಹ ಶಾಲೆಗಳಲ್ಲಿ ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಪಾಲಿಥಿನ್ ಬ್ಯಾಗ್‌ಗಳಲ್ಲಿ ಕನಿಷ್ಠ 10 ಗಿಡಗಳನ್ನು ನೆಡಲು ತೀರ್ಮಾನಿಸಲಾಗಿದೆ ಎಂದು ಡಾ.ಎಂ.ಆರ್. ರವಿ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿಸಮಿತಿ ಅಧ್ಯಕ್ಷರಾದ ಜನಾರ್ಧನ ಗೌಡ, ಅನಿತಾ ಹೇಮನಾಥ ಶೆಟ್ಟಿ ಹಾಗೂ ಮತ್ತಿತ್ತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Comments are closed.