ಕರಾವಳಿ

ಮಂಗಳೂರು : 190 .55 ಕೋಟಿ ರೂ. ಲಾಭಗಳಿಸಿರುವ ಎನ್‌ಎಮ್‌ಪಿಟಿ ಸಂಸ್ಥೆ ಸ್ವಚ್ಛತೆಯಲ್ಲೂ ದೇಶದಲ್ಲೇ ಪ್ರಥಮ

Pinterest LinkedIn Tumblr

ಮಂಗಳೂರು : ನವಮಂಗಳೂರು ಬಂದರು (NMPT) 2017-18ನೇ ಸಾಲಿನಲ್ಲಿ ಒಟ್ಟು 190 .55 ಕೋಟಿ ರೂ. ನಿವ್ವಳ ಲಾಭಗಳಿಸಿದೆ ಎಂದು ನವಮಂಗಳೂರು ಬಂದರು ಮಂಡಳಿ ಅಧ್ಯಕ್ಷ ಎಂ.ಟಿ. ಕೃಷ್ಣ ಬಾಬು ತಿಳಿಸಿದ್ದಾರೆ.

ಮಂಗಳವಾರ ಸಂಸ್ಥೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನವಮಂಗಳೂರು ಬಂದರು ಮಂಡಳಿಯು 2017-18ನೇ ಸಾಲಿನಲ್ಲಿ 504.76 ಕೋಟಿ ರೂ. ನಿರ್ವಹಣ ಲಾಭಗಳಿಸಿದ್ದು, 124 .81 ಕೋಟಿ ರೂ ತೆರಿಗೆ ಪಾವತಿಸಿ, 190 .55 ಕೋಟಿ ರೂ. ಲಾಭವಾಗಿದೆ .ನವ ಮಂಗಳೂರು ಬಂದರು ಮಂಡಳಿಯಿಂದ 2017-18ನೇ ಸಾಲಿನಲ್ಲಿ 42.06 ಮಿಲಿಯನ್ ಮೆಟ್ರಿಕ್ ಟನ್ ಸರಕು ನಿರ್ವಹಣೆ ಮಾಡಲಾಗಿದ್ದು, 2016-17ನೇ ಸಾಲಿಗಿಂತ 5.28 ಶೇಕಡಾ ಹೆಚ್ಚುವರಿ ಸರಕು ನಿರ್ವಹಣೆ ಮಾಡುವ ಮೂಲಕ ಪ್ರಗತಿ ಸಾಧಿಸಿದೆ. ಪ್ರಸಕ್ತ ಸಾಲಿನಲ್ಲಿ ಜೂನ್ ಕೊನೆಯವರೆಗೆ ಒಟ್ಟು 13.5.ಮೆಟ್ರಿಕ್ ಟನ್ ಸರಕು ನಿರ್ವಹಣೆ ಮಾಡಲಾಗಿದ್ದು,ಶೇ.7.63ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ತಿಳಿಸಿದರು.

ನವ ಮಂಗಳೂರು ಬಂದರು ಮಂಡಳಿಯಿಂದ 2017-18ನೆ ಸಾಲಿನಲ್ಲಿ 23.719 ಲಕ್ಷ ಟನ್ ಕಬ್ಬಿಣದ ಉಂಡೆಗಳನ್ನು, 23.999 ಲಕ್ಷ ಟನ್ ಸಂಸ್ಕರಿಸಿದ ಕಬ್ಬಿಣದ ಅದಿರು, 41.717 ಲಕ್ಷ ಟನ್ ಇದ್ದಿಲು ಸರಕುಗಳನ್ನು, ಕಂಟೈನರ್ ಮೂಲಕ 17.434 ಲಕ್ಷ ಟನ್ 22.09 ಲಕ್ಷ ಟನ್ ಎಲ್‌ಪಿಜಿ ನಿರ್ವಹಣೆ ಮಾಡಲಾಗಿದೆ.

ಉಡುಪಿ ಪವರ್ ಪ್ಲಾಂಟ್ ಮೂಲಕ ಮಾಡಲಾಗುತ್ತಿದ್ದ ಕಲ್ಲಿದ್ದಲು, ಎಂಆರ್‌ಪಿಎಲ್ ಗೆ ಸರಬರಾಜಾಗುತ್ತಿದ್ದ ಕಚ್ಚಾ ತೈಲ ಪೂರೈಕೆಯಲ್ಲಿ 2016-17ನೇ ಸಾಲಿಗೆ ಹೋಲಿಸಿದಾಗ 2017-18ನೇ ಸಾಲಿನಲ್ಲಿ ಇಳಿಕೆಯಾಗಿದೆ. ಸಮಗ್ರವಾಗಿ ಸರಕು ಸಾಗಾಟದಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದು ಎಂ.ಟಿ.ಕೃಷ್ಣ ಬಾಬು ಹೇಳಿದರು.

2017-18ನೇ ಸಾಲಿನಲ್ಲಿ 22 ಹಡುಗುಗಳ ಮೂಲಕ 24,258 ಪ್ರಯಾಣಿಕರು ಭೇಟಿ ನೀಡಿದ್ದಾರೆ. 2016-17ನೇ ಸಾಲಿನಲ್ಲಿ 28 ಹಡಗುಗಳ ಮೂಲಕ 30,246 ಪ್ರಯಾಣಿಕರು ಭೇಟಿ ನೀಡಿದ್ದರು. ಈ ವರ್ಷಕ್ಕೆ ಹೋಲಿಸಿದಾಗ ಹಿಂದಿನ ವರ್ಷ ಹೆಚ್ಚು ಹಡಗುಗಳು ಮತ್ತು ಪ್ರಯಾಣಿಕರು ಭೇಟಿ ನೀಡಿದ್ದರು ಎಂದು ಎಂ.ಟಿ.ಕೃಷ್ಣ ಬಾಬು ತಿಳಿಸಿದ್ದಾರೆ.

ಸ್ವಚ್ಛತೆಯಲ್ಲಿ… 13 ಪ್ರಮುಖ ಬಂದರುಗಳಲ್ಲಿ ಪ್ರಥಮ ಸ್ಥಾನ :

ನವಮಂಗಳೂರು ಬಂದರು ಮಂಡಳಿಗೆ ಸ್ವಚ್ಛ ಭಾರತದ ಅಭಿಯಾನದಡಿ ದೇಶದ 13 ಪ್ರಮುಖ ಬಂದರುಗಳಲ್ಲಿ ಪ್ರಥಮ ಸ್ಥಾನ ದೊರೆತಿದೆ. ಬಂದರು ಮಂಡಳಿಯ ವ್ಯಾಪ್ತಿಯಲ್ಲಿ ಅಳವಡಿಸಲಾದ ಸೋಲಾರ್ ವಿದ್ಯುತ್ ಉತ್ಪಾದನೆಯ ಯೋಜನೆಯಿಂದ 840 ಕಿ.ವ್ಯಾ ವಿದ್ಯುತ್ ಉತ್ಫಾದನೆಯಾಗುತ್ತಿದ್ದು, ಇದರೊಂದಿಗೆ ಮಂಡಳಿಯ ವಿದ್ಯುತ್ ಬೇಡಿಕೆಯ ಶೇ. 95 ಭಾಗ ಸೋಲಾರ್ ವಿದ್ಯುತ್‌ನಿಂದ ಪೂರೈಕೆಯಾಗುತ್ತಿದೆ. ಸ್ವಚ್ಛ ಭಾರತ ಅಭಿಯಾನದ ಯೋಜನೆಯಡಿ ಈ ಯೋಜನೆಯನ್ನು ಪರಿಗಣಿಸಲಾಗಿದೆ ಎಂದು ಕೃಷ್ಣ ಬಾಬು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಮರಳುಗಾರಿಕೆಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ವಿದೇಶದಿಂದ ಮರಳು ಆಮದು ಮಾಡಲು ಕೈಗೊಂಡ ತೀರ್ಮಾನದಂತೆ ನವ ಮಂಗಳೂರು ಬಂದರಿನ ಮೂಲಕ ಮಲೇಶ್ಯಾದಿಂದ 2017-18ನೆ ಸಾಲಿನಲ್ಲಿ 1 ಲಕ್ಷ 50 ಸಾವಿರ ಟನ್ ಮರಳು ಆಮದು ಮಾಡಿಕೊಳ್ಳಲಾಗಿದೆ. ನವ ಮಂಗಳೂರು ಬಂದರು ಮಂಡಳಿಗೆ ಒಳಗೆ ಸಮರ್ಪಕವಾಗಿ ಸರಕು ಸಾಗಾಟದ ಹಿನ್ನೆಲೆಯಲ್ಲಿ ಉತ್ತಮ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ರಸ್ತೆ, ರೈಲು ಮಾರ್ಗದ ಸಂಪರ್ಕ ವ್ಯವಸ್ಥೆಯನ್ನು ಉತ್ತಮ ಪಡಿಸುವ ಬಗ್ಗೆ ಯೋಜನೆ ಸಿದ್ಧವಾಗಿದೆ. ಎರಡು ಯಾಂತ್ರೀಕೃತ ಭರ್ತ್ ನಿರ್ಮಾಣ ಯೋಜನೆ 2019ರಲ್ಲಿ ಪೂರ್ಣಗೊಳ್ಳಲಿದೆ. ಹಾಲಿ ಭರ್ತ್ ಸಂಖ್ಯೆ 16 ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಯೋಜನೆ ಪ್ರಗತಿಯಲ್ಲಿದೆ ಎಂದು ಎಂ.ಟಿ.ಕೃಷ್ಣ ಬಾಬು ಅವರು ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರ ನೀಡಿದರು.

Comments are closed.