ಕರ್ನಾಟಕ

ಲಾರಿ ಡಿಕ್ಕಿ ಮ್ಯಾಕ್ಯಾನಿಕ್ ಸಾವು

Pinterest LinkedIn Tumblr

26j1clrಬೆಂಗಳೂರು,ಮೇ.೨೬-ಯಶವಂತಪುರದ ಆರ್‌ಎನ್‌ಎಸ್ ಮೋಟಾರ್‍ಸ್ ಬಳಿ ನಿನ್ನೆ ರಾತ್ರಿ ಗೂಡ್ಸ್ ಲಾರಿ ಡಿಕ್ಕಿ ಹೊಡೆದು ಬೈಕ್‌ನಲ್ಲಿ ಹೋಗುತ್ತಿದ್ದ ಮ್ಯಾಕ್ಯಾನಿಕ್ ವಿನೋದ್‌ಕುಮಾರ್(೨೩)ಮೃತಪಟ್ಟರೆ ಹಿಂಬದಿ ಸವಾರ ಸತೀಶ್(೨೪)ಗಾಯಗೊಂಡಿದ್ದಾರೆ.
ರಾಜಾಜಿನಗರದ ವಿನೋದ್‌ಕುಮಾರ್ ಸ್ನೇಹಿತ ಸತೀಶ್ ಜೊತೆ ಗೊರಗುಂಟೆಪಾಳ್ಯದ ಸ್ನೇಹಿತನ ಮನೆಗೆ ರಾತ್ರಿ ಹೋಗಿ ಊಟ ಮುಗಿಸಿಕೊಂಡು ರಾತ್ರಿ ೧೦.೩೦ರ ವೇಳೆ ಮನೆಗೆ ಹೀರೋಹೊಂಡಾ ಬೈಕ್‌ನಲ್ಲಿ ಹಿಮತಿರುಗುತ್ತಿದ್ದರು.
ಮಾರ್ಗಮಧ್ಯೆ ಆರ್‌ಎನ್‌ಎಸ್ ಬಳಿ ಯು ತಿರುವು ತೆಗೆದುಕೊಳ್ಳುತ್ತಿದ್ದ ಗೂಡ್ಸ್ ಲಾರಿ ಡಿಕ್ಕಿ ಹೊಡೆದು ಬೈಕ್ ಚಲಾಯಿಸುತ್ತಿದ್ದ ವಿನೋದ್‌ಕುಮಾರ್ ಅವರ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದಾರೆ ಕೂಡಲೇ ಅವರನ್ನು ಸ್ಪರ್ಶ್ ನಂತರ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮುಂಜಾನೆ ಮೃತಪಟ್ಟಿದ್ದಾರೆ.
ಹಿಂಬದಿ ಸವಾರ ಸತೀಶ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ,ರಾಜಾಜಿನಗರದಲ್ಲಿ ವಿನೋದ್‌ಕುಮಾರ್ ದ್ವಿಚಕ್ರವಾಹನಗಳ ಗ್ಯಾರೇಜ್ ನಡೆಸುತ್ತಿದ್ದರು.ಪ್ರಕರಣ ದಾಖಲಿಸಿರುವ ಯಶವಂತಪುರ ಸಂಚಾರ ಪೊಲೀಸ್ ಇನ್ಸ್‌ಪೆಕ್ಟರ್ ಸ್ವಾಮಿನಾಥ್ ಅವರು ಪ್ರಕರಣ ದಾಖಲಿಸಿ ಲಾರಿ ಚಾಲಕನಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಲಾರಿ ಹರಿದು ಪೆಟ್ರೋಲ್ ಬಂಕ್ ನೌಕರ ಸಾವು
ಬೆಂಗಳೂರು,ಮೇ.೨೬-ವೇಗವಾಗಿ ಬಂದ ಲಾರಿ ಹರಿದು ಪೆಟ್ರೋಲ್ ಬಂಕ್ ನೌಕರರೊಬ್ಬರು ಮೃತಪಟ್ಟಿರುವ ದುರ್ಘಟನೆ ಜಾಲಹಳ್ಳಿಯ ಕುವೆಂಪು ವೃತ್ತದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಕಲ್ಯಾಣನಗರದ ಮಲ್ಲಿಕಾರ್ಜುನ(೨೯)ಮೃತಪಟ್ಟವರು ತಿಂಡ್ಲು ಬಳಿಯ ಪೆಟ್ರೋಲ್‌ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಅವರು ರಾತ್ರಿ ೯ರ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಬೈಕ್‌ನಲ್ಲಿ ಹೋಗುತ್ತಿದ್ದರು.
ಮಾರ್ಗ ಮಧ್ಯೆ ಕುವೆಂಪು ವೃತ್ತದ ಕೆಳಸೇತುವೆ ರಸ್ತೆಯಲ್ಲಿ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಅವರ ಮೇಲೆಯೇ ಲಾರಿಯ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಚಿಕ್ಕಬಳ್ಳಾಪುರ ಮೂಲದ ಮಲ್ಲಿಕಾರ್ಜುನ ಅವರು ಕೆಲ ವರ್ಷಗಳಿಂದ ಪೆಟ್ರೋಲ್‌ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಕಲ್ಯಾಣನಗರದಲ್ಲಿ ವಾಸಿಸುತ್ತಿದ್ದರು ಪ್ರಕರಣ ದಾಖಲಿಸಿರುವ ಜಾಲಹಳ್ಳಿ ಸಂಚಾರ ಪೊಲೀಸರು ಲಾರಿಯನ್ನು ವಶಕ್ಕೆ ತೆಗೆದುಕೊಂಡು ಪರಾರಿಯಾಗಿರುವ ಚಾಲಕನಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಬಾಲಕಿಯ ಮುಂದೆ ಅಸಭ್ಯ ವರ್ತನೆ
ಬೆಂಗಳೂರು,ಮೇ.೨೬-ಸ್ನೇಹಿತೆಯ ಜೊತೆ ಶಾಪಿಂಗ್‌ಗೆ ನಡೆದುಕೊಂಡು ಹೋಗುತ್ತಿದ್ದ ಅಪ್ರಾಪ್ತ ಬಾಲಕಿಯೊಬ್ಬಳಿಗೆ ವಿಕೃತ ಕಾಮಿಯೊಬ್ಬ ತನ್ನ ಗುಪ್ತಾಂಗ ತೋರಿಸಿ ವಿಚಿತ್ರವಾಗಿ ವರ್ತಿಸಿದ ಹೀನ ಕೃತ್ಯ ಕೋರಮಂಗಲದಲ್ಲಿ ನಿನ್ನೆ ನಡೆದಿದೆ.
ಕೋರಮಂಗಲದ ಬಳಿ ತನ್ನ ಸ್ನೇಹಿತೆಯ ಜೊತೆ ಶಾಪಿಂಗ್‌ಗೆ ಬಾಲಕಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಪ್ಯಾಂಟ್ ಹಾಕದೆ ಕೇವಲ ಟೀ ಶರ್ಟ್ ಕುಳಿತಿದ್ದ ವ್ಯಕ್ತಿಯೋರ್ವ ತನ್ನ ಗುಪ್ತಾಂಗ ತೋರಿಸಿ ಅಸಹ್ಯವಾಗಿ ವರ್ತಿಸಿ ಬಾಲಕಿಯರ ಪಕ್ಕ ಕಾರು ನಿಲ್ಲಿಸಿ ಕೆಟ್ಟದಾಗಿ ಕರೆದಿದ್ದಾನೆ
ವ್ಯಕ್ತಿಯ ಅಸಭ್ಯ ವರ್ತನೆಯಿಂದ ನೊಂದ ಬಾಲಕಿ ತನ್ನ ತಂದೆಯಿಂದ ಕೋರಮಂಗಲ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ. ಬಾಲಕಿ ತಂದೆ ನಗರದ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯರಾಗಿದ್ದಾರೆ. ಕೃತ್ಯವೆಸಗಿರುವ ಕಾಮುಕನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕಾಮುಕನ ಕಾರ್ ನಂಬರ್ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಅರೋಪಿಯ ವಿರುದ್ಧ ಐಪಿಸಿ ಸೆಕ್ಷನ್ ೩೫೪,೫೦೯ ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಂ ಕೊಲೆಗಾರರ ಸೆರೆ
ಬೆಂಗಳೂರು,ಮೇ.೨೬-ಹಣಕಾಸಿನ ವಿಚಾರದಲ್ಲಿ ಉಂಟಾದ ಜಗಳದಲ್ಲಿ ಅಕ್ರಂಖಾನ್‌ನನ್ನು ಕೊಲೆಗೈದಮೂವರು ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಬನಶಂಕರಿ ಪೊಲಿಸರು ಯಶಸ್ವಿಯಾಗಿದ್ದಾರೆ. ಕಾವೇರಿ ನಗರದ ಇಮ್ರಾನ್ ಅಲಿಯಾಸ್ ಇಮ್ಮು(೨೬) ವಸೀಂ ಅಲಿಯಾಸ್ ಕುರ್ಪಾ(೩೮) ಮುಬಾರಕ್(೨೬)ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರು ಕಳೆದ ಮೇ.೨೨ರಂದು ರಾತ್ರಿ ೧೦.೩೦ರ ವೇಳೆ ಕಾವೇರಿ ನಗರದ ಆನಂದ್ ಟಿಂಬರ್ ರಸ್ತೆಯ ಕೊಳಗೇರಿಯ ಮನೆಯಲ್ಲಿ ಮಲಗಿದ್ದ ಅಕ್ರಂಖಾನ್
ನನ್ನು ಹೊರಗೆ ಕರೆದು ಡ್ರಾಗರ್ ನಿಂದ ಎಡ ಎದೆಗೆ ಬಲವಾಗಿ ತಿವಿದು ಕೊಲೆ ಮಾಡಿ ಪರಾರಿ ಯಾಗಿದ್ದರು.
ಕೊಲೆಯಾದ ಅಕ್ರಂ ಖಾನ್ ಆರೋಪಿ ಇಮ್ರಾನ್ ಅಲಿಯಾಸ್ ಇಮ್ಮುವಿನ ಬಳಿ ಸಾಲಕ್ಕೆ ಹಣ ಪಡೆದುಕೊಂಡಿದ್ದು ಅದನ್ನು ಹಿಂತಿರುಗಿಸದೇ ಜಗಳ ಮಾಡಿದ್ದರಿಂದ ಆಕ್ರೋಶಗೊಂಡ ಇಮ್ರಾನ್ ಇನ್ನಿಬ್ಬರು ಆರೋಪಿಗಳ ಜೊತೆ ಸೇರಿ ಕೊಲೆ ಮಾಡಿ ಪರಾರಿಯಾಗಿದ್ದನು.
ಪ್ರಕರಣ ದಾಖಲಿಸಿಕೊಂಡ ಬನಶಂಕರಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಡಿಸಿಪಿ ಡಾ.ಶರಣಪ್ಪ ಅವರು ತಿಳಿಸಿದ್ದಾರೆ.

Comments are closed.