ಕರ್ನಾಟಕ

ಮಟನ್‌ ಸಾಂಬಾರ್‌ ಮಾಡುವಂತೆ ಪೀಡಿಸಿದ್ದ ಪತಿಯನ್ನೇ ಕೊಂದ ಪತ್ನಿ

Pinterest LinkedIn Tumblr


ಬೆಂಗಳೂರು: ಮಟನ್ ಸಾಂಬಾರ್ ಮಾಡುವಂತೆ ಪೀಡಿಸುತ್ತಿದ್ದ ಪತಿಯನ್ನು ಪತ್ನಿಯೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಪ್ರಗತಿಪುರದಲ್ಲಿ ನಡೆದಿದೆ.

ಗೋಪಾಲ್ (45) ಮೃತ. ಹಣ್ಣಿನ ವ್ಯಾಪಾರ ಮಾಡುತ್ತಿದ್ದ ರುದ್ರಮ್ಮ ಎಂಬಾಕೆ ಮಟನ್‌ ಸಾಂಬಾರ್‌ ಮಾಡಿಲ್ಲ ಏಕೆ ಎಂದು ಗಲಾಟೆ ತೆಗೆದ ಪತಿಯನ್ನು ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಪತಿಯ ಕೊಲೆ ಮಾಡಿದ್ದಾಳೆ. ಕಳೆದ ವಾರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕುಡಿತದ ಚಟ ಹೊಂದಿದ್ದ ಗೋಪಾಲ, ಪದೇ ಪದೆ ಹೆಂಡತಿ ಜತೆ ಜಗಳ ಮಾಡುತ್ತಿದ್ದ. ಘಟನೆ ನಡೆದ ದಿನವೂ ಕಂಠಪೂರ್ತಿ ಕುಡಿದು ಬಂದು ಮಟನ್‌ ಸಾಂಬಾರ್‌ ಯಾಕೆ ಮಾಡಿಲ್ಲ ಎಂದು ಗಲಾಟೆ ಮಾಡಿದ್ದಾನೆ. ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ ರೊಚ್ಚಿಗೆದ್ದ ಪತ್ನಿ ರುದ್ರಮ್ಮ ಪತಿಯನ್ನು ಹತ್ಯೆ ಮಾಡಿದ್ದಾಳೆ.

ಕೊಲೆ ಮಾಡಿ ಮನೆಯಿಂದ ಬೇರೆಡೆ ಹೋಗಿ ತನ್ನ ತಮ್ಮನಿಗೆ ಕರೆ ಮಾಡಿ, ನಿನ್ನ ಭಾವ ಮನೆಯಲ್ಲಿ ಸತ್ತಿದ್ದಾನೆ ನೋಡಿಕೊಂಡು ಬಾ ಎಂದು ಹೇಳಿದ್ದಾಳೆ. ನಂತರ ರುದ್ರಮ್ಮನ ಸಹೋದರ ಹೋಗಿ‌ ನೋಡಿದಾಗ ಗೋಪಾಲ ಹಾಸಿಗೆ ಮೇಲೆ ಶವವಾಗಿದ್ದ. ಬಳಿಕ ರುದ್ರಮ್ಮಳನ್ನು ಕರೆಸಿ ವಿಚಾರಿಸಿದಾಗ, ಕುಡಿದು ವಾಂತಿ ಮಾಡಿಕೊಂಡು ಸತ್ತಿರುವುದಾಗಿ ಹೇಳಿದ್ದಾಳೆ.

ತನಿಖೆ ಕೈಗೊಂಡ ಪೊಲೀಸರು ಶವ ಪರಿಶೀಲನೆ ನಡೆಸಿದಾಗ ಮೃತ ಗೋಪಾಲ್ ಕುತ್ತಿಗೆ ಭಾಗದಲ್ಲಿ ಗಾಯದ ಗುರುತು ಪತ್ತೆಯಾಗಿತ್ತು. ಅನುಮಾನಗೊಂಡು ಕುಟುಂಬ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದಾಗ ವಿಚಾರಣೆ ವೇಳೆ ರುದ್ರಮ್ಮ ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ನಿ ರುದ್ರಮ್ಮನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಮೊದಲು ಜಯನಗರದಲ್ಲಿ ನೆಲೆಸಿದ್ದ ದಂಪತಿ ವರ್ಷದ ಹಿಂದೆ ಪ್ರಗತಿಪುರದಲ್ಲಿ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ಮೊದಲ ಮಹಡಿಯಲ್ಲಿ ರುದ್ರಮ್ಮ ಪೋಷಕರು ನೆಲೆಸಿದ್ದರು. ಎರಡನೇ ಮಹಡಿಯಲ್ಲಿ ರುದ್ರಮ್ಮ ದಂಪತಿ ವಾಸವಾಗಿದ್ದರು.

ಈ ಕುರಿತು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.