ಶಿರಸಿ: ಶಾಸಕ, ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಸಿದ್ದಾಪುರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪ್ರಚಾರ ನಡೆಸಿದ ನಟ ಯಶ್ ಕಾಗೇರಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಈ ವೇಳೆ ಅಭಿಮಾನಿಗಳತ್ತ ಕೈ ಬೀಸಿ ಪ್ರಚಾರ ಭಾಷಣ ಮಾಡಿದ ಯಶ್, ‘ನನಗೆ ನಿಮ್ಮನ್ನು ನೋಡಿದರೆ ಖುಷಿಯಾಗುತ್ತದೆ. ಸಿಳ್ಳೆ, ಚಪ್ಪಾಳೆ ಕೇಳಿದರೆ ಸಂತೋಷವಾಗುತ್ತದೆ. ನೀವು ನನಗೆ ಬದುಕು ಕೊಟ್ಟಿದ್ದೀರಿ. ನಾನು ರಾಜಕಾರಣಿಯಾಗಿಲ್ಲ. ನನಗೆ ನಂಬಿಕೆ ಇರುವ ಜನರ ಪರ ನಾನು ಪ್ರಚಾರ ಮಾಡುತ್ತಿದ್ದೇನೆ’ ಎಂದರು.
‘ಶಿರಸಿ -ಸಿದ್ದಾಪುರ ಕ್ಷೇತ್ರ ವಿಶಿಷ್ಟವಾಗಿದೆ. ಇದನ್ನು ಅರಿತೇ ಇಲ್ಲಿಗೆ ಬಂದಿದ್ದೇನೆ. ಸಿದ್ದಾಪುರದಲ್ಲಿ ವರ್ಷದ ಹಿಂದೆ ಕೆರೆ ನಿರ್ಮಾಣ ಮಾಡಲಾಗಿತ್ತು. ಆ ಕೆರೆಯನ್ನು, ನಿಮ್ಮನ್ನು ನೋಡಿದಂತಾಗುತ್ತದೆ ಎಂಬ ಉದ್ದೇಶದಿಂದಲೇ ಬಂದೆ’ ಎಂದು ಹೇಳಿದರು.
ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳತ್ತ ಕೈ ಬೀಸಿದ ಚಿತ್ರ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು.
Comments are closed.