ಕರ್ನಾಟಕ

ಕಾಂಗ್ರೆಸ್‌-ಜೆಡಿಎಸ್‌ ಒಳ ಒಪ್ಪಂದ: ಆರೋಪ

Pinterest LinkedIn Tumblr


ರಾಜ್ಯದಲ್ಲಿ ಈ ಬಾರಿ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಬಿಜೆಪಿ, ಭರ್ಜರಿಯಾಗಿ ಪ್ರಚಾರ ನಡೆಸುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್‌ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದೆ. ಗದಗ, ತುಮಕೂರು, ಶಿವಮೊಗ್ಗ, ಮಂಗಳೂರಿನಲ್ಲಿ ಶನಿವಾರ ಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದರು. ಇದೇ ವೇಳೆ, ಮೈಸೂರು ಜಿಲ್ಲೆಯ ಹಲವೆಡೆ ಭರ್ಜರಿ ರೋಡ್‌ ಶೋ ನಡೆಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದರು. ಈ ಮಧ್ಯೆ, ಕೇಂದ್ರ ಸಚಿವೆ ಸ್ಮತಿ ಇರಾನಿ ಹರಿಹರದಲ್ಲಿ ರೋಡ್‌ ಶೋ ನಡೆಸಿದರೆ, ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರು ಸೇಡಂನಲ್ಲಿ ಬೃಹತ್‌ ಸಮಾವೇಶ ನಡೆಸಿ, ಮತದಾರರ ಒಲವು ಗಳಿಸಲು ಯತ್ನಿಸಿದರು.

ಶಿವಮೊಗ್ಗ/ತುಮಕೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ರಹಸ್ಯ ಒಪ್ಪಂದ ಮಾಡಿಕೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ನಗರದಲ್ಲಿ ಶನಿವಾರ ಪ್ರಚಾರ ಭಾಷಣ ಮಾಡಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ವಿರುದ್ಧ ಹರಿಹಾಯ್ದರು. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ರಹಸ್ಯ ಒಪ್ಪಂದ ಮಾಡಿಕೊಂಡಿವೆ. ಇದಕ್ಕೆ ಬಿಬಿಎಂಪಿಯಲ್ಲಿ ನಡೆದಿರುವ ಮೈತ್ರಿಯೇ ಸಾಕ್ಷಿ. ಅದೇ ರೀತಿಯಲ್ಲಿ ತುಮಕೂರು ಪಾಲಿಕೆಯಲ್ಲಿ ಕೂಡ ಕಾಂಗ್ರೆಸ್‌ನೊಂದಿಗೆ ಜೆಡಿಎಸ್‌ ಒಪ್ಪಂದ ಮಾಡಿಕೊಂಡಿದೆ ಎಂದರು.

ಎಲ್ಲಾ ಸಮೀಕ್ಷೆಗಳು ಜೆಡಿಎಸ್‌ ಮೂರನೇ ಸ್ಥಾನದಲ್ಲಿದೆ ಎಂದು ಹೇಳುತ್ತಿವೆ. ಆದರೂ, ಜೆಡಿಎಸ್‌ ಅಧಿಕಾರ ಹಿಡಿಯುವ ಹಗಲು ಕನಸು ಕಾಣುತ್ತಿದೆ ಎಂದು ಲೇವಡಿ ಮಾಡಿದರು. 2014ರ ಲೋಕಸಭಾ ಚುನಾವಣೆ ವೇಳೆ ನರೇಂದ್ರ ಮೋದಿ ಪ್ರಧಾನಿಯಾದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಎಚ್‌.ಡಿ. ದೇವೇಗೌಡರು ಹೇಳಿಕೆ ನೀಡಿದ್ದರು. ನಾನು ಪ್ರಧಾನಿಯಾದ ನಂತರ ದೇವೇಗೌಡರನ್ನು ಭೇಟಿಯಾಗಿ ನೀವು ಆತ್ಮಹತ್ಯೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ನೀವು ನೂರಾRಲ ಬದುಕಬೇಕು ಎಂದು ಕೇಳಿಕೊಂಡಿದ್ದೆ. ಆದರೆ, ಇಂದು ಅವರು ಬಿಜೆಪಿಯನ್ನು ಟೀಕಿಸುತ್ತಿದ್ದಾರೆ ಎಂದರು.ಬಳಿಕ ಶಿವಮೊಗ್ಗದಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್‌ ಮತ್ತು ಕರಪ್ಷನ್‌ ಎರಡೂ ಶಬ್ದಗಳ ಮೊದಲ ಅಕ್ಷರ “ಸಿ’ ಆಗಿದ್ದು, ಈ ಎರಡೂ ಪದಗಳ ನಡುವಿನ ಅಂತರವನ್ನು ಕಾಂಗ್ರೆಸ್‌ ನಾಯಕರು ಎನಿಸಿಕೊಂಡವರು ಕಡಿಮೆ ಮಾಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ಯಡಿಯೂರಪ್ಪನವರ ಹಿರಿತನ, ಹೋರಾಟದ ಬದುಕು ಗಮನಿಸದೆ ಕಾಂಗ್ರೆಸ್‌ನ ಚಿಕ್ಕಪುಟ್ಟ ನಾಯಕರೂ ವ್ಯಂಗ್ಯವಾಡಿ ಮಾತನಾಡುತ್ತಿದ್ದಾರೆ. ಅವರು ದಲಿತರು, ಬಡವರ ಮನೆಗಳಲ್ಲಿ ಉಳಿದುಕೊಳ್ಳುತ್ತಿರುವುದಕ್ಕೂ ತಮಾಷೆ ಮಾಡುತ್ತಿದ್ದಾರೆ. ಇದು ಯಡಿಯೂರಪ್ಪ ಅವರಿಗಲ್ಲ, ಬಡವರಿಗೆ ಮಾಡಿದ ಅವಮಾನ.
– ನರೇಂದ್ರ ಮೋದಿ, ಪ್ರಧಾನಿ

ಮೈಸೂರಲ್ಲಿ ಶಾ ಬೃಹತ್‌ ರೋಡ್‌ ಶೋ
ಮೈಸೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಶನಿವಾರ ಮೈಸೂರಿನ ವರುಣಾ, ಪಿರಿಯಾಪಟ್ಟಣ ಹಾಗೂ ತಿ.ನರಸೀಪುರಗಳಲ್ಲಿ ಬೃಹತ್‌ ರೋಡ್‌ ಶೋ ನಡೆಸಿ, ಬಿಜೆಪಿ ಪರ ಮತಯಾಚಿಸಿದರು. ಪಿರಿಯಾಪಟ್ಟಣದ ಮುಖ್ಯರಸ್ತೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಮಂಜುನಾಥ್‌ ಪರ ತೆರೆದ ವಾಹನದಲ್ಲಿ ರೋಡ್‌ ಶೋ ನಡೆಸಿದ ಶಾ, ಮತದಾರರು ಬಿಜೆಪಿಯನ್ನು ಬೆಂಬಲಿಸಿ ಮತ ಹಾಕಬೇಕು ಎಂದು ಮನವಿ ಮಾಡಿದರು. ಬಳಿಕ, ತಿ.ನರಸೀಪುರದ ತಿರಮಕೂಡಲಿನಿಂದ ವಿದ್ಯೋದಯ ಕಾಲೇಜು ವೃತ್ತದವರೆಗೆ ವರುಣಾ ಕ್ಷೇತ್ರದ ಅಭ್ಯರ್ಥಿ ತೋಟದಪ್ಪ ಬಸವರಾಜು ಹಾಗೂ ತಿ.ನರಸೀಪುರ ಕ್ಷೇತ್ರದ ಅಭ್ಯರ್ಥಿ ಎಸ್‌. ಶಂಕರ್‌ ಪರ ರೋಡ್‌ ಶೋ ನಡೆಸಿದರು.

ಬಿಜೆಪಿ ಬಂದ್ರೆ ಸಂದರ್ಶನ ಪದ್ಧತಿ ರದ್ದು
ಕಲಬುರಗಿ: ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ನಡೆಸಲಾಗುವ ಸಿಇಟಿ ಪರೀಕ್ಷೆ ಫಲಿತಾಂಶವೇ ಅಂತಿಮವಾಗಿದ್ದು, ತದನಂತರ ನಡೆಸಲಾಗುವ ಸಂದರ್ಶನ ಪದ್ಧತಿಯನ್ನು ಬಿಜೆಪಿ ಸರ್ಕಾರ ಬಂದರೆ ರದ್ದುಪಡಿಸಲಾಗುವುದು ಎಂದು ಕೇಂದ್ರ ಸಚಿವ ರಾಜನಾಥ್‌ಸಿಂಗ್‌ ಹೇಳಿದರು. ಸೇಡಂನಲ್ಲಿ ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ ಪರ ಮತಯಾಚಿಸಿದ ಅವರು, ಸಂದರ್ಶನದ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಸ್ಪರ್ಧಾತ್ಮಕ ಫಲಿತಾಂಶ ಪಟ್ಟಿ ಪ್ರಕಟಿಸಿ ಅದರ ಆಧಾರದ ಮೇಲೆ ನೇಮಕಾತಿ ಆದೇಶ ನೀಡಿದರೆ ಭ್ರಷ್ಟಾಚಾರಕ್ಕೆ ಅವಕಾಶ ಇರೋದಿಲ್ಲ ಎಂದು ಸ್ಪಷ್ಟಪಡಿಸಿದರು.

-Udayavani

Comments are closed.