ಕರ್ನಾಟಕ

ಮೋದಿ ಓರ್ವ ಮೋಸಗಾರ: ರಾಮ್ ಜೇಠ್ಮಲಾನಿ ಗುಡುಗು

Pinterest LinkedIn Tumblr

ಬೆಂಗಳೂರು: ‘ಮೋದಿ ಓರ್ವ ಮೋಸಗಾರ. ಜನರು ಈ ಮೋಸಗಾರನಿಗೆ ತಕ್ಕ ಪಾಠ ಕಲಿಸಬೇಕು. ಆತನಿಗೆ ಬುದ್ದಿ ಕಲಿಸಲು ನನ್ನ ಕೊನೆಯ ಉಸಿರು ಇರುವ ತನಕ ಹೋರಾಡುತ್ತೇನೆ’ ಎಂದು ಹಿರಿಯ ವಕೀಲರೂ ಆಗಿರುವ ಮಾಜಿ ಸಚಿವ ರಾಮ್ ಜೇಠ್ಮಲಾನಿ ಗುಡುಗಿದರು.

ಬೆಂಗಳೂರಿನ ಪ್ರಸ್‌ಕ್ಲಬ್‌ನಲ್ಲಿ ನಡೆದ ‘ಮಾತುಮಂಥನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮೋದಿಯನ್ನು ನಂಬಿ ಪ್ರಧಾನಿ ಮಾಡಿ ಎಂದು ಹೇಳಿ ಜೀವನದಲ್ಲಿ ದೊಡ್ಡ ತಪ್ಪು ಮಾಡಿ ಮೂರ್ಖನಾದೆ’ ಎಂದರು.

‘ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರುತ್ತೇನೆಂದು ಪ್ರಣಾಳಿಕೆಯಲ್ಲಿ ನನ್ನಿಂದ ಬರೆಯಿಸಿಕೊಂಡ ಜನ ಇಂದು ಅದರ ಕುರಿತು ಚಕಾರ ಎತ್ತುತ್ತಿಲ್ಲ. ಈ ಬಗ್ಗೆ ಅಮಿತ್‌ ಶಾ ಅವರಂಥವರು ಇದೊಂದು ನಗೆ ಚಾಟಿಕೆಯ ವಿಷಯ ಎಂದು ಉಡಾಫೆಯ ಮಾತುಗಳನ್ನಾಡುತ್ತಾರೆ. ಇಂಥವರಿಗೆ ಏನೆನ್ನಬೇಕು’ ಎಂದು ಪ್ರಶ್ನಿಸಿದರು.

‘ಕರ್ನಾಟಕದ ಜನರು ಈ ಚುನಾವಣೆಯಲ್ಲಿ ಮೋದಿಯ ಮೋಡಿ ಮಾತುಗಳಿಗೆ ಮರುಳಾಗಬಾರದು. ನಿಮಗಿಷ್ಟ ಬಂದವರಿಗೆ ಮತ ನೀಡಿ. ಆದರೆ ಮೋದಿಯಂಥ ಕುಕೃತ್ಯಗಾರನ ಮೋಸಗಳನ್ನು ಮರೆಯಬೇಡಿ’ ಎಂದು ಎಚ್ಚರಿಸಿದರು.

‘ನ್ಯಾಯಾಂಗದ ಭ್ರಷ್ಟಾಚಾರ ಹಾಗೂ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಕೆಲವು ಪ್ರಮುಖ ಪ್ರಕರಣಗಳಲ್ಲಿ ರಾಜಿಯಾಗುತ್ತಿದ್ದಾರೆ ಇದಕ್ಕೆ ಏನೆನ್ನುತ್ತೀರಿ?’ ಎಂಬ ಪ್ರಶ್ನೆಗೆ, ‘ನಾನು ಬಂದಿರುವುದು ಮೋದಿಯ ಮೋಸ ಕೃತ್ಯಗಳನ್ನು ಬಯಲಿಗೆಳಯುವುದಕ್ಕೆ. ಸುಪ್ರೀಂಕೋರ್ಟ್ ವಿಚಾರಗಳನ್ನು ಮಾತನಾಡಲು ಇದು ವೇದಿಕೆಯಲ್ಲ’ ಎಂದು ಸ್ಪಷ್ಟವಾಗಿ ನಿರಾಕರಿಸಿದರು.

ಇಂದಿನ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆ ಮುಖಪುಟದ ವರದಿಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ‘ಶೇ.37ರಷ್ಟು ಅಭ್ಯರ್ಥಿಗಳು ಅಪರಾಧಿಕ ಹಿನ್ನೆಲೆಯುಳ್ಳವರಾಗಿದ್ದಾರೆ. ಹಾಗಾಗಿ ಎಚ್ಚರದಿಂದಿರಬೇಕು. ಇದು ಬಿಜೆಪಿಯ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ’ ಎಂದರು.

‘ನಾನು ವಿದೇಶದಲ್ಲಿರುವ ಕಪ್ಪುಹಣವನ್ನು ತರಬೇಕೆಂದು ಸಾಕಷ್ಟು ಪ್ರಯತ್ನಿಸಿದ್ದೇನೆ. ನನ್ನ ಮನೆಗೆ ಬಂದು ಮೋದಿ, ನಾನು ಆ ಕೆಲಸ ಮಾಡುತ್ತೇನೆ ಎಂದಾಗ, ಅದನ್ನು ನಂಬಿ ನಾನು ಕೆಟ್ಟೆ. ಚುನಾವಣೆ ಪ್ರಣಾಳಿಕೆ ಸಿದ್ಧವಾಗುವುದಕ್ಕೂ ಮುನ್ನ ನನ್ನ ಮನೆಯ ಮುಂದೆ ಠಳಾಯಿಸುತ್ತಿದ್ದ ಇವರು, ಇಂದು ಮೌನಕ್ಕೆ ಜಾರಿದ್ದಾರೆ. ಕೊಟ್ಟ ಮಾತಿಗೆ ತಪ್ಪಿ ಇಡೀ ದೇಶವನ್ನು ಮೋಸಗೊಳಿಸಿದ್ದಾರೆ. ಮೋದಿ ವಿರುದ್ಧ ದಿಟ್ಟತನದಿಂದ ಹೋರಾಡುವ ಏಕೈಕ ಹೋರಾಟಗಾರನಿದ್ದರೆ ಅದು ಜೇಠ್ಮಲಾನಿ ಮಾತ್ರ. ನಾನೀಗಾಗಲೇ ವಕೀಲಿ ವೃತ್ತಿಯಿಂದ ನಿವೃತ್ತನಾಗಿದ್ದೇನೆ. ಬೇರಾವ ಕೆಲಸವೂ ಇಲ್ಲ. ಮೋದಿಯ ಮೋಸವನ್ನು ಜನರಿಗೆ ತಿಳಿಸುವುದೇ ನನ್ನ ಕೆಲಸ. ಈ ಮೋಸಗಾರನನ್ನು ಶಿಕ್ಷಿಸಲೇಬೇಕು. ಮೋದಿ ತೊಲಗಲೇಬೇಕು’ ಎಂದು ರೊಚ್ಚಿಗೆದ್ದು ನುಡಿದರು.

ಇದೇ ವೇಳೆ ಅವರು ಮೋದಿ ವಿರುದ್ಧ ಸಿದ್ಧಪಡಿಸಿರುವ ದೋಷಾರೋಪ ಪಟ್ಟಿಯನ್ನೂ ಪತ್ರಕರ್ತರಿಗೆ ನೀಡಿದರು.

Comments are closed.