ತುಮಕೂರು: ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯದ ಜನತೆಗೆ ಕೃತಜ್ಞತೆ ಹೇಳ ಬಯಸುತ್ತಿದೆ. 223 ಕ್ಷೇತ್ರದಲ್ಲೂ ಸ್ಪರ್ಧೆ ಮಾಡಿದ್ದೆವು. ಇಷ್ಟೂ ಕ್ಷೇತ್ರಗಳ ಜನರು ನಮಗೆ ಸ್ಪಂದಿಸಿದ್ದಾರೆ. ಹೀಗಾಗಿ ಜನರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಹೇಳಿದ್ದಾರೆ.
‘ಐದು ವರ್ಷಗಳಲ್ಲಿ ಜನಪರ ಕಾರ್ಯಕ್ರಮಗಳನ್ನು ನೀಡಿದ್ದೇವೆ, ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಕೈಗೆತ್ತಿಕೊಂಡಿದ್ದೇವೆ. ಈ ಕೆಲಸ ಪೂರ್ಣಗೊಳ್ಳ ಬೇಕೆಂದರೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ ದೃಷ್ಟಿಯಿಂದ ಹಾಗೂ ಬೆಂಬಲಿಗರ ದೃಷ್ಡಿಯಿಂದ ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಗಳಂತಹ ಜನಪ್ರಿಯ ಯೋಜನೆಗಳು ಮುಂದುವರೆಯಬೇಕು. ನನಗೆ ವಿಶ್ವಾಸವಿದೆ, ರಾಜ್ಯದ ಜನ ಮತ್ತೊಮ್ಮೆ ಬೆಂಬಲ ನೀಡಿದ್ದಾರೆ; ಮತ್ತೆ ಅಧಿಕಾರಕ್ಕೆ ಬರುತ್ತೇವೆ’ ಎಂದು ಅವರು ನುಡಿದರು.
ಪ್ರತಿಯೊಂದು ಮಾಧ್ಯಮದ ಸಮೀಕ್ಷೆಗಳೂ ನಮಗೆ ಎರಡನೇ ಸ್ಥಾನಕ್ಕೆ ನೀಡಿಲ್ಲ, ಹೀಗಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ನಮ್ಮದೇ ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ಬರುತ್ತೇವೆ. ಕಳೆದ ಬಾರಿಯೂ ನಾನೇ ಅಧ್ಯಕ್ಷನಾಗಿದ್ದೆ ಆಗಲೂ ಹೇಳಿದ್ದೆ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದೆ. ಈ ಬಾರಿಯೂ ಕಾಂಗ್ರೆಸ್ ಗೆ ಜನ ಬೆಂಬಲ ನೀಡ್ತಾರೆ ಎಂದು ಪರಮೇಶ್ವರ್ ಹೇಳಿದರು.
ಐದು ವರ್ಷಗಳಿಂದ ಪಕ್ಷ ಸಂಘಟನೆ ಮಾಡಿದ್ದೇವೆ, ವ್ಯವಸ್ಥಿತವಾಗಿ ಚುನಾವಣೆ ಎದುರಿಸಿದ್ದೇವೆ. ನಾವು ಖಂಡಿತವಾಗಿ 120 ಸೀಟುಗಳನ್ನು ದಾಟುತ್ತೇವೆ.
ರಾಹುಲ್ ಗಾಂಧಿ ಒಂದು ಕಡೆ, ಬಿಜೆಪಿಯ ಅಧ್ಯಕ್ಷ ಅಮಿತ್ ಷಾ ಬಂದರು. ರಾಹುಲ್ ಗಾಂಧಿ ನಾಲ್ಕು ಹಂತದಲ್ಲಿ ಪ್ರವಾಸ ಮಾಡಿದರು. ನಾವು ಏನು ಮಾಡಿದ್ದೇವೆ, ಏನು ಮಾಡುತ್ತೇವೆ ಎಂದು ಸಮರ್ಥವಾಗಿ ಹೇಳಿದರು. ಪ್ರಧಾನ ಮಂತ್ರಿಗಳ ಭರವಸೆಗಳನ್ನು ಈಡೇರಿಸಲಿಲ್ಲ ಅನ್ನೋದನ್ನು ಮಾತನಾಡಿದರು ಎಂದು ಪರಮೇಶ್ವರ್ ತಿಳಿಸಿದರು.
ಅಮಿತ್ ಶಾ ಸರ್ಕಾರದ ಮೇಲೆ ಆಪಾದನೆ ಮಾಡಿದರು. ಅವರ ಆಪಾದನೆಗೆ ಯಾವುದೇ ಸಾಕ್ಷ್ಯವಿಲ್ಲದೆ ಮಾತನಾಡಿದರು. ಕೆಲವೆಡೆ ಸಿಎಂ ಸಿದ್ದರಾಮಯ್ಯ ಬಗ್ಗೆ ವೈಯಕ್ತಿಕ ಟೀಕೆ ಮಾಡಿದರು. ಪ್ರಧಾನಿಗಳು ಕೂಡ ವೈಯಕ್ತಿಕ ಟೀಕೆ ಮಾಡಿದರು. ಸರಕಾರದ ಭ್ರಷ್ಟಚಾರದ ಬಗ್ಗೆ ಮಾತನಾಡಬೇಕಾದರೆ ಪುರಾವೆಗಳಿದ್ದರೆ ನೀಡಿ ಎಂದು ಹೇಳಿದೆವು. 10 ಪರ್ಸೆಂಟ್ ಸರಕಾರ ಎಂದು ಹೇಳಿದರು. ಅವರ ಬಳಿ ಮಾಹಿತಿಯಿದ್ದರೆ ಸಾಕ್ಷ ಸಮೇತ ಬಗ್ಗೆ ಸಾಬೀತು ಪಡಿಸಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರು ದೂರಿದರು.
ಪರಮೇಶ್ವರ್ ಹೇಳಿದ್ದಿಷ್ಟು:
2013 ರಲ್ಲಿ ಭ್ರಷ್ಟಚಾರದ ಬಗ್ಗೆ ಮಾತನಾಡಿದ್ದೇವೆ, ಈ ಬಾರಿ ಚುನಾವಣೆಯಲ್ಲಿ ನಮ್ಮ ಆಡಳಿತದ ವೈಖರಿ ಅಂಶಗಳನ್ನು ಚುನಾವಣೆಗೆ ಬಳಸಿಕೊಂಡಿದ್ದೇವೆ.
ಬಿಜೆಪಿ, ಜೆಡಿಎಸ್ ಪಕ್ಷಗಳು ನಿರ್ದಿಷ್ಟ ಅಂಶಗಳನ್ನಿಟ್ಟುಕೊಂಡು ಸ್ಪರ್ಧಿಸಲಿಲ್ಲ.
ಮೊದಲು ಅಭಿವೃದ್ದಿಯಲ್ಲಿ ನಾವು 13 ಸ್ಥಾನದಲ್ಲಿದ್ದೆವು ಈಗ 1 ನೇ ಸ್ಥಾನದಲ್ಲಿದ್ದೇವೆ.
ಹೂಡಿಕೆಯಲ್ಲಿ ರಾಜ್ಯ ಸರ್ಕಾರ ನಂಬರ್ 1 ಸ್ಥಾನ ಪಡೆದಿದ್ದೇವೆ, ಇದನ್ನು ಕೇಂದ್ರ ಸರಕಾರವೇ ಹೇಳಿದೆ. ಇದನ್ನು ಮುಂದುವರೆಸುವುದು ಬೇಡವೆ ಎಂದು ಜನರ ಮುಂದೆ ಹೇಳಿದೆವು
ನಾವು ವೈಯಕ್ತಿಕವಾಗಿ ಯಾರ ಮೇಲೂ ದಾಳಿ ಮಾಡಲಿಲ್ಲ, ಹೊಸದಾಗಿ ಚುನಾವಣೆ ಎದುರಿಸಿದ್ದೇವೆ.
ಮುಖ್ಯಮಂತ್ರಿ ಸ್ಥಾನ ಈಗ ಅಪ್ರಸ್ತುತ. ಬಹುಮತ ಬಂದ ಮೇಲೆ ಶಾಸಕಾಂಗ ಪಕ್ಷದ ಸಭೆ ಕರೆದು ಸಿಎಂ ಅಭ್ಯರ್ಥಿಯನ್ನು ನಿರ್ಧಾರ ಮಾಡುತ್ತೇವೆ.
ಸಿದ್ದರಾಮಯ್ಯ ಸಿಎಂ ಆದರೆ ನನ್ನದೇನು ತಕರಾರಿಲ್ಲ. ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರುವುದಿಲ್ಲ, ಹೀಗಾಗಿ ಯಾರೊಂದಿಗೂ ಮೈತ್ರಿ ಪ್ರಶ್ನೆ ಅಪ್ರಸ್ತುತ
ರಾಷ್ಟ್ರದಲ್ಲಿ ರಾಹುಲ್ ಗಾಂಧಿ ಪ್ರಬಲ ನಿಲುವು ತೆಗೆದುಕೊಳ್ಳಲು ಈ ಫಲಿತಾಂಶ ನೆರವಾಗಲಿದೆ.
ಮೋದಿ, ಅಮಿತ್ ಶಾ ಹವಾ ಯಾವುದು ಇರಲಿಲ್ಲ,
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವನ್ನು ನಾವು ಲಾಭ ನಷ್ಟದ ದೃಷ್ಡಿಯಲ್ಲಿ ನೋಡಿಲ್ಲ.
Comments are closed.