ಕರ್ನಾಟಕ

ವಿಧಾನಪರಿಷತ್ ಚುನಾವಣೆ: ಬಿಜೆಪಿ 5, ಕಾಂಗ್ರೆಸ್‌ 4, ಜೆಡಿಎಸ್‌ನ ಇಬ್ಬರಿಂದ ನಾಮಪತ್ರ

Pinterest LinkedIn Tumblr

00
ಬೆಂಗಳೂರು : ರಾಜ್ಯ ವಿಧಾನ ಪರಿಷತ್ತಿನ ಒಟ್ಟು 11 ಸ್ಥಾನಗಳಿಗೆ ವಿಧಾನಸಭೆಯಿಂದ ನಡೆಯಲಿರುವ ದ್ವೈವಾರ್ಷಿಕ ಚುನಾವಣೆಗೆ ಬಿಜೆಪಿಯಿಂದ ಐವರು, ಕಾಂಗ್ರೆಸ್‌ನಿಂದ ನಾಲ್ವರು ಹಾಗೂ ಜೆಡಿಎಸ್‌ನ ಇಬ್ಬರು ಅಭ್ಯರ್ಥಿಗಳು ಗುರುವಾರ ನಾಮಪತ್ರ ಸಲ್ಲಿಸಿದರು. ಕೊನೇ ದಿನವಾಗಿದ್ದ ಬುಧವಾರ 11 ಮಂದಿ ಮಾತ್ರವೇ ಉಮೇದುವಾರಿಕೆ ಸಲ್ಲಿಸಿದ್ದು, ನಾಮಪತ್ರ ಹಿಂಪಡೆಯಲು ಕೊನೇ ದಿನವಾದ ಸೋಮವಾರ (ಜೂ.4) ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ.

ವಿಧಾನಸಭೆ ಸಂಖ್ಯಾಬಲ ಆಧರಿಸಿ ಆಯಾ ಪಕ್ಷಗಳು ಸದಸ್ಯರನ್ನು ಮೇಲ್ಮನೆಗೆ ಆರಿಸಿ ಕಳಿಸಲು ಅವಕಾಶವಿದ್ದು, ಚುನಾವಣೆ ನಡೆಯಬೇಕಿದ್ದ ಹನ್ನೊಂದು ಸ್ಥಾನಗಳಿಗೆ ಅಷ್ಟೇ ಸಂಖ್ಯೆಯ ನಾಮಪತ್ರಗಳು ಸಲ್ಲಿಕೆಯಾದವು. ಜೂ.1 ಶುಕ್ರವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಜೂ.4 ನಾಮಪತ್ರ ಹಿಂಪಡೆಯಲು ಕೊನೇ ಅವಕಾಶ. ಎಲ್ಲ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿರುವ ಹಿನ್ನೆಲೆಯಲ್ಲಿ ಜೂ.11 ರಂದು ನಿಗದಿಯಾಗಿರುವ ಚುನಾವಣೆ ನಡೆಯುವುದಿಲ್ಲ.

ಬಿಜೆಪಿಯಿಂದ ಎಸ್‌.ರುದ್ರೇಗೌಡ, ಕೆ.ಪಿ.ನಂಜುಂಡಿ, ಎನ್‌.ರವಿಕುಮಾರ, ತೇಜಸ್ವಿನಿಗೌಡ ಹಾಗೂ ರಘುನಾಥ್‌ ಮಲ್ಕಾಪುರೆ ಅವರು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ವಿದಾನಸೌಧಕ್ಕೆ ಆಗಮಿಸಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.ಕೇಂದ್ರ ಸಚಿವ ಅನಂತಕುಮಾರ್‌ ಉಪಸ್ಥಿತರಿದ್ದರು.

ಕಾಂಗ್ರೆಸ್‌ನಿಂದ ಹಾಲಿ ಸದಸ್ಯರಾದ ಸಿ.ಎಂ.ಇಬ್ರಾಹಿಂ ಮತ್ತು ಕೆ. ಗೋವಿಂದರಾಜ್‌, ಹರೀಶ್‌ ಕುಮಾರ್‌ ಹಾಗೂ ಅರವಿಂದ ಕುಮಾರ್‌ ಅರಳಿ ಅವರು ನಾಮಪತ್ರ ಸಲ್ಲಿಸಿದರು. ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಾ.ಜಿ.ಪರಮೇಶ್ವರ್‌ ಮತ್ತಿತರರಿದ್ದರು.

ಬದಲಾದ ಜೆಡಿಎಸ್‌ ಅಭ್ಯರ್ಥಿ

ಜೆಡಿಎಸ್‌ ತನ್ನ ಅಭ್ಯರ್ಥಿಗಳಾಗಿ ಬಿ.ಎಂ.ಫಾರೂಕ್‌ ಹಾಗೂ ಡಾ.ಎಸ್‌.ಸುಬ್ರಹ್ಮಣ್ಯ ಹೆಸರುಗಳನ್ನು ಪ್ರಕಟಿಸಿತ್ತು. ಆದರೆ, ಕೊನೇ ಕ್ಷಣದಲ್ಲಿ ಡಾ.ಸುಬ್ರಹ್ಮಣ್ಯ ಬದಲಿಗೆ, ಮಾಜಿ ಶಾಸಕ ಎಸ್‌.ಎಲ್‌. ಧರ್ಮೇಗೌಡ ಅವರನ್ನು ಅಭ್ಯರ್ಥಿಯಾಗಿಸಲಾಯಿತು.ಮಾಜಿ ಸಚಿವರಾದ ಎಚ್‌.ಡಿ.ರೇವಣ್ಣ ,ಬಂಡೆಪ್ಪ ಕಾಶಂಪುರ ಹಾಗೂ ಎಚ್‌.ವಿಶ್ವನಾಥ್‌ ಅವರೊಟ್ಟಿಗೆ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಸಿಎಂ ಕುಮಾರಸ್ವಾಮಿ ಅವರು ಡಾ.ಎಸ್‌. ಸುಬ್ರಹ್ಮಣ್ಯ ಅವರನ್ನು ಸಲಹೆಗಾರರಾಗಿ ನೇಮಕ ಮಾಡಿಕೊಳ್ಳಲು ಅಥವಾ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ದಿಲ್ಲಿಯಲ್ಲಿ ರಾಜ್ಯ ಸರಕಾರದ ವಿಶೇಷ ಪ್ರತಿನಿಧಿಯಾಗಿ ನೇಮಕ ಮಾಡಲು ಬಯಸಿದ್ದಾರೆ. ಈ ಕಾರಣಕ್ಕೆ ಧರ್ಮೇಗೌಡ ಅವರಿಗೆ ಅದೃಷ್ಟ ಒಲಿದು ಬಂತು.

ಬಿಜೆಪಿ, ಕಾಂಗ್ರೆಸ್‌ನಲ್ಲಿ ಅತೃಪ್ತಿ

ಮೇಲ್ಮನೆಯಲ್ಲಿ ಪ್ರತಿಪಕ್ಷ ನಾಯಕರಾಗುವ ಕನಸು ಹೊತ್ತಿದ್ದ ಬಿಜೆಪಿಯ ಬಿ.ಜೆ.ಪುಟ್ಟಸ್ವಾಮಿ ಅವರಿಗೆ ನಿರಾಶೆಯಾಗಿದ್ದು, ತಮಗೆ ಮರು ಆಯ್ಕೆ ಅವಕಾಶ ಸಿಗದಿದ್ದಕ್ಕೆ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಅಸಮಾಧಾನಗೊಂಡಿದ್ದಾರೆ. ತಮ್ಮ ಆಪ್ತರಾದ ಭಾನುಪ್ರಕಾಶ್‌ ಅವರನ್ನು ಮರು ಆಯ್ಕೆ ಮಾಡುವ ಆಸೆ ಕೈಗೂಡದಿರುವುದು ಕೆ.ಎಸ್‌.ಈಶ್ವರಪ್ಪ ಅವರಲ್ಲಿ ಅತೃಪ್ತಿ ಮೂಡಿಸಿದೆ ಎನ್ನಲಾಗಿದೆ. ದಲಿತ ಕೋಟಾದಲ್ಲಿ ಮತ್ತೊಮ್ಮೆ ಅವಕಾಶ ಸಿಗುವ ಭರವಸೆಯಲ್ಲಿದ್ದ ಡಿ.ಎಸ್‌.ವೀರಯ್ಯ ಅವರಿಗೂ ನಿರಾಶೆಯಾಗಿದೆ.

ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ನ ಮಾಜಿ ಸಚಿವ ಎಂ.ಆರ್‌.ಸೀತಾರಾಂ ಹಾಗೂ ಮೋಟಮ್ಮ ನಿರಾಶೆಗೊಂಡಿದ್ದಾರೆ. ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿ ಪರಾಭವಗೊಂಡಿದ್ದ ಮೋಟಮ್ಮ ಅವರಿಗೆ ಮೇಲ್ಮನೆಯಲ್ಲೂ ಮರು ಅವಕಾಶ ಸಿಕ್ಕಿಲ್ಲ. ಕಾಂಗ್ರೆಸ್‌ನಲ್ಲಿ ಲಿಂಗಾಯತ, ಮಹಿಳೆ ಹಾಗೂ ಕುರುಬ ಸಮಾಜಕ್ಕೆ ಅವಕಾಶ ಸಿಕ್ಕಿಲ್ಲ ಎಂಬ ಅಸಮಾಧಾನ ಹೆಚ್ಚಿದೆ. ಒಕ್ಕಲಿಗ ಕೋಟಾದಲ್ಲಿ ಕೆ.ಗೋವಿಂದರಾಜ್‌ ಅವರಿಗೆ ಅವಕಾಶ ಸಿಕ್ಕಿದ್ದರೂ, ಈ ಮರು ಆಯ್ಕೆಗೆ ಪಕ್ಷದಲ್ಲೇ ಅಸಮಧಾನವಿದೆ ಮತ್ತು ಒಕ್ಕಲಿಗ ಸಮುದಾಯದಿಂದ ಬೇರೊಬ್ಬರಿಗೆ ಅವಕಾಶ ಕೊಡಬಹುದಿತ್ತು ಎಂಬ ಅಭಿಪ್ರಾಯ ಕಾಂಗ್ರೆಸ್‌ ವಲಯದಲ್ಲಿ ಕೇಳಿಬರುತ್ತಿದೆ.

ಆಪ್ತ ವಿನಯ್‌ ಕಾರ್ತಿಕ್‌ಗೆ ಮೇಲ್ಮನೆಯಲ್ಲಿ ಅವಕಾಶ ಕೊಡಿಸುವ ಆಸೆ ಕೈಗೂಡದಿರುವುದು ಡಿ.ಕೆ.ಶಿವಕುಮಾರ್‌ಗೆ ಬೇಸರ ತಂದಿದ್ದರೆ, ಮಾಜಿ ಮೇಯರ್‌ ಎಂ.ರಾಮಚಂದ್ರಪ್ಪ ಅವರಿಗೆ ಅವಕಾಶ ದೊರಕಿಸಿಕೊಡುವ ಸಿದ್ದರಾಮಯ್ಯ ಪ್ರಯತ್ನವೂ ಫಲ ನೀಡಿಲ್ಲ.

ಅಭಿನಂದನೆ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಹಾಗೂ ಬಿಲ್ಲವ ಸಮಾಜಕ್ಕೆ ಸೇರಿದ ಕಾಂಗ್ರೆಸ್‌ನ ಕೆ.ಹರೀಶ್‌ ಕುಮಾರ್‌ ಅವರಿಗೆ ಪಕ್ಷ ಮೇಲ್ಮನೆಗೆ ಅವಕಾಶ ನೀಡಿದ್ದಕ್ಕಾಗಿ ಬೆಂಗಳೂರು ಬಿಲ್ಲವ ಅಸೋಸಿಯೇಷನ್‌ ಅಧ್ಯಕ್ಷ ಎಂ.ವೇದಕುಮಾರ್‌ ನೇತೃತ್ವದ ಪದಾಧಿಕಾರಿಗಳು ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದು ಅಭಿನಂದಿಸಿದರು. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಯಾರೊಬ್ಬರೂ ಬಿಲ್ಲವ ಇಲ್ಲವೇ ಈಡಿಗ ಸಮುದಾಯಕ್ಕೆ ಸೇರಿದ ಶಾಸಕರು ಆಯ್ಕೆಯಾಗದ ಹಿನ್ನೆಲೆಯಲ್ಲಿ ಬಿಲ್ಲವ ಸಮಾಜಕ್ಕೆ ಸೇರಿದ ಹರೀಶ್‌ಕುಮಾರ್‌ ಅವರಿಗೆ ಅವಕಾಶ ಕಲ್ಪಿಸಲಾಗಿದೆ.

Comments are closed.